ಬೆಂಗಳೂರು: ಹ್ಯಾಟ್ರಿಕ್ ಗೆಲುವಿನಿಂದ ವಂಚಿತವಾಗಿರುವ ಕರ್ನಾಟಕ ತಂಡ ತನ್ನ ರಣಜಿ ಟ್ರೋಫಿಯ ಏಳನೇ ಹಾಗೂ ಅಂತಿಮ ಲೀಗ್ ಪಂದ್ಯದಲ್ಲಿ ಚಂಡೀಗಢ ತಂಡವನ್ನು ಎದುರಿಸಲಿದೆ. ಹುಬ್ಬಳ್ಳಿಯಲ್ಲಿ ಶುಕ್ರವಾರದಿಂದ ನಡೆಯಲಿರುವ ಈ ಪಂದ್ಯಕ್ಕೆ ಕೆಎಸ್ಸಿಎ ಮಂಗಳವಾರ ತಂಡವನ್ನು ಹೆಸರಿಸಿದೆ.
ಇತ್ತೀಚೆಗೆ ಶಿವಮೊಗ್ಗದಲ್ಲಿ 19 ವಯೋಮಿತಿಯ ಕೂಚ್ ಬೆಹಾರ್ ಟ್ರೋಫಿ ಗೆದ್ದ ಕರ್ನಾಟಕ ಕಿರಿಯರ ತಂಡದ ನಾಯಕ ಹಾಗೂ ಸ್ಪಿನ್ನರ್ ಧೀರಜ್ ಜೆ. ಗೌಡ ರಾಜ್ಯ ಸೀನಿಯರ್ ತಂಡದಲ್ಲಿ ಮೊದಲ ಬಾರಿಗೆ ಸ್ಥಾನ ಸಂಪಾದಿಸಿದ್ದಾರೆ. ಮತ್ತೋರ್ವ ಸ್ಪಿನ್ನರ್ ರೋಹಿತ್ ಕುಮಾರ್ ಅವರನ್ನು ತಂಡದಿಂದ ಹೊರಗಿಡಲಾಗಿದೆ. ಈ ನಡುವೆ ಭಾರತ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿರುವ ದೇವದತ್ ಪಡಿಕ್ಕಲ್ ಪಂದ್ಯಕ್ಕೆ ಅಲಭ್ಯರಾಗಿದ್ದು, ಅವರ ಬದಲಿಗೆ ಬೇರಾವುದೇ ಬ್ಯಾಟರ್ ಹೆಸರಿಸಲಾಗಿಲ್ಲ. ಬದಲಿಗೆ ತಂಡದ ಆಟಗಾರರ ಬಲವನ್ನು 16ರಿಂದ 15ಕ್ಕೆ ಇಳಿಸಲಾಗಿದೆ. ಪ್ರಸ್ತುತ ಸಿ ಗುಂಪಿನ ಅಂಕಪಟ್ಟಿಯಲ್ಲಿ 24 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿರುವ ಮಯಾಂಕ್ ಪಡೆ ಚಂಢೀಗಢ ವಿರುದ್ಧ ಮೊದಲ ಇನಿಂಗ್ಸ್ ಮುನ್ನಡೆಯೊಂದಿಗೆ ಡ್ರಾ ಸಾಧಿಸಿದರೂ ನಾಕೌಟ್ ಸ್ಥಾನ ಖಾತ್ರಿಪಡಿಸಿಕೊಳ್ಳಲಿದೆ.