ನವದೆಹಲಿ: ಕರೊನಾದಿಂದ ಅದೆಷ್ಟೋ ವರ್ಗದ ಜನರ ಜೀವನ ಸಂಕಷ್ಟಕ್ಕೀಡಾಗಿದೆ. ಲಾಕ್ಡೌನ್ನಿಂದಾಗಿ ಸಂತ್ರಸ್ತ್ರರಾದವರಲ್ಲಿ ಸರ್ಕಾರಿ ಶಾಲೆಗಳ ಅತಿಥಿ ಶಿಕ್ಷಕರೂ ಸೇರಿದ್ದಾರೆ.
ಅದರಲ್ಲೂ ದೆಹಲಿ ಸರ್ಕಾರಿ ಶಾಲೆಗಳಲ್ಲಿ ದಿನದ ಕೆಲಸ ಆಧಾರದ ಮೇಲೆ ಸಂಬಳ ಪಡೆಯುತ್ತಿದ್ದ ಅತಿಥಿ ಶಿಕ್ಷಕರ ಬದುಕು ತೀರ ಕಷ್ಟಕ್ಕೀಡಾಗಿದ್ದು, ಅವರೆಲ್ಲ ಅನ್ಯ ಮಾರ್ಗಗಳನ್ನು ಕಂಡುಕೊಂಡಿದ್ದಾರೆ.
ಇಂಗ್ಲಿಷ್ ಶಿಕ್ಷಕನೋರ್ವ ರಸ್ತೆ ಬದಿಯಲ್ಲಿ ತರಕಾರಿ ಮಾರುತ್ತಿದ್ದಾರೆ. ವಿಜ್ಞಾನ ಶಿಕ್ಷಕ ಬೈಸಿಕಲ್ ಪಂಚರ್ ಶಾಪ್ ಹಾಕಿದ್ದಾರೆ…ಹಾಗೇ ಸಂಸ್ಕೃತ ಶಿಕ್ಷಕ ತನ್ನೂರಿಗೆ ಮರಳಿ ಗೋಧಿ ಹೊಲದಲ್ಲಿ ಮೈ ಬಗ್ಗಿಸಿ ದುಡಿಯುತ್ತಿದ್ದಾರೆ.
ದೆಹಲಿಯ ಸರ್ಕಾರಿ ಶಾಲೆಗಳಲ್ಲಿ ಅನೇಕ ಶಿಕ್ಷಕರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರೂ ಆ ದಿನದ ಕೆಲಸದ ಮೇಲೆ ವೇತನ ಪಡೆಯುವವರು. ಆದರೆ ಕರೊನಾ ವೈರಸ್, ಲಾಕ್ಡೌನ್ನಿಂದಾಗಿ ಶಾಲೆಗಳೆಲ್ಲ ಮೂರು ತಿಂಗಳಿಂದಲೂ ಕ್ಲೋಸ್ ಆಗಿವೆ. ಮನೆಯಲ್ಲೇ ಇರಬೇಕಾದ ಸ್ಥಿತಿ. ಗುತ್ತಿಗೆ ಆಧಾರದ ನೇಮಕಾತಿ ಆಗಿದ್ದರಿಂದ ಮನೆಯಲ್ಲಿ ಕುಳಿತರೆ ಸಂಬಳ ಬರುವುದಿಲ್ಲ. ಹಾಗಾಗಿ ಬದುಕಿಗಾಗಿ ಮತ್ತೊಂದು ದುಡಿಮೆ ನೋಡಿಕೊಳ್ಳಲೇಬೇಕಾದ ಅನಿವಾರ್ಯತೆ ಇವರದ್ದು. ಇದನ್ನೂ ಓದಿ: ಬೆಂಗಳೂರು ಮತ್ತೊಂದು ಬ್ರೆಜಿಲ್ ಆಗಬಾರದೆಂದರೆ ಸಂಪೂರ್ಣ ಲಾಕ್ಡೌನ್ ಮಾಡಿ: ಎಚ್.ಡಿ. ಕುಮಾರಸ್ವಾಮಿ
ದೆಹಲಿಯಲ್ಲಿ 1030 ಸರ್ಕಾರಿ ಶಾಲೆಗಳಲ್ಲಿ 20,000ಕ್ಕೂ ಹೆಚ್ಚು ಅತಿಥಿ ಶಿಕ್ಷಕರು ಕೆಲಸ ಮಾಡುತ್ತಿದ್ದರು. ಅವರ ಪ್ರತಿದಿನದ ವೇತನ 1,040 ರಿಂದ 1400 ರೂಪಾಯಿ.
