ಬೆಂಗಳೂರು: ಈ ವರ್ಷದ ಕೊನೆಯ ಚಿತ್ರವಾಗಿ ಧನಂಜಯ್ ಅಭಿನಯದ ‘ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’ ಎಂಬ ಚಿತ್ರವು ಬಿಡುಗಡೆಯಾಗಲಿದೆ ಎಂಬ ಸುದ್ದಿ ಹೊಸದೇನಲ್ಲ. ಈಗ ಜಮಾಲಿಗುಡ್ಡದ ಜತೆಗೆ ಇನ್ನೊಂದು ಹೊಸ ಚಿತ್ರ ಅದೇ ದಿನ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಅದೇ ಯೋಗರಾಜ್ ಭಟ್ ನಿರ್ಮಾಣದ ‘ಪದವಿ ಪೂರ್ವ’
ಇದನ್ನೂ ಓದಿ: ಆತಂಕಪಡುವ ಅವಶ್ಯಕತೆ ಇಲ್ಲ; ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ವೇಲು ಹೇಳಿಕೆ
ಯೋಗರಾಜ್ ಸಿನಿಮಾಸ್ ಹಾಗೂ ರವಿ ಶಾಮನೂರ್ ಫಿಲಂಸ್ ಜಂಟಿಯಾಗಿ ನಿರ್ಮಿಸಿ ಹರಿಪ್ರಸಾದ್ ಜಯಣ್ಣ ನಿರ್ದೇಶಿಸಿರುವ ‘ಪದವಿ ಪೂರ್ವ’ ಚಿತ್ರ ಎರಡು ವರ್ಷಗಳ ಹಿಂದೆ ಪ್ರಾರಂಭವಾಗಿತ್ತು. ಕೆಲವು ತಿಂಗಳುಗಳ ಹಿಂದೆ ಚಿತ್ರೀಕರಣ ಮುಗಿದಿತ್ತು. ಚಿತ್ರ ಬಿಡುಗಡೆ ಯಾವಾಗ? ಎಂಬ ಪ್ರಶ್ನೆ ಕೇಳಿಬಂದ ಹಿನ್ನೆಲೆಯಲ್ಲಿ, ಚಿತ್ರತಂಡ ಉತ್ತರ ನೀಡಿದೆ. ಚಿತ್ರವನ್ನು ಇದೇ ಡಿಸೆಂಬರ್ 30ರಂದು ರಾಜ್ಯಾದ್ಯಂತ ಬಿಡುಗಡೆ ಮಾಡುವುದಾಗಿ ಘೋಷಿಸಲಾಗಿದೆ.
ಹೊಸಬರ ದಂಡೇ ಇರುವ ಈ ಚಿತ್ರಕ್ಕೆ ಪೃಥ್ವಿ ಶಾಮನೂರು ನಾಯಕನಾದರೆ, ಅಂಜಲಿ ಅನೀಶ್ ಮತ್ತು ಯಶ ಶಿವಕುಮಾರ್ ನಾಯಕಿಯಾಗಿ ಅಭಿನಯಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಶರತ್ ಲೋಹಿತಾಶ್ವ, ರಂಗಾಯಣ ರಘು, ‘ರಾಮ ರಾಮಾ ರೇ’ ಖ್ಯಾತಿಯ ನಟರಾಜ್ ಭಟ್ ನಟಿಸಿದ್ದು, ಯೋಗರಾಜ್ ಭಟ್, ಅದಿತಿ ಪ್ರಭುದೇವ, ದಿವ್ಯ ಉರುಡುಗ, ಪ್ರಭು ಮುಂಡ್ಕೂರು, ಶ್ರೀಮಹದೇವ್ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಚಿತ್ರದ ಹೆಸರೇ ಹೇಳುವಂತೆ, ಪದವಿ ಪೂರ್ವದ ಶಿಕ್ಷಣದ ಸಮಯದಲ್ಲಿ ವಿದ್ಯಾರ್ಥಿಗಳ ಪ್ರೀತಿ ಮತ್ತು ಸ್ನೇಹದ ಕಥೆಯನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ.
ಇದನ್ನೂ ಓದಿ: ಯುವ ರೈತನ ಜತೆ ಸಪ್ತಪದಿ ತುಳಿದ ಅದಿತಿ ಪ್ರಭುದೇವ: ನವಜೋಡಿಗೆ ಶುಭಕೋರಿದ ಗಣ್ಯರು
‘ಪದವಿ ಪೂರ್ವ’ ಚಿತ್ರಕ್ಕಾಗಿ ಅರ್ಜುನ್ ಜನ್ಯ ಸಂಯೋಜಿಸಿರುವ ಹಾಡುಗಳಿಗೆ ಯೋಗರಾಜ್ ಭಟ್ ಸಾಹಿತ್ಯ ರಚಿಸಿದ್ದಾರೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಈ ಚಿತ್ರಕ್ಕಿದೆ.