ಬೆಳಗಾವಿ: ಕರೊನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸುವ ನಿಟ್ಟಿನಲ್ಲಿ ಉದ್ಯಮಿ ಬಿ.ಟಿ.ಪಾಟೀಲ ಪ್ರಧಾನಮಂತ್ರಿ ತುರ್ತು ಪರಿಸ್ಥಿತಿ ಹಾಗೂ ನಾಗರಿಕ ಸಹಾಯಕ ಪರಿಹಾರ ನಿಧಿಗೆ 1 ಕೋಟಿ ರೂ.ದೇಣಿಗೆ ನೀಡುವ ಮೂಲಕ ಉಳ್ಳವರಿಗೆ ಮಾದರಿಯಾಗಿದ್ದಾರೆ.
ಇತ್ತೀಚೆಗೆ ಬೆಳಗಾವಿ ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಅವರಿಗೆ 1 ಕೋಟಿ ರೂ. ಮೌಲ್ಯದ ಚೆಕ್ ಹಸ್ತಾಂತರಿಸಿ ಮಾತನಾಡಿದ ಅವರು, ಪಿಎಂ ನಿಧಿಗೆ ದೇಣಿಗೆ ನೀಡುವ ಮೂಲಕ ವಿಪತ್ತು ನಿರ್ವಹಣಾ ಸಾಮರ್ಥ್ಯಗಳಲ್ಲಿ ಕೇಂದ್ರ ಮತ್ತು ರಾಜ್ಯವನ್ನು ಬಲಪಡಿಸುವುದು ಮುಖ್ಯ ಉದ್ದೇಶವಾಗಿದೆ ಎಂದರು. ಇಂದು ದೇಶ ಹಾಗೂ ಜನರು ಗಂಡಾಂತರದಲ್ಲಿದ್ದಾರೆ. ಜನರ ಸಂಕಷ್ಟವನ್ನು ಸರ್ಕಾರವೇ ನಿಭಾಯಿಸಲು ಸಾಧ್ಯವಿಲ್ಲ. ಎಲ್ಲರಿಗೂ ಸಾಮಾಜಿಕ ಜವಾಬ್ದಾರಿ ಇದೆ. ಇದನ್ನು ಮನಗಂಡು ಪ್ರಧಾನಮಂತ್ರಿಯವರ ಕರೊನಾ ಪರಿಹಾರ ನಿಧಿಗೆ ಒಂದು ಕೋಟಿ ರೂ. ಸಹಾಯ ನೀಡಿದ್ದೇನೆ. ಸಂಕಷ್ಟದಲ್ಲಿರುವವರಿಗೆ ನೆರವಿನ ಹಸ್ತ ಚಾಚಿ ಎಂದು ಕೋರಿದರು. ಬಾಳಾಸಾಹೇಬ ಪಾಟೀಲ ಅವರು ರಾಜ್ಯದಲ್ಲಿ ನೆರೆಹಾನಿ ಸಂಭವಿಸಿದ್ದಾಗಲೂ ಪಿಎಂ ಪರಿಹಾರ ನಿಧಿಗೆ ಲಕ್ಷಾಂತರ ರೂ.ದೇಣಿಗೆ ನೀಡಿ ಉದಾರತೆ ತೋರಿದ್ದರು.