ಬೆಂಗಳೂರು: ನಿನ್ನೆ (ನ.12) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಮತ್ತು ನೆದರ್ಲೆಂಡ್ಸ್ ನಡುವೆ ವಿಶ್ವಕಪ್ ಟೂರ್ನಿಯ 45ನೇ ಪಂದ್ಯ ನಡೆಯಿತು. ಇದು ಉಭಯ ತಂಡಗಳಿಗೂ ಗ್ರೂಪ್ ಹಂತದ ಕೊನೆಯ ಪಂದ್ಯವಾಗಿತ್ತು. ಇದರಲ್ಲಿ ಟೀಮ್ ಇಂಡಿಯಾ 160 ರನ್ಗಳ ಭರ್ಜರಿ ಗೆಲುವು ದಾಖಲಿಸಿ, ಟೂರ್ನಿಯಲ್ಲಿ ಅಜೇಯ ಓಟ ಮುಂದುರಿಸಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರಸಕ್ತ ಟೂರ್ನಿಯ ಕೆಲವು ಪಂದ್ಯಗಳು ಈಗಾಗಲೇ ನಡೆದಿದ್ದರೂ, ಭಾರತ ನಿನ್ನೆ ಆಡಿದ ಪಂದ್ಯ ಈ ಕ್ರೀಡಾಂಗಣದಲ್ಲಿ ಆಡಿದ ಮೊದಲ ಹಾಗೂ ಗ್ರೂಪ್ ಹಂತದ ಕೊನೆಯ ಪಂದ್ಯವಾಗಿತ್ತು, ಹೀಗಾಗಿ ಭಾರತೀರ ಆಟಗಾರರ ಪ್ರದರ್ಶನವನ್ನು ಕಣ್ತುಂಬಿಕೊಳ್ಳಲು ಚಿನ್ನಾಸ್ವಾಮಿ ಕ್ರೀಡಾಂಗಣದಲ್ಲಿ ಸಾಕಷ್ಟು ಕ್ರೀಡಾಭಿಮಾನಿಗಳು ಜಮಾಯಿಸಿದ್ದರು. ಈ ವೇಳೆ ವಿಜಯವಾಣಿಯ ಫೋಟೋಗ್ರಾಫರ್ ಸುಧೀಂದ್ರ ಶ್ರೀರಂಗರಾಜು ಅವರು ತಮ್ಮ ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿದ ಕೆಲವು ಮನಮೋಹಕ ಚಿತ್ರಗಳು ಇಲ್ಲಿವೆ ನೋಡಿ.
ಪಂದ್ಯದ ಫಲಿತಾಂಶವೇನು?
ನಿನ್ನೆ ನಡೆದ ಪಂದ್ಯದಲ್ಲಿ ಭಾರತ ನೀಡಿದ 411ರನ್ಗಳ ಬೃಹತ್ ಗುರಿ ಬೆನ್ನತ್ತಿದ ನೆದರ್ಲೆಂಡ್ಸ್ ಪಡೆ 47.5 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 250 ರನ್ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಟೀಮ್ ಇಂಡಿಯಾ 160 ರನ್ಗಳ ಭಾರೀ ಅಂತರದಿಂದ ಗೆಲುವಿನ ಕೇಕೆ ಹಾಕಿತು. ತಂಡದ ಪರ ಸೈಬ್ರಾಂಡ್ ಎಂಗಲ್ಬ್ರೆಕ್ಟ್ (45), ತೇಜ ನಿಡಮನೂರು (54), ಕಾಲಿನ್ ಅಕರ್ಮನ್ (35) ಹೊರತುಪಡಿಸಿದರೆ ಉಳಿದ ಯಾವೊಬ್ಬ ಬ್ಯಾಟ್ಸ್ಮನ್ ಕೂಡ ಭಾರತದ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಲಿಲ್ಲ.
ಭಾರತ ಪರ ಮಿಂಚಿನ ಬೌಲಿಂಗ್ ದಾಳಿ ಮಾಡಿದ ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ ಮತ್ತು ಜಸ್ಪ್ರಿತ್ ಬೂಮ್ರಾ ತಲಾ ಎರಡು ವಿಕೆಟ್ ಪಡೆದರೆ, ವಿರಾಟ್ ಕೊಹ್ಲಿ ಮತ್ತು ನಾಯಕ ರೋಹಿತ್ ಶರ್ಮ ತಲಾ ಒಂದೊಂದು ವಿಕೆಟ್ ಪಡೆದರು. ಅಪರೂಪಕ್ಕೊಮ್ಮೆ ಬೌಲಿಂಗ್ ಮಾಡಿ ಕೊಹ್ಲಿ ಮತ್ತು ರೋಹಿತ್ ವಿಕೆಟ್ ಪಡೆದಿದ್ದು, ಕ್ರೀಡಾಭಿಮಾನಿಗಳನ್ನು ಹೆಚ್ಚು ಗಮನ ಸೆಳೆಯಿತು.
