ಚಿಕ್ಕಮಗಳೂರು: ಜಿಲ್ಲಾ ರಕ್ತನಿಧಿ ಕೇಂದ್ರದಲ್ಲಿ ಕಡವಂತಿ ಗ್ರಾಪಂ ಸದಸ್ಯನ ಜನ್ಮದಿನದ ಅಂಗವಾಗಿ ಸದಸ್ಯ ಸೇರಿದಂತೆ ಏಳು ಯುವಕರು ರಕ್ತದಾನ ಮಾಡುವ ಜತೆಗೆ ಅಂಗಾಂಗ ದಾನದ ಪತ್ರಕ್ಕೆ ಸಹಿ ಹಾಕಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.
ಖಾಂಡ್ಯ ಹೋಬಳಿ ಕಡವಂತಿ ಗ್ರಾಪಂ ಸದಸ್ಯ ಬೊಗಸೆ ವಿನೋದ್ ಜನ್ಮದಿನ ಪ್ರಯುಕ್ತ ಜಿಲ್ಲಾ ಸರ್ಜನ್ ಹಾಗೂ ರಕ್ತನಿಧಿ ಕೇಂದ್ರದ ಸಿಬ್ಬಂದಿ ನೇತೃತ್ವದಲ್ಲಿ ವಿನೋದ್, ರಂಗಸ್ವಾಮಿ, ರಂಜಿತ್, ಸಿಂಧುಕುಮಾರ್, ಅಸೈನರ್ ಆಲಿ, ಪರಮೇಶ್ ಹಾಗೂ ಶ್ರೀಜಿತ್ ಅಂಗಾಂಗ ದಾನಪತ್ರಕ್ಕೆ ಸಹಿ ