ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ದಿನೇದಿನೆ ಕರೊನಾ ಸೋಂಕಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವುದರಿಂದ ಜನ ಹೆದರಿದ್ದಾರೆ. ಅದಲ್ಲದೇ ಇಂದು ರಾತ್ರಿಯಿಂದ ಸೋಮವಾರ ಬೆಳಗ್ಗೆವರೆಗೆ ಇಡೀ ಬೆಂಗಳೂರಿನಲ್ಲಿ ಕರ್ಫ್ಯೂ, ಲಾಕ್ಡೌನ್ ಜಾರಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಸಾವಿರಾರು ಜನರು ಬೆಂಗಳೂರು ತೊರೆದು ಬೇರೆ ಊರುಗಳಿಗೆ ಹೋಗುತ್ತಿದ್ದ ದೃಶ್ಯಗಳು ಕಂಡು ಬಂದವು.
ಮೈಸೂರು ರಸ್ತೆ ಮತ್ತು ತುಮಕೂರು ರಸ್ತೆಯಲ್ಲಿ ಕೆಲ ಕಾಲ ಟ್ರಾಫಿಕ್ ಜಾಮ್ ಕೂಡ ಉಂಟಾಗಿತ್ತು. ಕೆಲವರಂತೂ ಮನೆಯಲ್ಲಿದ್ದ ಸಾಮಾನು ಸರಂಜಾಮುಗಳನ್ನು ವಾಹನಗಳ ಮೇಲೆ ಹೇರಿಕೊಂಡು ಬೆಂಗಳೂರನ್ನೇ ಬಿಟ್ಟು ಸ್ವಗ್ರಾಮಗಳಿಗೆ ತೆರಳುತ್ತಿದ್ದರು. ಟೋಲ್ ಹತ್ತಿರ ಬಹು ದೂರದವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದುದು ಕಂಡುಬಂತು. ಇದನ್ನೂ ಓದಿ: ಹೊರಬಿತ್ತು ದೇಶಿಯವಾಗಿ ಸಿದ್ಧವಾಗಿರುವ 2ನೇ ಕೋವಿಡ್-19 ರೋಗನಿರೋಧಕ ಚುಚ್ಚುಮದ್ದಿನ ಹೆಸರು
ಪ್ರತಿ ಭಾನುವಾರ ಲಾಕ್ಡೌನ್ ಮಾಡಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಈಗಾಗಲೇ ಘೋಷಿಸಿದ್ದಾರೆ. ಆದರೆ ಎಸ್ಎಸ್ಎಲ್ಸಿ ಪರೀಕ್ಷೆಗಳು ಮುಗಿದ ಬಳಿಕ ಕರೊನಾಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಸಚಿವ ಆರ್. ಅಶೋಕ್ ಹೇಳಿದ್ದರು. ಹಾಗಾಗಿ ಸೋಮವಾರದಿಂದ ಮತ್ತೆ ಸತತವಾಗಿ ಲಾಕ್ಡೌನ್ ಘೋಷಿಸಬಹುದು ಎಂಬ ಶಂಕೆಯಿಂದ ಜನರು ಸ್ವಗ್ರಾಮಗಳಿಗೆ ತೆರಳುತ್ತಿರಬಹುದು ಎಂದು ಹೇಳಲಾಗಿದೆ.