ಭಾರತದ ಪರಾಕ್ರಮ
ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಭಾರತ ನಿಗದಿತ 50 ಓವರ್ಗಳಲ್ಲಿ ಕೇವಲ 4 ವಿಕೆಟ್ ನಷ್ಟಕ್ಕೆ 410 ರನ್ ಕಲೆ ಹಾಕಿತು. ಬ್ಯಾಟ್ ಹಿಡಿದು ಕ್ರೀಡಾಂಗಣಕ್ಕಿಳಿದ ಟೀಮ್ ಇಂಡಿಯಾದ ಪ್ರತಿ ಬ್ಯಾಟರ್ಗಳು ಸಹ ರನ್ ಮಾರುತವನ್ನೇ ಸೃಷ್ಟಿಸಿದರು. ರೋಹಿತ್ ಶರ್ಮ (61 ರನ್, 54 ಎಸೆತ, 8 ಬೌಂಡರಿ, 2 ಸಿಕ್ಸರ್) ಮತ್ತು ಶುಭಮಾನ್ ಗಿಲ್ (51 ರನ್, 32 ಎಸೆತ, 3 ಬೌಂಡರಿ, 4 ಸಿಕ್ಟರ್) 100 ರನ್ಗಳ ಜತೆಯಾಟದ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಮೈದಾನಕ್ಕಿಳಿದ ವಿರಾಟ್ ಕೊಹ್ಲಿ ಸಹ ನೆದರ್ಲೆಂಡ್ಸ್ ಬೌಲರ್ಗಳನ್ನು ಕಾಡಿದರು. 56 ಎಸೆತಗಳನ್ನು ಎದುರಿಸಿದ ಕೊಹ್ಲಿ 5 ಬೌಂಡರಿ 1 ಸಿಕ್ಸರ್ ನೆರವಿನಿಂದ 51 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಶ್ರೇಯಸ್-ರಾಹುಲ್ ಜುಗಲ್ಬಂಧಿ
ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್ಗೆ ಇಳಿದ ಶ್ರೇಯಸ್ ಅಯ್ಯರ್ ( ಅಜೇಯ 128 ರನ್, 94 ಎಸೆತ, 10 ಬೌಂಡರಿ, 5 ಸಿಕ್ಸರ್) ಮತ್ತು ಐದನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಕೆ.ಎಲ್. ರಾಹುಲ್ (102 ರನ್, 64 ಎಸೆತ, 11 ಬೌಂಡರಿ, 4 ಸಿಕ್ಸರ್) ದ್ವಿಶತಕ ಜತೆಯಾಟದೊಂದಿಗೆ ಉತ್ತಮ ಇನಿಂಗ್ಸ್ ಆಡಿದರು. ನೆದರ್ಲೆಂಡ್ಸ್ ಬೌಲರ್ಗಳನ್ನು ಅಕ್ಷರಶಃ ಬೆಂಡತ್ತಿದ ಈ ಜೋಡಿ ಎರಡು ವೈಯಕ್ತಿಕ ಶತಕಗಳೊಂದಿಗೆ ಭಾರತ ತಂಡ 410 ರನ್ಗಳ ಬೃಹತ್ ಗುರಿಯನ್ನು ಮುಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದರು. ಕೊನೆಯಲ್ಲಿ ಸೂರ್ಯಕುಮಾರ್ ಯಾದವ್ 2 ರನ್ ಗಳಿಸಿ ಅಜೇಯರಾಗಿ ಉಳಿದರು.
ನೆದರ್ಲೆಂಡ್ಸ್ ಪರ ಬಾಸ್ ಡಿ ಲೀಡೆ ಎರಡು ವಿಕೆಟ್ ಪಡೆದರೆ, ಪೌಲ್ ವ್ಯಾನ್ ಮೀಕೆರೆನ್ ಮತ್ತು ರೋಲೋಫ್ ವ್ಯಾನ್ ಡೆರ್ ಮೆರ್ವೆ ತಲಾ ಒಂದೊಂದು ವಿಕೆಟ್ ಕಬಳಿಸಿದರು. ಆದರೆ, ಯಾರೊಬ್ಬರು ಸಹ ಟೀಮ್ ಇಂಡಿಯಾ ಬ್ಯಾಟರ್ಗಳಿಗೆ ಸವಾಲಾಗಲೇ ಇಲ್ಲ.
VIDEO| 9 ವರ್ಷದ ಬಳಿಕ ವಿಕೆಟ್ ಪಡೆದ ವಿರಾಟ್ ಕೊಹ್ಲಿ: ಅನುಷ್ಕಾ ಶರ್ಮಾ ಪ್ರತಿಕ್ರಿಯೆ ವೈರಲ್
VIDEO| ರೋಹಿತ್ ಶರ್ಮ ಬೌಲಿಂಗ್ ಸ್ಟೈಲ್ಗೆ ಪತ್ನಿ ಕ್ಲೀನ್ ಬೋಲ್ಡ್! ವೈರಲ್ ಆಯ್ತು ರಿತಿಕಾ ರಿಯಾಕ್ಷನ್
ವಿಶ್ವಕಪ್ನಲ್ಲಿ ಭಾರತದ ಅಜೇಯ ಓಟ: ನೆದರ್ಲೆಂಡ್ಸ್ ವಿರುದ್ಧ ದಾಖಲೆ ಗೆಲುವು, ಮುಂದಿನ ಗುರಿ ಸಮಿಫೈನಲ್