ಕಾರವಾರ: ಜಿಲ್ಲಾ ಪಂಚಾಯಿತಿಯಿಂದ ಪ್ರತಿ ತಿಂಗಳು ನೀಡುವ ಜಿಲ್ಲಾ ಮಟ್ಟದ ಪಿಡಿಒ ಆಫ್ ದಿ ಮಂತ್ ಪ್ರಶಸ್ತಿಯು ಅಕ್ಟೋಬರ್ ತಿಂಗಳಲ್ಲಿ ಹಳಿಯಾಳ ತಾಲೂಕಿನ ಭಾಗವತಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಗದೀಶ್ ಕೆ. ದೇಸಾಯಿ ಅವರಿಗೆ ಲಭಿಸಿದೆ.
ಶನಿವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಪ್ರಶಸ್ತಿ ಪ್ರದಾನ ಮಾಡಿದರು. ಶಾಸಕರಾದ ಸತೀಶ ಸೈಲ್, ಭೀಮಣ್ಣ ನಾಯ್ಕ, ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್, ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರ ಕುಮಾರ ಕಾಂದೂ, ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ಎಸ್ಪಿ ಎನ್. ವಿಷ್ಣುವರ್ಧನ ಇದ್ದರು.
ಪ್ರಶಸ್ತಿ ಪುರಸ್ಕೃತ ಪಿಡಿಒ ಜಗದೀಶ್ ದೇಸಾಯಿ ಅವರು ಎಂಎ, ಬಿಎಡ್ ಪದವೀಧರರಾಗಿದ್ದು, 2014ರಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ಆರಂಭಿಸಿದ್ದಾರೆ. ಜಗದೀಶ ದೇಸಾಯಿ ಅವರು ಹಳಿಯಾಳ ತಾಲೂಕಿನ ಭಗವತಿ ಗ್ರಾಮ ಪಂಚಾಯಿತಿ ಕಾರ್ಯಾವಧಿಯ 2014 ರಿಂದ ಮಹಾತ್ಮಗಾಂಧಿ ನರೇಗಾದಲ್ಲಿ ನಿಗದಿತ ಗುರಿ ಮೀರಿದ ಸಾಧನೆಗೈದಿದ್ದು, ಗ್ರಾಪಂ ವ್ಯಾಪ್ತಿಯ 10 ಶಾಲೆಗಳಿಗೆ ಕಂಪೌಂಡ್ ಹಾಗೂ ಆಟದ ಮೈದಾನ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ನೆರೆ ಪ್ರವಾಹ ಸಮಯದಲ್ಲಿ 2014 ರಿಂದ ಯಾವುದೇ ಸಾವು-ನೋವುಗಳು ಸಂಭವಿಸದಂತೆ ಮತ್ತು 2019-20ನೇ ಸಾಲಿನ ಕೋವಿಡ್ ಸಂದರ್ಭದಲ್ಲಿ ಗ್ರಾಪಂ ವ್ಯಾಪ್ತಿಯ 6 ಗ್ರಾಮಗಳಲ್ಲಿ ಯಾವುದೇ ಪಾಸಿಟಿವ್ ಪ್ರಕರಣ ಬಾರದಿರುವ ಹಾಗೆ ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಸ್ಥಳೀಯ ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಇದನ್ನು ಓದಿ: ತೆರೆ ಮರೆಯ ಕಲಾವಿದರಿಗೆ ಪ್ರೋತ್ಸಾಹ ಅಗತ್ಯ
ಸಮುದಾಯದೊಂದಿಗೆ ಉತ್ತಮ ಭಾಂದವ್ಯದ ಜೊತೆಗೆ ಕಾನೂನು ಪಾಲನೆ, ಕಾಲ ಕಾಲಕ್ಕೆ ಮೇಲಾಧಿಕಾರಿಗಳ ಆದೇಶಗಳ ಕಟ್ಟುನಿಟ್ಟಿನ ಪಾಲಿಸುತ್ತ ಸಮಗ್ರ ಪಂಚಾಯತ್ ಅಭಿವೃದ್ಧಿಯ ಧ್ಯೇಯ ಹೊಂದಲಾಗಿದೆ.
ಜಗದೀಶ್ ಕೆ. ದೇಸಾಯಿ,
ಪಿಡಿಒ ಆಫ್ ದಿ ಮಂತ್ ಜಿಲ್ಲಾ ಮಟ್ಟದ ಪ್ರಶಸ್ತಿ ಪುರಸ್ಕೃತ