ಬಳ್ಳಾರಿ: ಹಿಂದುಳಿದ ವರ್ಗಗಳ ರಕ್ಷಣೆಗೆ ನಿಲ್ಲುವುದು ಜನಪ್ರತಿನಿಧಿಗಳ ಕರ್ತವ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಹೇಳಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ ಏರ್ಪಡಿಸಿದ್ದ ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನರಾಮ್ ಅವರ 114ನೇ ಸರಳ ಜಯಂತಿಯಲ್ಲಿ ಮಾತನಾಡಿದರು. ಜಗಜೀವನರಾಮ್ ಹಸಿರು ಕ್ರಾಂತಿಯ ಮೂಲಕ ರೈತರ ಅಭಿವೃದ್ಧಿಗೆ ಶ್ರಮಿಸಿದವರು. ನಾವು ಕೂಡ ಅವರು ಹಾಕಿಕೊಟ್ಟ ಹಾದಿಯಲ್ಲಿ ನಡೆಯುತ್ತಾ, ಸಮಾಜಕ್ಕೆ ಕೊಡುಗೆ ನೀಡಬೇಕು ಸಂಘಟಿತರಾಗಿ ಮುನ್ನಡೆದರೆ ಸಮುದಾಯದ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದರು.
ವೇದಿಕೆಯಲ್ಲಿ ಕಾಣಿಸಿಕೊಂಡ ಸಿಂಗ್-ರೆಡ್ಡಿ: ಅಖಂಡ ಬಳ್ಳಾರಿ ವಿಭಜನೆ ವಿಚಾರದಲ್ಲಿ ಹಾವು-ಮುಂಗುಸಿಯಂತಾಗಿದ್ದ ಸಚಿವ ಆನಂದ ಸಿಂಗ್ ಮತ್ತು ಶಾಸಕ ಜಿ.ಸೋಮಶೇಖರರಡ್ಡಿ ಜಿಲ್ಲೆ ವಿಭಜನೆ ಬಳಿಕ ಮೊದಲ ಬಾರಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು.
ೆ.8ಕ್ಕೆ ಸರ್ಕಾರ ನೂತನ ವಿಜಯನಗರ ಜಿಲ್ಲೆಗೆ ಅಧಿಕೃತ ಆದೇಶ ಹೊರಡಿಸಿದಾಗ ಸೋಮಶೇಖರ್ ರೆಡ್ಡಿ ವಿರೋಧಿಸಿದ್ದರು. ಸಚಿವ ಸಿಂಗ್ ವಿರುದ್ಧ ಹರಿಹಾಯ್ದಿದ್ದರು. ಉಸ್ತುವಾರಿ ಬದಲಾವಣೆಗೆ ಒತ್ತಾಯಿಸಿದ್ದರು. ಇಷ್ಟೆಲ್ಲಾದ ಮೇಲೆ ಸಿಂಗ್ ಬಳ್ಳಾರಿಗೆ ಎರಡ್ಮೂರು ಬಾರಿ ಬಂದಿದ್ದರೂ ಸೋಮಶೇಖರ್ ರೆಡ್ಡಿ ಮಾತ್ರ ಅವರ ಜತೆ ಅಂತರ ಕಾಯ್ದುಕೊಂಡಿದ್ದರು.
ಸಂಸದ ವೈ.ದೇವೇಂದ್ರಪ್ಪ, ಜಿಪಂ ಸದಸ್ಯರಾದ ಎ.ಮಾನಯ್ಯ, ಮುಂಡ್ರಿಗಿ ನಾಗರಾಜ, ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ, ಎಡಿಸಿ ಪಿ.ಎಸ್. ಮಂಜುನಾಥ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಜಪ್ಪ, ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.