ನ್ಯೂಯಾರ್ಕ್: ಚೀನಾದ ಕುಮ್ಮಕ್ಕಿನೊಂದಿಗೆ ಪಾಕಿಸ್ತಾನ ಮತ್ತೆ ಕಾಶ್ಮೀರದ ವಿಚಾರವನ್ನು ವಿಶ್ವಸಂಸ್ಥೆಯ ಭದ್ರತಾ ಸಮಿತಿ ಸಭೆಯಲ್ಲಿ ಪ್ರಸ್ತಾಪ ಮಾಡಿ ಭಾರಿ ಮುಖಭಂಗ ಅನುಭವಿಸಿದೆ. ಪಾಕಿಸ್ತಾನದ ವಾದದಲ್ಲಿ ಹುರುಳಿಲ್ಲ. ವಿಶ್ವಸಂಸ್ಥೆಯ ಸಮಯ ಕೊಡುವಷ್ಟು ಮಹತ್ವದ ವಿಚಾರ ಅದಲ್ಲ ಎಂದು ವಿಶ್ವಸಂಸ್ಥೆ ಹೇಳಿದ್ದಾಗಿ ಅಲ್ಲಿನ ಭಾರತದ ರಾಯಭಾರಿ ಟಿ.ಎಸ್.ತಿರುಮೂರ್ತಿ ತಿಳಿಸಿದ್ದಾರೆ.
ಕಾಶ್ಮೀರದ ವಿಚಾರ ಪ್ರಸ್ತಾಪಿಸಿದ ಪಾಕಿಸ್ತಾನ, ಅದನ್ನು ನಿರೂಪಿಸುವಲ್ಲಿ ಎಡವಿದ್ದಲ್ಲದೆ ಭದ್ರತಾ ಸಮಿತಿ ಸದಸ್ಯರ ಸಂದೇಹಗಳನ್ನು ನಿವಾರಿಸುವಲ್ಲೂ ವಿಫಲವಾಯಿತು. ಬಹುತೇಕ ಎಲ್ಲ ಸದಸ್ಯರು ಕಾಶ್ಮೀರ ವಿಚಾರ ಭಾರತ ಮತ್ತು ಪಾಕಿಸ್ತಾನದ ದ್ವಿಪಕ್ಷೀಯ ವಿಚಾರ ಎಂದು ಒಪ್ಪಿಕೊಂಡದ್ದಲ್ಲದೆ ಅದನ್ನು ಅದೇ ರೀತಿ ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ ಎಂದು ತಿರುಮೂರ್ತಿ ತಿಳಿಸಿದ್ದಾರೆ.
ಇದನ್ನೂ ಓದಿ: ಜಮ್ಮು-ಕಾಶ್ಮೀರಕ್ಕೆ ಮನೋಜ್ ಸಿನ್ಹಾ ನೂತನ ಎಲ್ಜಿ: ಮುರ್ಮು ರಾಜೀನಾಮೆ
ಹದಿನೈದು ಸದಸ್ಯರ ಭದ್ರತಾ ಸಮಿತಿ ಸಭೆ ಬುಧವಾರ ನಡೆದಿದ್ದು, ಪಾಕಿಸ್ತಾನ ಕಾಶ್ಮೀರದಲ್ಲಿ ಭಾರತದ ಸಂವಿಧಾನದ 370 ಮತ್ತು 35 ಎ ವಿಧಿಗಳನ್ನು ರದ್ದುಗೊಳಿಸಿರುವುದನ್ನು ಪ್ರಸ್ತಾಪಿಸಿದ್ದು, ಚೀನಾ ಅದಕ್ಕೆ ಬೆಂಬಲ ಸೂಚಿಸಿ ಕಾಶ್ಮೀರದ ವಿಚಾರವನ್ನು ವಿಶ್ವಸಂಸ್ಥೆಯ ಭದ್ರತಾ ಸಮಿತಿ ಪ್ರತ್ಯೇಕ ಸಭೆ ಕರೆದು ಚರ್ಚಿಸಬೇಕು ಎಂದು ಹೇಳಿತು. ಭದ್ರತಾ ಸಮಿತಿಯಲ್ಲಿ ಚೀನಾ ಖಾಯಂ ಸದಸ್ಯತ್ವ ಹೊಂದಿದೆ. ಆದಾಗ್ಯೂ, ಈ ಎರಡೂ ದೇಶಗಳ ಪ್ರಸ್ತಾವನೆಗೆ ಸದಸ್ಯರು ಕಿವಿಗೊಡಲಿಲ್ಲ. ಈ ಸಭೆ ಅನೌಪಚಾರಿಕ ಸಭೆಯಾಗಿತ್ತು. ಅಲ್ಲಿ ಯಾವುದೇ ನಿರ್ಣಯವನ್ನು ತೆಗೆದುಕೊಳ್ಳಲಾಗಿಲ್ಲ ಎಂದು ಅವರು ವಿವರಿಸಿದರು. (ಏಜೆನ್ಸೀಸ್)