ತರೀಕೆರೆ: ಎಂ.ಸಿ.ಹಳ್ಳಿಯ ಭದ್ರಗಿರಿ ಶ್ರೀ ಶಿವ ಸುಬ್ರಹ್ಮಣ್ಯಸ್ವಾಮಿ ದೇಗುಲದಲ್ಲಿ ಮಾ. 24ರಂದು ನಡೆಯುವ ಪಂಗುನಿ ಉತ್ತೀರ ತೀರ್ಥ ಕಾವಡಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಮಂಗಳವಾರ ಧ್ವಜಾರೋಹಣ ನೆರವೇರಿಸಲಾಯಿತು.
ಪ್ರಾತಃ ಕಾಲ ದೇಗುಲದ ಪ್ರಧಾನ ಅರ್ಚಕ ಮರುಗೇಶ್ ಸ್ವಾಮಿ ನೇತೃತ್ವದಲ್ಲಿ ದೇವರಿಗೆ ಹಾಲು, ತುಪ್ಪ, ಮೊಸರು, ಎಳೆನೀರು, ಜೇನುತುಪ್ಪ ಸೇರಿ ಸುಗಂಧ ದ್ರವ್ಯಾಗಳಿಂದ ಅಭಿಷೇಕ ನಡೆಸಿ, ಗಣಪತಿ ಹೋಮ ನಡೆಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಚಿಕ್ಕಮಗಳೂರು, ಲಿಂಗದಹಳ್ಳಿ, ತರೀಕೆರೆ, ಭದ್ರಾವತಿ, ಲಕ್ಕವಳ್ಳಿ, ಎಂ.ಸಿ.ಹಳ್ಳಿ ಸೇರಿ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ದೇವರ ದರ್ಶನ ಪಡೆದು ತೀರ್ಥ ಪ್ರಸಾದ ಸ್ವೀಕರಿಸಿದರು. ಬಿಳಕಿ ಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಬಾಳೆಹೊನ್ನೂರು ಶಾಖಾ ಮಠದ ಯಡಿಯೂರು ಶ್ರೀ ಸಿದ್ದಲಿಂಗೇಶ್ವರ ಮಹಾ ಸ್ವಾಮೀಜಿ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಆರ್ಎಸ್ಎಸ್ ರಾಜ್ಯ ಕಾರ್ಯದರ್ಶಿ ರಾಮಪ್ಪ, ಗ್ರಾಪಂ ಅಧ್ಯಕ್ಷ ಎನ್.ರಾಮೇಗೌಡ, ದೇಗುಲ ಆಡಳಿತ ಮಂಡಳಿ ಅಧ್ಯಕ್ಷ ಎ.ಚಂದ್ರಘೋಷನ್, ಶಿವಮೊಗ್ಗ ವಿಶ್ವ ಹಿಂದುಪರಿಷತ್ ಕಾರ್ಯದರ್ಶಿ ಮಂಜುನಾಥ್ ಮತ್ತಿತರರು ಭಾಗವಹಿಸಿ ಭಕ್ತಿ ಸಮರ್ಪಿಸಿದರು.