ಮದ್ದೂರು: ತಾಲೂಕಿನ ಚಾಪುರದೊಡ್ಡಿ ಗ್ರಾಮದ ಶ್ರೀ ಪಟ್ಟಲದಮ್ಮ ಮತ್ತು ಶ್ರೀ ಚಿಕ್ಕಮ್ಮ ದೇವಿಯ 35ನೇ ವಾರ್ಷಿಕ ಮಹೋತ್ಸವ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಶುಕ್ರವಾರ ರಾತ್ರಿ ನಡೆಯಿತು.
ಮಹೋತ್ಸವ ಅಂಗವಾಗಿ ಬೆಳಗ್ಗೆ 9 ಗಂಟೆಗೆ ಮೀಸಲು ನೀರು ತರುವುದು ಮತ್ತು ಪೂಜಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಸಂಜೆ 4 ಗಂಟೆಗೆ ಪಟ್ಟಲದಮ್ಮ ದೇವಸ್ಥಾನದ ಆವರಣದಲ್ಲಿ ಸಾವಿರಾರು ಭಕ್ತಾದಿಗಳಿಗೆ ಮಾಂಸಾಹಾರ ಹಾಗೂ ಸಸ್ಯಹಾರಿ ಅನ್ನ ಸಂತರ್ಪಣೆ ಏರ್ಪಡಿಸಿದ್ದು ವಿಶೇಷವಾಗಿತ್ತು.
ದೇಗುಲದ ಆವರಣದಲ್ಲಿ ಎರಡು ದಿನಗಳ ಕಾಲ ಹೋಮ, ಹವನ, ಮಹಾಮಂಗಳಾರತಿ ವಿಶೇಷ ಪೂಜಾ ಕೈಂಕರ್ಯ ಹಮ್ಮಿಕೊಳ್ಳಲಾಗಿತ್ತು. ಚಾಪುರದೊಡ್ಡಿ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ದೇಗುಲಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ ದೇವರ ಕೃಪೆಗೆ ಒಳಗಾದರು.
ದೇಗುಲದ ಪ್ರಧಾನ ಅರ್ಚಕರಾದ ಭಾಗ್ಯಮ್ಮ ಅವರು ಪೂಜಾ ಕಾರ್ಯಕ್ರಮ ನೇತೃತ್ವವಹಿಸಿದ್ದರು. ಮುಖಂಡರಾದ ರಾಜಣ್ಣ, ಸಿದ್ದರಾಜು, ಚಾಪುರದೊಡ್ಡಿ ಸುರೇಶ್, ನಿವೃತ್ತ ಮುಖ್ಯ ಶಿಕ್ಷಕ ಸಿ.ಕೆ.ತಮ್ಮಯ್ಯ ಸೇರಿದಂತೆ ಇತರರು ಇದ್ದರು.