More

    ತೆರೆ ಮರೆಯ ಕಲಾವಿದರಿಗೆ ಪ್ರೋತ್ಸಾಹ ಅಗತ್ಯ

    ಯಲ್ಲಾಪುರ: ಪ್ರತಿಫಲಾಪೇಕ್ಷೆ ಇಲ್ಲದೇ ಕಲಾ ಸೇವೆ ಮಾಡುತ್ತಿರುವ, ತೆರೆಮರೆಯ ಕಲಾವಿದರನ್ನು ಗುರುತಿಸಿ, ಗೌರವಿಸುವ ಕಾರ್ಯ ಶ್ಲಾಘನೀಯ ಎಂದು ಪ್ರಸಿದ್ಧ ಭಾಗವತ ಅನಂತ ಹೆಗಡೆ ದಂತಳಿಗೆ ಹೇಳಿದರು.

    ತಾಲೂಕಿನ ತೇಲಂಗಾರ ಮೈತ್ರಿ ಸಭಾಭವನದಲ್ಲಿ ಗುರುವಾರ ಸಂಜೆ ಕರ್ನಾಟಕ ಕಲಾ ಸನ್ನಿಧಿ ತೇಲಂಗಾರ ಹಾಗೂ ಮೈತ್ರಿ ಕಲಾ ಬಳಗದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ’ಕಲಾ ಸನ್ನಿಧಿ ಪುರಸ್ಕಾರ ಹಾಗೂ ತಾಳಮದ್ದಲೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಪ್ರಸಿದ್ಧಿ, ಪ್ರಚಾರ, ಗಳಿಕೆಯ ಆಕರ್ಷಣೆಗೊಳಗಾಗದೇ ಕಲಾ ಸೇವೆ ಮಾಡುತ್ತಿರುವ ಕಲಾವಿದರಾದ ಗಣೇಶ ಯಾಜಿ ಇಡಗುಂಜಿ, ಮಹಾಬಲೇಶ್ವರ ಭಟ್ಟ ಬೆಳಶೇರು, ಕಲಾವಿದ ಮಂಜುನಾಥ ಗಾಂವ್ಕರ ಮೂಲೆಮನೆ ಅವರಿಗೆ ’ಕಲಾ ಸನ್ನಿಧಿ ಪುರಸ್ಕಾರ’ ಹಾಗೂ ಯುವ ಕಲಾವಿದ ವಿವೇಕ ಮರಾಠಿ ಅವರಿಗೆ ’ಕಲಾ ಸನ್ನಿಧಿ ಯುವ ಪುರಸ್ಕಾರ’ ನೀಡಿ ಗೌರವಿಸಲಾಯಿತು. ಸಂಸ್ಥೆಯ ಖಜಾಂಚಿ ದಿನೇಶ ಭಟ್ಟ ಯಲ್ಲಾಪುರ ಅಭಿನಂದನಾ ನುಡಿಗಳನ್ನಾಡಿದರು.
    ಹವ್ಯಾಸಿ ಕಲಾವಿದ ನಾರಾಯಣ ಭಟ್ಟ ಮೊಟ್ಟೆಪಾಲ ಅಧ್ಯಕ್ಷತೆ ವಹಿಸಿದ್ದರು.

    ಮೈತ್ರಿ ಕಲಾ ಬಳಗದ ಅಧ್ಯಕ್ಷ ಗಣಪತಿ ಕಂಚಿಪಾಲ ಇದ್ದರು. ಕರ್ನಾಟಕ ಕಲಾ ಸನ್ನಿಧಿಯ ಸಹಕಾರ್ಯದರ್ಶಿ ದಿನೇಶ ಗೌಡ ಸ್ವಾಗತಿಸಿ, ನಿರ್ವಹಿಸಿದರು. ಅಧ್ಯಕ್ಷ ಶ್ರೀಧರ ಅಣಲಗಾರ ವಂದಿಸಿದರು.

    ನಂತರ ಸ್ಥಳೀಯ ವಿದ್ಯಾರ್ಥಿಗಳನ್ನೊಳಗೊಂಡು ಸುಧನ್ವ ಕಾಳಗ ತಾಳಮದ್ದಲೆ ನಡೆಯಿತು. ಹಿಮ್ಮೇಳದಲ್ಲಿ ಗಣೇಶ ಯಾಜಿ, ಚಂದ್ರಶೇಖರ ಕುಂಟೆಮನೆ, ಸುಬ್ರಾಯ ಭಟ್ಟ ಗಾಣಗದ್ದೆ, ವಿವೇಕ ಮರಾಠಿ ಭಾಗವಹಿಸಿದ್ದರು. ಆದಿತ್ಯ ಹೆಗಡೆ ಹೊಸನಗರ, ದಿನೇಶ ಭಟ್ಟ ಅಬ್ಬಿತೋಟ, ಶ್ರೀಧರ ಅಣಲಗಾರ, ದೀಪಕ ಭಟ್ಟ ಕುಂಕಿ, ಮಂಜುನಾಥ ಬಾಳೆಜಡ್ಡಿ, ದರ್ಶನ ಕಲ್ಮನೆ, ಗಗನ ಹುಲಿಯಾನಗದ್ದೆ, ವಂದಿತಾ ಮೂಲೆಗದ್ದೆ, ಜಯಂತ ಅಬ್ಬಿತೋಟ ಅರ್ಥಧಾರಿಗಳಾಗಿ ಪಾತ್ರ ಚಿತ್ರಣ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts