ನವದೆಹಲಿ: ದೇಶದ ಇತಿಹಾಸದಲ್ಲಿ ಅಂತ್ಯಂತ ಭೀಕರ ಘಟನೆ ನಡೆದು ಇಂದಿಗೆ 22 ವರ್ಷಗಳು ಕಳೆದಿವೆ. 2001ರ ಡಿ.13ರಂದು ಸಂಸತ್ ಭವನದ ಮೇಲೆ ಉಗ್ರರ ದಾಳಿ ನಡೆದಿತ್ತು. ಇದೇ ದಿನ ಇದೀಗ ಇಡೀ ದೇಶ ಮತ್ತೊಂದು ಕರಾಳ ಘಟನೆಗೆ ಸಾಕ್ಷಿಯಾಗಿದೆ. ಇತ್ತೀಚೆಗಷ್ಟೇ ಉದ್ಘಾಟನೆಯಾದ ನೂತನ ಸಂಸತ್ ಭವನದಲ್ಲಿ ಭಾರಿ ಭದ್ರತಾ ಲೋಪ ಕಂಡುಬಂದಿದ್ದು, ಎರಡು ಪ್ರತ್ಯೇಕ ಘಟನೆಯಲ್ಲಿ ನಾಲ್ವರು ಅಪರಿಚಿತರು ಸದನದ ಒಳಗೆ ಮತ್ತು ಹೊರಗೆ ಭಯದ ವಾತಾವರಣ ಸೃಷ್ಟಿ ಮಾಡಿದ್ದಾರೆ.
ಸದನ ಒಳಗೆ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಇಬ್ಬರು ಯುವಕರು ಹಳದಿ ಬಣ್ಣ ಹೊರಸೂಸುವ ವಸ್ತುವನ್ನು ಹಿಡಿದು ಸ್ಪೀಕರ್ ಓಂ ಬಿರ್ಲಾ ಕಚೇರಿಯತ್ತ ನುಗ್ಗಿದರು. ಇದನ್ನು ಕಂಡು ಭಯಭೀತರಾದ ಸಂಸದರು ದಿಕ್ಕಾಪಾಲಾಗಿ ಓಡಿದರು. ಭಾರಿ ಭದ್ರತಾ ವ್ಯವಸ್ಥೆ ಇರುವ ಲೋಕಸಭೆಯ ಒಳಗೆ ಅಪರಿಚಿತರು ಏಕಾಏಕಿ ನುಗ್ಗಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಇದೀಗ ತಿಳಿದುಬಂದಿರುವ ಮಾಹಿತಿ ಪ್ರಕಾರ ಮಾಹಿತಿ ಪ್ರಕಾರ ಆರೋಪಿಗಳಲ್ಲಿ ಸಾಗರ್ ಶರ್ಮ ಎಂಬಾತ ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಹೆಸರಲ್ಲಿ ಪಾಸ್ ಪಡೆದು ನುಗ್ಗಿದ್ದಾನೆ. ಮತ್ತೊಬ್ಬ ಆರೋಪಿ ಮೈಸೂರು ಮೂಲದ ಇಂಜಿನಿಯರ್ ಮನೋರಂಜನ್ ಡಿ ಎಂದು ಗುರುತಿಸಲಾಗಿದೆ.ಇಬ್ಬರನ್ನು ಸಹ ಬಂಧಿಸಲಾಗಿದೆ.
ಆರೋಪಿಗಳಿಬ್ಬರು ಸಂಸದ ಪ್ರತಾಪ್ ಸಿಂಹ ಅವರ ಹೆಸರಿನಲ್ಲಿ ಪಾಸ್ ಪಡೆದಿದ್ದಾರೆ ಎಂದು ಉಚ್ಛಾಟಿತ ಬಿಎಸ್ಪಿ ಸಂಸದ ಡ್ಯಾನಿಶ್ ಅಲಿ ಸಹ ಗಂಭೀರ ಆರೋಪ ಮಾಡಿದ್ದಾರೆ.
VIDEO | “Two people jumped from the public gallery and there was smoke. There was chaos all around. Both of them were overpowered by security officials,” says MP Danish Ali on reported security breach in Lok Sabha. #Parliament pic.twitter.com/fJIFOnkgdb
— Press Trust of India (@PTI_News) December 13, 2023
ಇದೇ ಸಮಯದಲ್ಲಿ ಓರ್ವ ಪುರುಷ ಮತ್ತು ಮಹಿಳೆ ಸಂಸತ್ತಿನ ಹೊರಭಾಗದಲ್ಲಿ ಹಳದಿ ಬಣ್ಣ ಹೊರಸೂಸುವ ವಸ್ತುವನ್ನು ಹಿಡಿದು ಪ್ರತಿಭಟನೆ ನಡೆಸಿದರು. ಇಬ್ಬರು ಸಾರಿಗೆ ಭವನದ ಎದುರು ಪೊಲೀಸರು ಬಂಧಿಸಿದ್ದು, ಅವರನ್ನು 42 ವರ್ಷದ ನೀಲಂ ಮತ್ತು 25 ವರ್ಷದ ಅಮೋಲ್ ಶಿಂಧೆ ಎಂದು ಗುರುತಿಸಲಾಗಿದೆ. ನೀಲಂ ಹರಿಯಾಣದ ಹಿಸಾರ್ ನಿವಾಸಿ ಮತ್ತು ಅಮೋಲ್ ಶಿಂಧೆ ಮಹಾರಾಷ್ಟ್ರದ ಲಾತೂರ್ ನಿವಾಸಿಯಾಗಿದ್ದು, ಒಟ್ಟು ನಾಲ್ವರನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.
ಘಟನೆಯ ಬಗ್ಗೆ ಮಾತನಾಡಿರುವ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ, ಶೂನ್ಯ ಸಮಯದಲ್ಲಿ ನಡೆದ ಘಟನೆಯ ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ. ದೆಹಲಿ ಪೊಲೀಸರಿಗೆ ಅಗತ್ಯ ಸೂಚನೆಗಳನ್ನು ಸಹ ನೀಡಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ, ಇದು ಕೇವಲ ಹೊಗೆ ಎಂದು ಕಂಡುಬಂದಿದೆ. ಹೊಗೆಯ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದರು ಹೇಳಿದರು. ಸದ್ಯ ಇಬ್ಬರನ್ನೂ ಬಂಧಿಸಲಾಗಿದ್ದು, ಅವರಲ್ಲಿದ್ದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಂಸತ್ತಿನ ಹೊರಗಿದ್ದ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿಸಿದರು. (ಏಜೆನ್ಸೀಸ್)
ನೂತನ ಸಂಸತ್ ಭವನದ ಒಳಗೆ ನುಗ್ಗಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಆರೋಪಿಗಳಿಬ್ಬರು ಅರೆಸ್ಟ್