ವಿಟ್ಲ : ರಕ್ತದಾನ ಬಳಿಕ ಹಣ್ಣಿನ ರಸ ನೀಡುವುದು ಸಾಮಾನ್ಯ. ಆದರೆ, ವಿಟ್ಲದಲ್ಲಿ ಭಾನುವಾರ ಹಮ್ಮಿಕೊಂಡ ರಕ್ತದಾನ ಶಿಬಿರದಲ್ಲಿ ರಕ್ತ ದಾನಿಗಳಿಗೆ ಪೆಟ್ರೋಲ್ ನೀಡಲಾಗಿದೆ!
ಒಕ್ಕೆತ್ತೂರು ಸರ್ಕಾರಿ ಶಾಲೆಯಲ್ಲಿ ಬಂಟ್ವಾಳ ತಾಲೂಕು ಧ್ವನಿ ಬೆಳಕು ಸಂಯೋಜಕರ ಒಕ್ಕೂಟ ವಿಟ್ಲ ವಲಯ, ಮಂಗಳಪದವು ಐಡಿಯಲ್ ಫ್ಯೂಲ್ಸ್, ವಿಟ್ಲ ಲಯನ್ಸ್ ಕ್ಲಬ್ ಹಾಗೂ ಮಂಗಳೂರು ಕೆಎಂಸಿ ಆಸ್ಪತ್ರೆ ವತಿಯಿಂದ ಭಾನುವಾರ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಮೊದಲ 50 ರಕ್ತದಾನಿಗಳಿಗೆ ಒಂದು ಲೀಟರ್ ಪೆಟ್ರೋಲ್ ಅಥವಾ ಡೀಸೆಲ್ ಉಚಿತವಾಗಿ ನೀಡಲಾಗಿದೆ. ಸ್ಥಳದಲ್ಲಿ ಕೂಪನ್ ಪಡೆದ ರಕ್ತದಾನಿಗಳು, ಐಡಿಯಲ್ನಲ್ಲಿ ವಾಹನಗಳಿಗೆ ಇಂಧನ ತುಂಬಿಸಿಕೊಂಡರು. ಹೆಚ್ಚು ರಕ್ತದಾನಿಗಳನ್ನು ಸೆಳೆಯಲು ಈ ರೀತಿ ಮಾಡಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಈ ಬಗ್ಗೆ ‘ವಿಜಯವಾಣಿ’ ಜತೆ ಮಾತನಾಡಿದ ಧ್ವನಿ ಬೆಳಕು ಸಂಯೋಜಕರ ಒಕ್ಕೂಟದ ಜಿಲ್ಲಾಧ್ಯಕ್ಷ ರಾಜಶೇಖರ ಶೆಟ್ಟಿ, ಕರೊನಾ ನಂತರ ಆಸ್ಪತ್ರೆಗಳಲ್ಲಿ ರಕ್ತದ ಕೊರತೆ ಇದೆ. ಬೇಡಿಕೆಯಷ್ಟು ಪೂರೈಕೆಯಾಗುತ್ತಿಲ್ಲ. ಕೆಲವರು ರಕ್ತದಾನ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಹೆಚ್ಚಿನ ಜನರನ್ನು ರಕ್ತದಾನ ಮಾಡುವಂತೆ ಪ್ರೇರೇಪಿಸಲು ಮೊದಲ 50 ಜನರಿಗೆ ಡೀಸೆಲ್ ಅಥವಾ ಪೆಟ್ರೋಲ್ ಕೊಡುಗೆ ನೀಡಲಾಗಿದೆ ಎಂದು ತಿಳಿಸಿದರು.