ಚಂಡೀಗಡ : ಪಂಜಾಬ್ನಲ್ಲಿ ಸಿಎಂ ಅಮರಿಂದರ್ ಸಿಂಗ್ ಮತ್ತು ನೂತನವಾಗಿ ಪಂಜಾಬ್ ಕಾಂಗ್ರೆಸ್ ಕಮಿಟಿ (ಪಿಸಿಸಿ) ಅಧ್ಯಕ್ಷರಾಗಿ ನೇಮಕಗೊಂಡಿರುವ ಮಾಜಿ ಸಚಿವ ನವಜೋತ್ ಸಿಂಗ್ ಸಿಧು ನಡುವೆ ಮತ್ತೆ ಶಾಂತಿ ಘೋಷಣೆಯಾದಂತಿದೆ. ಇಂದು ಸಿಎಂ ಸಿಂಗ್ರ ಅಧಿಕೃತ ನಿವಾಸ ಪಂಜಾಬ್ ಭವನದಲ್ಲಿ ಇಬ್ಬರೂ ಒಟ್ಟಿಗೆ ಟೀ ಕುಡಿದ ಬಗ್ಗೆ ವರದಿಯಾಗಿದೆ.
ಪಿಸಿಸಿ ಅಧ್ಯಕ್ಷರಾಗಿ ಸಿಧು ಅಧಿಕೃತವಾಗಿ ಪದಸ್ವೀಕಾರ ಮಾಡುವ ಮುನ್ನ ಇಂದು ಬೆಳಿಗ್ಗೆ ಸಿಎಂ ಸಿಂಗ್ ಹೊಸದಾಗಿ ನೇಮಕಗೊಂಡಿರುವ ಪಿಸಿಸಿ ತಂಡದ ಎಲ್ಲರನ್ನೂ ಚಹಾ ಪಾರ್ಟಿಗೆ ಆಹ್ವಾನಿಸಿದ್ದರು. ಈ ನಾಯಕರು ಭೇಟಿಯಾದ ಬಗ್ಗೆ ತಿಳಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ಸಮಸ್ಯೆ ಪರಿಹಾರವಾಗಿದೆ, ನೋಡಿ” ಎಂದು ಕಾಮೆಂಟ್ ಮಾಡಿದ್ದಾರೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ!
ಇದನ್ನೂ ಓದಿ: 2 ತಿಂಗಳ ಹಿಂದೆಯೇ ರಾಜೀನಾಮೆ ನೀಡುವುದಾಗಿ ಹೇಳಿದ್ದೆ : ಬಿಎಸ್ವೈ
ಅಮರಿಂದರ್ ಸಿಂಗ್ ಮೇಲೆ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದ ಸಿಧು ಅವರನ್ನು ಪಿಸಿಸಿ ಅಧ್ಯಕ್ಷರಾಗಿ ನೇಮಿಸಿದ ನಂತರ, ಸಿಂಗ್ ಅವರನ್ನು ಭೇಟಿ ಮಾಡುತ್ತಿರುವುದು ಇಂದೇ ಮೊದಲ ಬಾರಿ. ಈ ಮುನ್ನ ತಮ್ಮ ವಿರುದ್ಧ ಮಾತಾಡಿದ್ದಕ್ಕೆ ಸಾರ್ವಜನಿಕವಾಗಿ ಕ್ಷಮೆ ಕೋರದ ಹೊರತು ಭೇಟಿಯಾಗಲು ನಿರಾಕರಿಸಿದ್ದರು ಎನ್ನಲಾಗಿದೆ.
ಮತ್ತೊಂದೆಡೆ, ಪಾರ್ಟಿ ಹೈಕಮಾಂಡ್ ಸಿಧುಗೆ ಪಿಸಿಸಿ ಅಧ್ಯಕ್ಷಗಿರಿಯ ಬಡ್ತಿ ನೀಡಿದ ನಂತರ ಸಿಎಂ ಸಿಂಗ್ರಿಗೆ ಇಂದು ನಿಗದಿಯಾಗಿದ್ದ ಪದನಿಯುಕ್ತಿ ಸಮಾರಂಭಕ್ಕೆ ಆಗಮಿಸಬೇಕಾಗಿ ಸಿಧು ಪತ್ರ ಬರೆದಿದ್ದರು. “ನನಗೆ ಯಾವುದೇ ವೈಯಕ್ತಿಕ ಅಜೆಂಡಾ ಇಲ್ಲ, ಬರೀ ಜನಪರ ಅಜೆಂಡಾ. ನೀವು ಪಂಜಾಬ್ ಕಾಂಗ್ರೆಸ್ ಕುಟುಂಬದ ಹಿರಿಯರು. ನೀವು ಆಗಮಿಸಿ ಹೊಸ ಪಿಸಿಸಿ ತಂಡಕ್ಕೆ ಆಶೀರ್ವದಿಸಬೇಕೆಂದು ಕೋರುತ್ತೇನೆ” ಎಂದು ಪತ್ರದಲ್ಲಿ ಹೇಳಿದ್ದರು ಎನ್ನಲಾಗಿದೆ. (ಏಜೆನ್ಸೀಸ್)