ಪಡುಬಿದ್ರಿ: ಕಾಪು ತಾಲೂಕಿನ ಪಡುಬಿದ್ರಿ ಬ್ಲೂಫ್ಲ್ಯಾಗ್ ಬೀಚ್ ಮತ್ತು ಕಾಪು ದ್ವೀಪಸ್ತಂಭ ಬಳಿ ಸುಮಾರು 12 ಕೋಟಿ ರೂ. ವೆಚ್ಚದ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ನೀಡುವ ಸಲುವಾಗಿ ಪ್ರಸ್ತಾವನೆ ಕಳುಹಿಸುವಂತೆ ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಸಿ.ಪಿ.ಯೋಗೇಶ್ವರ್ ಅಧಿಕಾರಿಗಳಿಗೆ ಸೂಚಿಸಿದರು.
ಪಡುಬಿದ್ರಿ ಬ್ಲೂ ಫ್ಲ್ಯಾಗ್ ಬೀಚ್ ಮತ್ತು ಕಾಪು ಬೀಚ್ಗೆ ಶನಿವಾರ ಭೇಟಿ ನೀಡಿದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದರು.
ರಸ್ತೆ ವಿಸ್ತರಣೆಗೆ 10 ಕೋಟಿ: ಬ್ಲೂ ಫ್ಲ್ಯಾಗ್ ಬೀಚ್ನಲ್ಲಿ ವಾಹನದಟ್ಟಣೆೆ ಸುಸ್ಥಿತಿಗೆ ತರಲು ಎರಡು ಸೇತುವೆಗಳ ರಚನೆ ಸಹಿತವಾಗಿ ರಸ್ತೆ ವಿಸ್ತರಣೆಗಾಗಿ 10 ಕೋಟಿ ರೂ. ಹಾಗೂ ಕಾಪು ಲೈಟ್ಹೌಸ್ ಬೀಚ್ನ ಮೂಲ ಸೌಕರ್ಯ ಅಭಿವೃದ್ಧಿ ಸಹಿತ ಎರಡು ಬಂಡೆಗಳ ನಡುವೆ ಸಂಪರ್ಕ ಸೇತುವೆ ನಿರ್ಮಾಣಕ್ಕೆ 2 ಕೋಟಿ ರೂ. ಪ್ರಸ್ತಾವನೆಯು ಪ್ರವಾಸೋದ್ಯಮ ಇಲಾಖೆ ಬಳಿಯಿದೆ. ಅದಕ್ಕೆ ಶೀಘ್ರವಾಗಿ ಇಲಾಖಾ ಅನುಮೋದನೆ ನೀಡಲಾಗುವುದು ಎಂದರು.
ಬ್ಲೂ ಫ್ಲ್ಯಾಗ್ ಬೀಚ್ನ ಅಭಿವೃದ್ಧಿ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುವ ದೃಷ್ಟಿಯಿಂದ ಖಾಸಗಿಯವರಿಗೆ ಅವಕಾಶ ನೀಡಲಿದ್ದೇವೆ. ಇದರಿಂದಾಗಿ ಮುಂದೆ ಜಲಕ್ರೀಡೆಯ ಚಟುವಟಿಕೆಗಳಿಗೆ ಗುತ್ತಿಗೆ ಆಧಾರದಲ್ಲಿ ಜಿಲ್ಲಾಧಿಕಾರಿ ಮೂಲಕ ಟೆಂಡರ್ ಪ್ರಕ್ರಿಯೆಯೊಂದಿಗೆ ನೀಡಬಹುದಾಗಿದೆ.
ಜಿಲ್ಲಾಧಿಕಾರಿ ಜಿ.ಜಗದೀಶ್, ಶಾಸಕ ಲಾಲಾಜಿ ಮೆಂಡನ್, ಜಿಲ್ಲಾ ಪ್ರವಾಸೋದ್ಯಮ ಇಲಾಖಾ ಸಹಾಯಕ ನಿರ್ದೇಶಕ ಸೋಮಶೇಖರ್, ಕೃಷಿ ಇಲಾಖೆ ಉಪನಿರ್ದೇಶಕ ಚಂದ್ರಶೇಖರ ನಾಯಕ್, ಕರಾವಳಿ ಪ್ರವಾಸೋದ್ಯಮ ಸಂಸ್ಥೆಯ(ಆ್ಯಕ್ಟ್)ನ ಅಧ್ಯಕ್ಷ ಮನೋಹರ ಶೆಟ್ಟಿ ಕಾಪು ಮತ್ತು ಕಾರ್ಯದರ್ಶಿ ಗೌರವ್ ಶೇಣವ, ಬ್ಲೂ ಫ್ಲ್ಯಾಗ್ ಬೀಚ್ ಪ್ರಬಂಧಕ ವಿಜಯ್ ಶೆಟ್ಟಿ, ಅದಾನಿ ಕರ್ನಾಟಕ ಯೋಜನೆಗಳ ಅಧ್ಯಕ್ಷ ಕಿಶೋರ್ ಆಳ್ವ, ಯುಪಿಸಿಎಲ್ ಮಹಾಪ್ರಬಂಧಕ ಗಿರೀಶ್ ನಾವಡ, ಹಿರಿಯ ಪ್ರಬಂಧಕ ರವಿ ಜೀರೆ, ಕಾಪು ಪುರಸಭೆ ನಾಮನಿರ್ದೇಶಿತ ಸದಸ್ಯ ನವೀನ್ ಆನಂದ ಶ್ರೀಯಾನ್ ಉಪಸ್ಥಿತರಿದ್ದರು.