ಹುಕ್ಕೇರಿ: ಗ್ರಾಮೀಣ ಜನರಿಗಾಗಿ ಕೈಗೊಂಡ ಜಲಜೀವನ ಯೋಜನೆ ಅನುಷ್ಠಾನಕ್ಕೆ ತೆರಿಗೆ ವಸೂಲಿ ಕಡ್ಡಾಯ. ಈ ನಿಟ್ಟಿನಲ್ಲಿ ಬಾಕಿ ಉಳಿಸಿಕೊಂಡಿರುವ ವಿವಿಧ ಕರ ವಸೂಲಿ ಮಾಡಬೇಕು ಎಂದು ಆಹಾರ, ನಾಗರಿಕ ಸರಬರಾಜು ಸಚಿವ ಉಮೇಶ ಕತ್ತಿ ಸೂಚಿಸಿದರು.
ಪಟ್ಟಣದ ತಾಪಂ ಸಭಾಭವನದಲ್ಲಿ ಸೋಮವಾರ ಪಿಡಿಒಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಕರ ಬಾಕಿ ಉಳಿದಿದ್ದು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಏ. 31 ರ ಒಳಗಾಗಿ ನೂರಕ್ಕೆ ನೂರಷ್ಟು ತೆರಿಗೆ ವಸೂಲಿ ಮಾಡಬೇಕು ಎಂದು ತಿಳಿಸಿದರು. ಉದ್ಯೋಗ ಖಾತ್ರಿ ಯೋಜನೆಯಡಿ ತೋಟಪಟ್ಟಿ ರಸ್ತೆ, ಕೆರೆ ಹೂಳೆತ್ತುವುದು, ಹಳ್ಳ-ಕೊಳ್ಳಗಳು, ಕೆರೆ ಬದುವಿನಲ್ಲಿ ಹಾಗೂ ಶಾಲಾ ಅವರಣದಲ್ಲಿ ಗಿಡ ನೆಡುವುದಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು.
ಗ್ರಾಮಗಳಲ್ಲಿ ಸ್ಮಶಾನಗಳ ಹದ್ದು ಬಸ್ತಿ, ಸರ್ಕಾರಿ ಜಮೀನು, ಅತಿಕ್ರಮಣ ತೆರವುಗೊಳಿಸಬೇಕು ಎಂದು ಆದೇಶಿಸಿದರು. ಜಲಜೀವನ ಮಿಷನ್ ಯೋಜನೆಯ ಪೈಪ್ಲೈನ್ ಒಂದು ಮೀಟರ್ ನೆಲದಡಿ ಅಳವಡಿಸುವುದು. ಗುಂಪು ಮನೆಗಳಿಗೆ ಹಾಗೂ ತೋಟಪಟ್ಟಿ ನಿವಾಸಿಗಳಿಗೆ ನೀರು ಸರಬರಾಜು ಮಾಡುವ ಕಾರ್ಯ ಹಂತ ಹಂತವಾಗಿ ನೆರವೇರಿಸಬೇಕು ಎಂದು ಸೂಚಿಸಿದರು.
ಗ್ರಾಮ ಸರ್ಕಾರಿ ಶಾಲೆಗಳಲ್ಲಿ ನಿರ್ಮಿಸುತ್ತಿರುವ ಹೈಟೆಕ್ ಶೌಚಗೃಹಗಳಂತೆ, ಶಾಲೆಗಳು ಹೈಟೆಕ್ ಆಗಿರುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ನೋಡಿಕೊಳ್ಳಬೇಕು ಎಂದರು. ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಬೀಜ, ರಸಗೊಬ್ಬರ, ಸಸಿ ತಯಾರಿಕೆ ಹಾಗೂ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.
ತಾಪಂನಿಂದ ತೋಟಪಟ್ಟಿ ರಸ್ತೆ ಕಾಮಗಾರಿಗಳ ಕಿರು ಹೊತ್ತಿಗೆ ಬಿಡುಗಡೆ ಮಾಡಿದರು. ತಹಸೀಲ್ದಾರ್ ಡಾ.ಡಿ.ಎಚ್.ಹೂಗಾರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಿಕೆ ಲಾಳಿ ಇತರರು ಇದ್ದರು.