ಮಲಪ್ಪುರಂ: ಸಾಕು ನಾಯಿಯ ಸಮಯಪ್ರಜ್ಞೆಯಿಂದ ಒಂದೇ ಕುಟುಂಬದ ಒಂಬತ್ತು ಮಂದಿ ಕಾಡಾನೆ ದಾಳಿಯಿಂದ ಬಚಾವ್ ಆಗಿರುವ ರೋಚಕ ಘಟನೆ ಕೇರಳದ ಮಲಪ್ಪುರಂನ ಎಡಕ್ಕರದಲ್ಲಿ ನಡೆದಿದೆ.
ಭಾರಿ ಗಾತ್ರದ ಕಾಡಾನೆ ಉದಿರಮ್ಕುಲಮ್ನಲ್ಲಿರುವ ಸುಂದರನ್ ಮನೆ ಸಮೀಪದ ಶೆಡ್ ಮೇಲೆ ದಾಳಿ ಮಾಡಿತ್ತು. ಅದನ್ನು ನೋಡಿದ ನಾಯಿ, ಜೋರಾಗಿ ಬೊಗಳುವುದಲ್ಲದೆ, ಮನೆಯ ಪ್ಲಾಸ್ಟಿಕ್ ಶೀಟ್ ಕೆರೆಯುವ ಶಬ್ದ ಕೇಳಿ ಎಚ್ಚರಗೊಂಡ ಸುಂದರನ್ ಕುಟುಂಬ ಆನೆಯನ್ನು ನೋಡಿ ಅಲ್ಲಿಂದ ಕಾಲ್ಕಿತ್ತು ತಪ್ಪಿಸಿಕೊಳ್ಳುವ ಮೂಲಕ ಸಂಭವನೀಯ ಆನೆ ದಾಳಿಯಿಂದ ಪಾರಾಗಿದ್ದಾರೆ.
ಸುಂದರನ್ ಕರಿಯುಮುರಿಯಂ ಅರಣ್ಯ ಸಮೀಪದಲ್ಲಿ ತಮ್ಮ ಕುಟುಂಬ ಸಮೇತ ವಾಸವಿದ್ದರು. ಸುಂದರನ್ ಮತ್ತು ಪತ್ನಿ ಸೀತಾ ಪ್ಲಾಸ್ಟಿಕ್ನಿಂದ ಮಾಡಿದ ಹಾಗೂ ಅಡುಗೆ ಮಾಡಲು ಬಳಸುತ್ತಿದ್ದ ಶೆಡ್ನಲ್ಲಿ ಸದಾ ಮಲಗುತ್ತಿದ್ದರು. ನಾಯಿ ಬೊಗಳುವ ಮತ್ತು ಪ್ಲಾಸ್ಟಿಕ್ ಕೆರೆಯುವ ಶಬ್ದ ಕೇಳಿ ಎಚ್ಚರಗೊಂಡ ದಂಪತಿ, ಹತ್ತಿರದ ರೂಮಿನಲ್ಲಿ ಮಲಗಿದ್ದ ಮಕ್ಕಳ ಬಳಿ ತೆರಳಿ ಎಲ್ಲರನ್ನು ಎಚ್ಚರಿಸಿ ಅಲ್ಲಿಂದ ಪರಾರಿಯಾಗಿ ಜೀವ ಉಳಿಸಿಕೊಂಡಿದ್ದಾರೆ.
ಇನ್ನು ಉದ್ರಿಕ್ತ ಕಾಡಾನೆ ಶೆಡ್ನ ಮೇಲ್ಛಾವಣಿಯನ್ನು ಧ್ವಂಸಗೊಳಿಸಿ, ಮನೆಯೊಳಗೆ ಪ್ರವೇಶಿಸಲು ಯತ್ನಿಸಿದೆ. ಆದರೆ, ಎಚ್ಚರಗೊಂಡಿದ್ದ ಮನೆಯವರು ಜೋರಾಗಿ ಶಬ್ದ ಮಾಡಿದ ಭಯಕ್ಕೆ ಕಾಡಾನೆ ಹತ್ತೇ ನಿಮಿಷದಲ್ಲಿ ಮನೆಯ ಸುತ್ತೆಲ್ಲಾ ಓಡಾಡಿ ಕೊನೆಗೆ ಚೆಂಬಂಕೊಲ್ಲಿ ರಸ್ತೆ ಮೂಲಕ ಅರಣ್ಯವನ್ನು ಸೇರಿಕೊಂಡಿತು. ಆನೆ ಕಾಡಿನೊಳಗೆ ಹೋಗುವವರೆಗೂ ನಾಯಿ ಮಾತ್ರ ಬೊಗಳುವುದನ್ನು ನಿಲ್ಲಿಸಲಿಲ್ಲ.
ಇನ್ನು ಸುಂದರನ್ ಮನೆ ಬಳಿ ಆನೆ ಬಂದಿದ್ದು ಇದೇ ಮೊದಲು. ಅರಣ್ಯಕ್ಕೆ ಹಿಂದಿರುಗುವಾಗ ಆನೆ ಸಾಕಷ್ಟು ಬೆಳೆ ಹಾನಿಯನ್ನು ಮಾಡಿದೆ. ಸಾಕು ನಾಯಿಯ ಸಮಯಪ್ರಜ್ಞೆಯಿಂದ ಜೀವ ಉಳಿಸಿಕೊಂಡ ಕುಟುಂಬ ತಮ್ಮದೇ ರೀತಿಯಲ್ಲಿ ನಾಯಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. (ಏಜೆನ್ಸೀಸ್)