ಪರಶುರಾಮಪುರ: ಸಮೀಪದ ಕಡೇಹುಡೆ ಗ್ರಾಮದಲ್ಲಿ ಶನಿವಾರ ಸಂಜೆ ಶ್ರೀ ಶನೇಶ್ಚರಸ್ವಾಮಿ ಬ್ರಹ್ಮರಥೋತ್ಸವ ಜರುಗಿತು.
ಬೆಳಗ್ಗೆ ಶನೇಶ್ಚರಸ್ವಾಮಿ ಕಳಸ ಸ್ಥಾಪನೆ, ಅಗ್ನಿಗೊಂಡ ಹೋಮ, ನೆರೆದ ಭಕ್ತರಿಗೆ ಅನ್ನಸಂತರ್ಪಣೆ ಬಳಿಕ ಮುಕ್ತಿಬಾವುಟ ಹರಾಜು ನಡೆಯಿತು.
ಸೂರ್ಯಾಸ್ತದ ವೇಳೆಗೆ ಆಂಧ್ರ-ಕರ್ನಾಟಕದಿಂದ ಭಕ್ತರು ಹಣ್ಣು, ಕಾಯಿ, ದೀಪ, ಧೂಪ, ಧನ, ಕನಕಗಳನ್ನು ಸ್ವಾಮಿಗೆ ಅರ್ಪಿಸಿದರು.
ಹರಕೆ ಹೊತ್ತ ಭಕ್ತರು ರಥಕ್ಕೆ ಬಾಳೆಕಂದು, ಎಳನೀರು, ಬೃಹತ್ ಗಾತ್ರದ ಹೂವಿನ ಹಾರ, ಮಾವಿನ ತೋರಣ, ಬಾಳೆಕಂದುಗಳನ್ನು ಕಟ್ಟಿ ರಥದ ಪ್ರದಕ್ಷಿಣೆ ಹಾಕಿದರು. ಬಳಿಕ ರಥೋತ್ಸವ ಜರುಗಿತು.
ಸಂಜೆ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶನಿವಾರ ರಾತ್ರಿಯಿಡೀ ಸ್ವಾಮಿಯ ಉತ್ಸವವನ್ನು ನಡೆಸಿದ ಗ್ರಾಮಸ್ಥರು ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಗ್ರಾಪಂ ಅಧ್ಯಕ್ಷೆ ಸರೋಜಾ, ಸದಸ್ಯರಾದ ಮಲ್ಲೇಶಯ್ಯ, ಮಲ್ಲಿಕಾರ್ಜುನ, ರೂಪಾ, ಭಾರತಿ, ದೇವಸ್ಥಾನ ಸಮಿತಿ ಪದಾಧಿಕಾರಿಗಳಾದ ರಾಮದಾಸಪ್ಪ, ಲೋಕಿಸ್ವಾಮಿ, ಬಿ.ಎಲ್.ರಾಜೇಶ, ಪಾಂಡುರಂಗಪ್ಪ, ನರಸಿಂಹಪ್ಪ, ವೆಂಕಟೇಶಪ್ಪ, ತಿಪ್ಪೇಸ್ವಾಮಿ ಪಾಲ್ಗೊಂಡಿದ್ದರು.