ಬೆಂಗಳೂರು: ಪ್ರೊ ಕಬಡ್ಡಿ ಲೀಗ್ 8ನೇ ಆವೃತ್ತಿ ಡಿಸೆಂಬರ್ 22ರಂದು ಆರಂಭಗೊಳ್ಳಲಿದ್ದು, ಟೂರ್ನಿಯ ಎಲ್ಲ ಪಂದ್ಯಗಳು ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿವೆ ಎನ್ನಲಾಗಿದೆ. ಕಂಠೀರವ ಕ್ರೀಡಾಂಗಣ ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡದ ತವರು ಮೈದಾನವಾಗಿದ್ದು, ಜೈಪುರ ಮತ್ತು ಅಹಮದಾಬಾದ್ ಕ್ರೀಡಾಂಗಣಗಳೂ ಟೂರ್ನಿ ಆತಿಥ್ಯದ ರೇಸ್ನಲ್ಲಿದ್ದವು. ಆದರೆ ಇದೀಗ ಬೆಂಗಳೂರಿನಲ್ಲೇ ಬಯೋಬಬಲ್ ನಿರ್ಮಿಸಿ ಟೂರ್ನಿ ಆಯೋಜಿಸಲಾಗುತ್ತಿದೆ ಎನ್ನಲಾಗಿದೆ.
ಕರೊನಾ ಕಾಲದಲ್ಲಿ ಇದು ದೇಶದ ಮೊದಲ ಪ್ರಮುಖ ಒಳಾಂಗಣ ಕ್ರೀಡಾಕೂಟವಾಗಿರಲಿದೆ. ಕರೊನಾ ಭೀತಿಯಿಂದಾಗಿ 2020ರಲ್ಲಿ ಪ್ರೊ ಕಬಡ್ಡಿ ಲೀಗ್ ನಡೆದಿರಲಿಲ್ಲ. ಈ ಹಿಂದೆ ಕ್ಯಾರವಾನ್ ಮಾದರಿಯಲ್ಲಿ ಎಲ್ಲ 12 ತಂಡಗಳ ತವರು ಮೈದಾನದಲ್ಲಿ 3 ತಿಂಗಳ ಅವಧಿಯಲ್ಲಿ ಟೂರ್ನಿ ನಡೆಯುತ್ತಿತ್ತು. ಆದರೆ ಕರೊನಾ ಭೀತಿಯಿಂದಾಗಿ ಈ ವರ್ಷ ಎಲ್ಲ ಪಂದ್ಯಗಳನ್ನು ಒಂದೇ ತಾಣಕ್ಕೆ ಸೀಮಿತಗೊಳಿಸಲಾಗುತ್ತಿದೆ. ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಲ್ಲ ಆಟಗಾರರಿಗೆ ಲಸಿಕೆ ಕಡ್ಡಾಯವಾಗಿದ್ದು, ಟೂರ್ನಿ ಆರಂಭಕ್ಕೆ ಕನಿಷ್ಠ 14 ದಿನ ಮೊದಲೇ ಎಲ್ಲ ತಂಡಗಳು ಬೆಂಗಳೂರಿನಲ್ಲಿ ಹಾಜರಿರಬೇಕಿದೆ ಎನ್ನಲಾಗಿದೆ.
ಕಳೆದ ಆಗಸ್ಟ್ನಲ್ಲಿ ಟೂರ್ನಿಗೆ ಆಟಗಾರರ ಹರಾಜು ಪ್ರಕ್ರಿಯೆ ನಡೆದಿತ್ತು ಮತ್ತು ಪ್ರದೀಪ್ ನರ್ವಾಲ್ ಗರಿಷ್ಠ 1.65 ಕೋಟಿ ರೂ. ಮೊತ್ತಕ್ಕೆ ಯುಪಿ ಯೋಧಾ ತಂಡ ಸೇರಿದ್ದರು. ಟೂರ್ನಿಯಲ್ಲಿ 22 ವಿದೇಶಿ ಆಟಗಾರರೂ ಆಡಲಿದ್ದಾರೆ.