ನವದೆಹಲಿ: ಮಹಾಮಾರಿ ಕರೊನಾ ವಿರುದ್ಧ ಹೋರಾಡಲು ಪಕ್ಷಾತೀತವಾಗಿ ಸಲಹೆಗಳನ್ನು ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರ ಕೋರಿಕೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸ್ಪಂದಿಸಿದ್ದು, 5 ನಿರ್ದಿಷ್ಟ ಸಲಹೆಗಳನ್ನು ನೀಡಿದ್ದಾರೆ.
ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆದಿರುವ ಸೋನಿಯಾ ಗಾಂಧಿ, ಸಂಸದರ ಶೇ 30ರಷ್ಟು ಸಂಬಳ ಕಡಿತಗೊಳಿಸುವ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದಾರೆ. ಅಲ್ಲದೆ, ಸರ್ಕಾರದ ವೆಚ್ಚಗಳಿಗೆ ಕಡಿವಾಣ ಹಾಕುವಂತೆ ಸಲಹೆ ಕೊಟ್ಟಿದ್ದಾರೆ.
ಸ್ವಯಂ ಭೋಗವನ್ನು ಬದಿಗೊತ್ತಿ ದೆಹಲಿ ಹೃದಯಭಾಗದ ಸುಂದರೀಕರಣಕ್ಕಾಗಿ 20 ಸಾವಿರ ಕೋಟಿ ರೂ. ವೆಚ್ಚದ “ಸೆಂಟ್ರಲ್ ವಿಸ್ತಾ” ಯೋಜನೆಯನ್ನು ರದ್ದು ಮಾಡಿ. ಹೀಗಿರುವ ಐತಿಹಾಸಿಕ ಕಟ್ಟಡಗಳಲ್ಲೇ ಸಂಸತ್ತು ನೆಮ್ಮದಿಯಾಗಿ ಕಾರ್ಯನಿರ್ವಹಿಸಲಿದೆ ಎಂಬುದನ್ನು ಖಚಿತಪಡಿಸುತ್ತೇನೆ. ಸೆಂಟ್ರಲ್ ವಿಸ್ತಾ ಯೋಜನೆಗೆ ನಿಗದಿಯಾಗಿದ್ದ ಹಣವನ್ನು ಹೊಸ ಆಸ್ಪತ್ರೆಗಳ ಮೂಲಸೌಕರ್ಯ ನಿರ್ಮಾಣ, ರೋಗನಿರ್ಣಯ ಕೇಂದ್ರಗಳು ಹಾಗೂ ಕರೊನಾ ವಿರುದ್ಧ ಮುಂಚೂಣಿಯಲ್ಲಿ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಉತ್ತಮ ಸಾಧನಗಳನ್ನು ನೀಡಲು ಬಳಸಿಕೊಳ್ಳುವಂತೆ ತಿಳಿಸಿದ್ದಾರೆ.
ಸಂಸದರ ಸಂಬಳ ಕಡಿತದ ಬಗ್ಗೆ ಉಲ್ಲೇಖಿಸಿ ಸರ್ಕಾರವೂ ಕೂಡ ತನ್ನದೇ ಖರ್ಚಿನಲ್ಲಿ ಶೇ 30 ರಷ್ಟನ್ನು ಸರಿ ಪ್ರಮಾಣದಲ್ಲಿ ಕಡಿತಗೊಳಿಸಿ, ಅದರ ನಿಧಿಯನ್ನು ವಲಸಿಗ ಕಾರ್ಮಿಕರು ಮತ್ತು ಇತರೆ ಅಸಂಘಟಿತ ವಲಯಗಳಿಗೆ ಬಳಸಿಕೊಳ್ಳಿ ಎಂದಿದ್ದಾರೆ.
ಎಲ್ಲ ವಿದೇಶ ಪ್ರಯಾಣಕ್ಕೂ ಅಲ್ಪ ವಿರಾಮ ಇಡಿ (ಕಳೆದ ವರ್ಷಗಳಲ್ಲಿ ಪ್ರಧಾನಮಂತ್ರಿ ಮತ್ತು ಸಚಿವ ಸಂಪುಟದ ವಿದೇಶ ಪ್ರಯಾಣಕ್ಕೆ 393 ಕೋಟಿ ರೂ. ವೆಚ್ಚ) ಅದನ್ನೇ ಕರೊನಾ ವಿರುದ್ಧದ ಹೋರಾಟಕ್ಕೆ ವಿನಿಯೋಗಿಸಿಕೊಳ್ಳಲು ಸೂಚಿಸಿದ್ದಾರೆ.
ಟಿವಿ, ಮುದ್ರಣ ಮತ್ತು ಆನ್ಲೈನ್ ಮಿಡೀಯಾಗಳ ಸರ್ಕಾರಿ ಜಾಹಿರಾತುಗಳನ್ನು(ಕರೊನಾ ಸಂಬಂಧಿತ ಜಾಹಿರಾತು ಹೊರತುಪಡಿಸಿ) ಮುಂದಿನ ಎರಡು ವರ್ಷಗಳವರೆಗೆ ತಡೆಹಿಡಿಯಲು ತಿಳಿಸಿದ್ದಾರೆ.
ಕೊನೆಯದಾಗಿ ಪಿಎಂ ಕೇರ್ಸ್ನಲ್ಲಿರುವ ನಿಧಿಯನ್ನು ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ ಪಾರದರ್ಶಕತೆ, ಹೊಣೆಗಾರಿಕೆ, ಲೆಕ್ಕಪರಿಶೋಧನೆ ಮತ್ತು ದಕ್ಷತೆ ಖಚಿತಪಡಿಸಿಕೊಳ್ಳಲು ವರ್ಗಾಯಿಸಿ ಎಂದು ಸಲಹೆ ನೀಡಿದ್ದಾರೆ. (ಏಜೆನ್ಸೀಸ್)
Congress President and CPP Chairperson Smt. Sonia Gandhi writes to PM Modi suggesting various measures to fight the COVID-19 pandemic. pic.twitter.com/77MzCYiokl
— Congress (@INCIndia) April 7, 2020
ಎಲ್ಲ ಮುಸ್ಲಿಮರನ್ನೂ ತಬ್ಲಿಘಿ ಜಮಾತ್ ಕಾರ್ಯಕರ್ತರಿಗೆ ಹೋಲಿಸುವುದು ಸರಿಯಲ್ಲ: ಆರೆಸ್ಸೆಸ್