ಉತ್ತರಕನ್ನಡ: ಮಾಟ-ಮಂತ್ರದ ಉದ್ದೇಶಕ್ಕಾಗಿ 13 ವರ್ಷದ ಮಗಳನ್ನೇ ಬಲಿಕೊಟ್ಟಿದ್ದ ಆರೋಪಿಯೊಬ್ಬ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದಾನೆ. ಕೇರಳ ಪೊಲೀಸರಿಗೆ ಬೇಕಾಗಿದ್ದ ಈ ಆರೋಪಿಯನ್ನು ಕರ್ನಾಟಕ ಪೊಲೀಸರ ನೆರವಿನಿಂದ ಕಾರವಾರದಲ್ಲಿ ಬಂಧಿಸಲಾಗಿದೆ.
ಕೇರಳದ ಸನು ಮೋಹನ್ ಬಂಧಿತ ಆರೋಪಿ. ನಲ್ವತ್ತು ವರ್ಷದ ಈತ ಮಾಟ-ಮಂತ್ರದ ಉದ್ದೇಶಕ್ಕಾಗಿ ತನ್ನ 13 ವರ್ಷದ ಮಗಳನ್ನೇ ಬಲಿ ನೀಡಿದ್ದ. ಈ ಸಂಬಂಧ ತ್ರಿಕ್ಕಾಕರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ ಆರೋಪಿ ತಲೆಮರೆಸಿಕೊಂಡಿದ್ದ. ಈತನ ಪತ್ತೆಗಾಗಿ ಕೇರಳ ಪೊಲೀಸರು ಲುಕ್ಔಟ್ ನೋಟಿಸ್ ನೀಡಿದ್ದರು.
ಆರೋಪಿಯ ಮೊಬೈಲ್ಫೋನ್ ನೆಟ್ವರ್ಕ್ ಆಧಾರದ ಮೇರೆಗೆ ಈತ ಕರ್ನಾಟಕದ ಕಾರವಾರ ಪ್ರದೇಶದಲ್ಲಿ ಇರುವುದ ಸುಳಿವು ತಿಳಿದ ಪೊಲೀಸರು, ಕರ್ನಾಟಕ ಪೊಲೀಸರ ನೆರವು ಕೋರಿದ್ದರು. ಬಳಿಕ ಕರ್ನಾಟಕ ಹಾಗೂ ಕೇರಳ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದು, ಈತನನ್ನು ಕೇರಳ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.