ಮಂಡಿ: ಹಿಮಾಚಲ ಪ್ರದೇಶದಲ್ಲಿ ಚುನಾವಣಾ ಸಮರ ಇನ್ನೇನು ಶುರುವಾಗಲಿದ್ದು ಪ್ರಧಾನಿ ಮೋದಿ ಪ್ರಚಾರಕ್ಕೆ ಇಳಿದಿದ್ದಾರೆ. ಮಂಡಿ ಪ್ರದೇಶದಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ ಕಾಂಗ್ರೆಸ್ ದೇಶದ ಸುರಕ್ಷೆ ಮತ್ತು ಅಭಿವೃದ್ಧಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಹಿಮಾಚಲ ಪ್ರದೇಶದಲ್ಲಿ ನಡೆದ ಮೊದಲ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ ‘ಕಾಂಗ್ರೆಸ್ ಸಮಯದಲ್ಲಿ ನಡೆದ ಶಸ್ತ್ರಾಸ್ತ್ರ ವ್ಯಾಪಾರದಲ್ಲಿ ಯಾವಾಗಲೂ ಕಮಿಷನ್ ಪಡೆಯುತ್ತಿದ್ದರು. ಇದರಿಂದಾಗಿ ಸೇನಾ ಪಡೆಗಳಿಗೆ ಆಯುಧಗಳು ಬೇಕಾದಾಗ ತಲುಪುತ್ತಿರಲಿಲ್ಲ’ ಎಂದು ಆರೋಪಿಸಿದರು.
‘ಸ್ವಾತಂತ್ರ್ಯ ಸಿಕ್ಕಿದ ನಂತರ ಕಾಂಗ್ರೆಸ್ ನಡೆಸಿದ ಹಗರಣ ಸುರಕ್ಷಾ ಕ್ಷೇತ್ರದಲ್ಲೇ ಆಗಿತ್ತು. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗೆಲ್ಲ ಡಿಫೆನ್ಸ್ ಡೀಲ್ಗಳಲ್ಲಿ ಬೇಕಾದಷ್ಟು ಬ್ರೋಕರೇಜ್ ಪಡೆದುಕೊಂಡಿದೆ’ ಎಂದು ಭಾಷಣದಲ್ಲಿ ವಾಗ್ದಾಳಿ ನಡೆಸಿದರು.
ಹಿಮಾಚಲದಲ್ಲಿ ನವೆಂಬರ್ ಹನ್ನೆರಡರಿಂದ ಚುನಾವಣೆ ಪ್ರಾರಂಭ ಆಗಲಿದೆ. ಮತ ಎಣಿಕೆ ಡಿಸೆಂಬರ್ ಎಂಟಕ್ಕೆ ಶುರುವಾಗಲಿದೆ. ಚುನಾವಣೆಗೆ ಇನ್ನೊಂದು ವಾರವೇ ಬಾಕಿ ಇದ್ದು ಹಿಮಾಚಲದಲ್ಲಿ ಭರ್ಜರಿ ಪ್ರಚಾರ ನಡೆಯುತ್ತಿದೆ. (ಏಜೆನ್ಸೀಸ್)