ಭಾನುವಾರಗಳು, ಬೇಸಿಗೆ ರಜೆ ಮತ್ತು ಯಾವುದೇ ಹಬ್ಬಗಳ ರಜೆಯಿದ್ದರೂ ಅಂದು ಅವರಿಗೆ ವೇತನ ಇರುವುದಿಲ್ಲ. ಆ ಸಮಯದಲ್ಲೂ ಸಹ ಇಂಥ ಶಿಕ್ಷಕರು ದುಡಿಮೆಗೆ ಬೇರೆ ಮಾರ್ಗ ಕಂಡುಕೊಳ್ಳುತ್ತಿದ್ದರು. ಆದರೆ ಈಗಂತೂ ಮೂರು ತಿಂಗಳುಗಳಿಂದ ನಯಾ ಪೈಸೆ ಸರ್ಕಾರದಿಂದ ಸಿಗುತ್ತಿಲ್ಲ. ಶಾಲೆಗಳು ಬೇಗ ಶುರುವಾಗುವ ಲಕ್ಷಣವೂ ಕಾಣಿಸುತ್ತಿಲ್ಲ.
ದೆಹಲಿಯಲ್ಲಿ ಶಾಲೆಗಳು ಮಾ.19ರಿಂದ ಬಂದ್ ಆಗಿವೆ. ಕೆಲವು ಕಡೆ ಆನ್ಲೈನ್ ಮೂಲಕ ಕಲಿಕೆ ನಡೆಯುತ್ತಿದೆ. ಕೆಲವೇ ಅತಿಥಿ ಶಿಕ್ಷಕರಿಗೆ ಮೇ 8ರವರೆಗೆ ಆನ್ಲೈನ್ ಮೂಲಕ ಕಲಿಸಲು ಅವಕಾಶ ಸಿಕ್ಕಿತ್ತು. ಅಂಥವರಿಗೆ ಅದಕ್ಕೆ ತಕ್ಕಂತೆ ವೇತನ ನೀಡಲಾಗಿದೆ. ಇದನ್ನೂ ಓದಿ: ಸಮುದಾಯಕ್ಕೆ ಸೋಂಕು? ರಾಜ್ಯದಲ್ಲಿ ಕೈಮೀರಿತೇ ಕರೊನಾ; ಆರೋಗ್ಯ ತಜ್ಞರ ಅನುಮಾನ
ಸುಮಾರು 1000 ಶಿಕ್ಷಕರು ಈ ಬಾರಿ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ಬರೆದಿಲ್ಲ. ಈ ಪರೀಕ್ಷೆ ಜುಲೈನಲ್ಲಿ ಇನ್ನೊಮ್ಮೆ ನಡೆಯಲಿದೆ. ಆದರೆ ಸಾಂಕ್ರಾಮಿಕ ಕರೊನಾ ತೀವ್ರವಾಗಿ ಬಾಧಿಸುತ್ತಿರುವುದರಿಂದ ಅದರಲ್ಲೂ ಅನಿಶ್ಚಿತತೆ ಇದೆ. ಒಟ್ಟಿನಲ್ಲಿ ಅತಿಥಿ ಶಿಕ್ಷಕರ ಪಾಡು ತೀರ ಕಷ್ಟಕ್ಕೆ ಒಳಗಾಗಿದೆ. (ಏಜೆನ್ಸೀಸ್)