ಬೆಂಗಳೂರು: ಇತ್ತೀಚೆಗೆಷ್ಟೇ ಕರೊನಾ ಸೋಂಕಿತ ಪೊಲೀಸ್ ಪೇದೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದರು. ಇದರ ಬೆನ್ನಲ್ಲೇ ಸೋಂಕಿತ ವೃದ್ಧೆಯೊಬ್ಬರು ಇಂದು ಕೆ.ಸಿ.ಜನರಲ್ ಆಸ್ಪತ್ರೆಯ ಟಾಯ್ಲೆಟ್ನಲ್ಲಿ ನೇಣು ಬಿಗಿದುಕೊಂಡು ಸತ್ತಿದ್ದಾರೆ.
ಕುಣಿಗಲ್ ಮೂಲದ ರಾಜಗೋಪಾಲನಗರ ನಿವಾಸಿ ಶುಕ್ರವಾರ ಬೆಳಗಿನಜಾವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಗೆ 60 ವರ್ಷ ವಯಸ್ಸಾಗಿತ್ತು. ಜೂ.18ರಂದು ಜ್ವರ, ನೆಗಡೆಯಿಂದ ಕೆ.ಸಿ. ಜನರಲ್ ಆಸ್ಪತ್ರೆಗೆ ದಾಖಲಾಗಿದ್ದರು. ಇವರ ಗಂಟಲ ದ್ರವ ಮಾದರಿ ಪಡೆದು ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಇರುವುದು ದೃಢಪಟ್ಟಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಕೋವಿಡ್ ವಾರ್ಡ್ಗೆ ಸ್ಥಳಾಂತರ ಮಾಡಲಾಗಿತ್ತು. ವೃದ್ಧೆಯ ಸೊಸೆ ಮತ್ತು ಮೊಮ್ಮಗ ಸೇರಿ ನಾಲ್ವರಿಗೆ ಸೋಂಕು ಕಾಣಿಸಿಕೊಂಡು ಇತ್ತೀಚೆಗೆ ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಾಗಿದ್ದರು. ಇದನ್ನೂ ಓದಿರಿ ಕಪ್ಪು-ಬಿಳುಪು ಟಿವಿ ಮಾರಾಟ ಮಾಡಿದ್ರೆ ಕೋಟಿ ಹಣ ಸಿಗುತ್ತೆ!
ವೃದ್ಧೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಆರೋಗ್ಯ ಸಾಕಷ್ಟು ಸುಧಾರಿಸಿತ್ತು. ಈ ನಡುವೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ವೃದ್ಧೆಗೆ 4 ಬಾರಿ ಮಾನಸಿಕ ತಜ್ಞರಿಂದ ಕೌನ್ಸಲಿಂಗ್ ಮಾಡಿಸಲಾಗಿತ್ತು. ಇಷ್ಟಾದರೂ ಈ ವೃದ್ಧೆ ನೇಣುಬಿಗಿದುಕೊಂಡು ಸತ್ತಿದ್ದಾರೆ.
ಜೂ.22ರಂದು ರಾಜ್ಯ ಪೊಲೀಸ್ ಮೀಸಲು ಪಡೆಯ ಮಂಡ್ಯ ಮೂಲದ 50 ವರ್ಷದ ಮುಖ್ಯಪೇದೆಯೊಬ್ಬರು ಆಸ್ಪತ್ರೆಗೆ ಬರುವ ಮಾರ್ಗದಲ್ಲಿ ಬಸ್ನಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದರು.
ಇನ್ನು ಬೀದರ್, ಹುಬ್ಬಳ್ಳಿ, ಶಿವಮೊಗ್ಗ… ಇತರೆಡೆ ಕ್ವಾರಂಟೈನ್ ಕೇಂದ್ರದಲ್ಲೇ ಹಲವರು ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಬದುಕನ್ನೇ ದುರಂತ ಅಂತ್ಯವಾಗಿಸಿಕೊಂಡಿದ್ದಾರೆ. ಈಗ ಕೋವಿಡ್ ಸೋಂಕಿತರು ಆತ್ಮಹತ್ಯೆ ಹಾದಿ ಹಿಡಿಯುತ್ತಿರುವುದು ಕಳವಳಕಾರಿ ವಿಷಯ.