ಶ್ರೀರಂಗಪಟ್ಟಣ: ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಪಠ್ಯೇತರ ಚಟುವಟಿಕೆಗಳ ಶಿಕ್ಷಣವನ್ನು ಬಾಲ್ಯದಿಂದಲೇ ಪಡೆಯುವುದರಿಂದ ಆತ್ಮವಿಶ್ವಾಸ ಹಾಗೂ ವ್ಯಕ್ತಿತ್ವ ವಿಕಸನ ವಾಗಲಿದೆ ಎಂದು ಶಿಕ್ಷಣ ತಜ್ಞ ಹಾಗೂ ಸಾಮಾಜಿಕ ಚಿಂತಕ ತುಕಾರಾಂ ಹೇಳಿದರು.
ಪಟ್ಟಣದ ಆಯಾಮ ಕಲಾ ಕುಟೀರದಲ್ಲಿ ಶನಿವಾರ ಆಯಾಮ ಕಲಾ ಅಕಾಡೆಮಿ ಸಂಸ್ಥೆಯಿಂದ 25ನೇ ವರ್ಷದ ಬೆಳ್ಳಿ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಆಯಾಮದ ನಡಿಗೆ ಸರ್ಕಾರಿ ಶಾಲಾ ವಿದ್ಯಾರ್ಥಿಗಳೆಡೆಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಂದಲ್ಲ ಒಂದು ಪ್ರತಿಭೆ ಅಡಕವಾಗಿರುತ್ತದೆ. ಅದನ್ನು ಗುರುತಿಸಿ ಹೊರ ತೆಗೆಯುವ ಕೆಲಸವನ್ನು ಶಿಕ್ಷಕರು ಮಾಡಬೇಕಿದೆ. ವಿದ್ಯಾರ್ಥಿಗಳು ಪಠ್ಯದ ಜತೆಗೆ ಕಲೆ, ರಂಗಭೂಮಿ ಕಡೆಗೂ ಒತ್ತು ನೀಡಬೇಕು ಎಂದರು.
ಜನಮನ ಸಂಸ್ಕೃತಿ ವೇದಿಕೆ ಸ್ಥಾಪಕ ವಕೀಲ ಪುಟ್ಟಸ್ವಾಮಿ, ಆಯಾಮ ಅಕಾಡೆಮಿ ಅಧ್ಯಕ್ಷ ಹಾಗೂ ಸಾಹಿತಿ ಸಾವೇರ ಸ್ವಾಮಿ, ಟ್ರಸ್ಟಿಗಳಾದ ಚಿತ್ರನಟ ಬಲರಾಜ್ವಾಡಿ, ಲಕ್ಷ್ಮಮ್ಮ, ಆಯಾಮ ಆಕಾಡೆಮಿ ಸಂಸ್ಥಾಪಕಿ ಡಾ.ಎಸ್.ವಿ. ಶಾಂಭವಿ ಉಪಸ್ಥಿತರಿದ್ದರು.