ಕಾರವಾರ/ಯಲ್ಲಾಪುರ: ಯಲ್ಲಾಪುರ ತಾಲೂಕಿನ ಇಡಗುಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಿಂಗದಬೈಲ್ ಗ್ರಾಮದಲ್ಲಿ ರೂಪುಗೊಂಡ ಡಮಾಮಿ ಸಿದ್ದಿ ಸಮುದಾಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ಪಂಚಾಯತ್ರಾಜ್ ಇಲಾಖೆಯ ಆಯುಕ್ತೆ ಪ್ರಿಯಾಂಕಾ ಮೇರಿ ಪ್ರಾನ್ಸಿಸ್ ಭೇಟಿ ನೀಡಿ ಮಾಹಿತಿ ಪಡೆದರು.
ಸಿದ್ದಿ ಸಮುದಾಯದ ಮಹಿಳೆಯರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಎನ್ಆರ್ಎಲ್ಎಂ ಯೋಜನೆಯಡಿ ಜಿಲ್ಲಾ ಪಂಚಾಯಿತಿಯಿAದ ಹೋಂ ಸ್ಟೇ ಸಿದ್ಧ ಮಾಡಲಾಗಿತ್ತು. ಅದರ ನಿರ್ವಹಣೆಯನ್ನು ಸಿದ್ದಿ ಒಕ್ಕೂಟವೊಂದಕ್ಕೆ ನೀಡಲಾಗಿತ್ತು. ಫೆ. 3 ರಂದು ಉದ್ಘಾಟನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ, ಸಿದ್ದಿ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ. ಹೋಂ ಸ್ಟೇ ಹೆಸರನ್ನು ಡಮಾಮಿ ಸಮುದಾಯ ಪ್ರವಾಸೋದ್ಯಮ ಕ್ಷೇತ್ರ ಎಂದು ಬದಲಿಸಲಾಗಿದೆ ಎಂದು ಒಕ್ಕೂಟದ ಮಾಜಿ ಅಧ್ಯಕ್ಷೆ ಆಕ್ಷೇಪಿಸಿದ್ದರು. ಇದರಿಂದ ಫೆ. 3ರಂದು ಆಯೋಜಿಸಿದ ಉದ್ಘಾಟನಾ ಕಾರ್ಯಕ್ರಮ ರದ್ದು ಮಾಡಲಾಗಿತ್ತು. ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಂಎಲ್ಸಿ ಶಾಂತಾರಾಮ ಸಿದ್ದಿ ಅವರಿಗೆ ಸಿದ್ದಿ ಸಮುದಾಯಗಳು ತಮ್ಮ ಆಕ್ಷೇಪಣೆ ಸಲ್ಲಿಸಿದ್ದವು. ಈ ಹಿನ್ನೆಲೆಯಲ್ಲಿ ಮೇರಿ ಪ್ರಾನ್ಸಿಸ್ ಅವರು ಆಗಮಿಸಿ ಪರಿಶೀಲನೆ ನಡೆಸಿದರು.
ಸಿದ್ದಿ ಸಮುದಾಯದ ಮಹಿಳೆಯರೊಂದಿಗೆ ಕಾಲ್ನಡಿಗೆಯ ಮೂಲಕ ಅರಣ್ಯ ಚಾರಣ ಮಾಡಿ ವಿವಿಧ ರೀತಿಯ ಔಷಧ ಸಸ್ಯ, ಜೇನು ಗೂಡು, ಪಕ್ಷಿಗಳು, ಕಿರು ಅರಣ್ಯ ಉತ್ಪನ್ನಗಳು, ಗಡ್ಡೆ ಗೆಣಸು ಹಾಗೂ ಅರಣ್ಯ ವೃಕ್ಷಗಳ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡರು.
ನಂತರ ಸಮುದಾಯದ ಪಾರಂಪರಿಕ ಸಂಗೀತ, ಹಾಡುಗಳು ಹಾಗೂ ನೃತ್ಯವನ್ನು ವೀಕ್ಷಿಸಿ, ಸಿದ್ದಿಗಳು ಸಿದ್ಧ ಮಾಡಿದ ಅಡುಗೆ ಊಟ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಮುದಾಯ ಪ್ರವಾಸೋದ್ಯಕ್ಕೆ ವಿಫುಲ ಅವಕಾಶವಿದೆ. ಸಿದ್ದಿ ಸಮುದಾಯವ್ನು ಮುಖ್ಯ ವಾಹಿನಿಗೆ ತರುವಲ್ಲಿ ಈ ಯೋಜನೆ ಪ್ರಮುಖ ಹೆಜ್ಜೆಯಾಗಲಿದೆ. ಒಕ್ಕೂಟದ ಸದಸ್ಯರು ಇಲ್ಲಿಗೆ ಆಗಮಿಸುವ ಪ್ರವಾಸಿಗರನ್ನ ಉಪಚರಿಸುವ ರೀತಿ, ವ್ಯವಹಾರ ಜ್ಞಾನ, ಮಾತನಾಡುವ ಕೌಶಲ್ಯಗಳನ್ನು ವೃದ್ಧಿಸಿಕೊಂಡಲ್ಲಿ ಮುಂದಿನ ದಿನಗಳಲ್ಲಿ ತಮ್ಮತ್ತ ಹೆಚ್ಚು ಹೆಚ್ಚು ಆಕರ್ಷಿಸುವಲ್ಲಿ ಯಾವುದೇ ಸಂಶಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನಂತರ ಅವರು ಮದ್ನೂರು ಗ್ರಾಪಂನಲ್ಲಿ ಕೂಸಿನ ಮನೆ, ಗ್ರಂಥಾಲಯ, ಕೋಳಿ ಶೆಡ್ ಕಾಮಗಾರಿ ಪರಿಶೀಲಿಸಿದರು. ಕಿರವತ್ತಿ ಗ್ರಾಮ ಪಂಚಾಯತಿಯ ಏಕಕದಂತ ಸಂಜೀವಿನಿ ಜಿಪಿಎಲ್ಎಫ್ನ ಸಂಜೀವಿನಿ ಮಾರ್ಟ್ನ ಉತ್ಪನ್ನಗಳ ಮೌಲ್ಯವರ್ಧನೆ, ಪ್ಯಾಕಿಂಗ್, ಬ್ರ್ಯಾಂಡಿAಗ್ ಹಾಗೂ ಮಾರುಕಟ್ಟೆ ಸಂಪರ್ಕ ಕುರಿತ ಚರ್ಚಿಸಿ ಸಲಹೆ ಸೂಚನೆ ನೀಡಿದರು.
ಜಿಪಂ ಸಿಇಒ ಈಶ್ವರ ಕಾಂದೂ, ಉಪ ಕಾರ್ಯದರ್ಶಿ ನಾಗೇಶ ರಾಯ್ಕರ್, ಯೋಜನಾ ನಿರ್ದೇಶಕ(ಡಿಆರ್ಡಿಎ) ಕರೀಂ ಅಸಾದಿ, ತಾಲೂಕು ಪಂಚಾಯಿತಿ ಪ್ರಭಾರ ಇಒ ಎನ್.ಆರ್. ಹೆಗಡೆ, ನರೇಗಾ ಸಹಾಯಕ ನಿರ್ದೇಶಕ ಮಂಜುನಾಥ ಆಗೇರ ಇದ್ದರು.
ಇದನ್ನೂ ಓದಿ: ಅಂಕೋಲಾ ಬಳಿ ಬಸ್ ಪಲ್ಟಿ