ಎನ್.ಆರ್.ಪುರ: ವಿದ್ಯಾರ್ಥಿಗಳು ಹಲ್ಲಿನ ಆರೋಗ್ಯದ ಕಡೆ ಗಮನ ನೀಡಬೇಕು ಎಂದು ಮಣಿಪಾಲ್ ಡೆಂಟಲ್ ಕಾಲೇಜಿನ ದಂತ ವೈದ್ಯ ಡಾ.ಶಶಿಧರ್ ಆಚಾರ್ಯ ಸಲಹೆ ನೀಡಿದರು.
ಅಳಲಗೆರೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಲಯನ್ಸ್ ಕ್ಲಬ್ ಆಯೋಜಿಸಿದ್ದ ಉಚಿತ ದಂತ ತಪಾಸಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಯೊಬ್ಬರೂ ದಿನಕ್ಕೆ 2 ಬಾರಿ ಹಲ್ಲನ್ನು ಬ್ರಷ್ ನಿಂದ ಉಜ್ಜಬೇಕು. ಬಾಯಿ ಸ್ವಚ್ಛವಾಗಿಟ್ಟುಕೊಳ್ಳಬೇಕು. ಆಹಾರ ತಿಂದ ನಂತರ ಬಾಯಿಗೆ ನೀರು ಹಾಕಿ ಚೆನ್ನಾಗಿ ಮುಕ್ಕಳಿಸಬೇಕು. ಸುಂದರವಾದ ಹಲ್ಲು ಮುಖದ ಸೌಂದರ್ಯ ಹೆಚ್ಚಿಸುತ್ತದೆ ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ರವಿಚಂದ್ರ ಮಾತನಾಡಿ, ಲಯನ್ಸ್ ಕ್ಲಬ್ ಹಲವಾರು ಸಮಾಜಮುಖಿ ಕಾರ್ಯಕ್ರಮ ನಡೆಸುತ್ತಿದೆ. ಈ ವರ್ಷ ವನಮಹೋತ್ಸವ, ವಿಶೇಷ ವಿಕಲ ಚೇತನ ಮಕ್ಕಳಿಗೆ ಶಾಲೆ ಪರಿಕರ ನೀಡಲಾಗಿದೆ. ಇಂದು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಉಚಿತ ದಂತ ತಪಾಸಣೆ ಶಿಬಿರ ಏರ್ಪಡಿಸಿದ್ದು, ಮಕ್ಕಳು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಲಯನ್ಸ್ ಕ್ಲಬ್ 317-ಡಿ ಜಿಲ್ಲಾ ಚೇರ್ಮನ್ ಪಿ.ಸಿಜು ಮಾತನಾಡಿ, ಲಯನ್ಸ್ ಕ್ಲಬ್ ಅಂತರಾಷ್ಟೀಯ ಸೇವಾ ಸಂಸ್ಥೆಯಾಗಿದ್ದು ವಿಶ್ವದ 210 ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ನಮ್ಮ ಲಯನ್ಸ್ ಘಟಕದಿಂದ ಅಂತರಾಷ್ಟೀಯ ಲಯನ್ಸ್ ಕ್ಲಬ್ಗಳಿಗೆ ಹಣ ನೀಡುತ್ತೇವೆ. ಇಲ್ಲಿನ ಲ ಕ್ಲಬ್ಗಳಿಗೂ ಅಂತರಾಷ್ಟೀಯ ಲಯನ್ಸ್ ಕ್ಲಬ್ ಸಹಾಯ ಹಸ್ತ ನೀಡುತ್ತಿದೆ ಎಂದರು.
ಮಣಿಪಾಲ್ ಡೆಂಟಲ್ ಆಸ್ಪತ್ರೆಯ 25 ವೈದ್ಯರ ತಂಡ ಶಾಲಾ ಮಕ್ಕಳು, ಶಾಲಾ ಶಿಕ್ಷಕರು, ಸಿಬ್ಬಂದಿಗೆ ದಂತ ತಪಾಸಣೆ ನಡೆಸಿದರು. ಕಾರ್ಯದರ್ಶಿ ಕೃಷ್ಣಯ್ಯ ಆಚಾರ್, ಖಜಾಂಚಿ ಜಾನಕಿರಾಂ ರೆಡ್ಡಿ, ಸದಸ್ಯ ಎ.ಎನ್.ರವೀಂದ್ರ, ಮುರಳೀಧರ್, ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಚಾರ್ಯ ಪೂರ್ಣಿಮ, ಶಿಕ್ಷಕ ಮಹಾತ್ಮಾಗಾಂಧಿ ಇದ್ದರು.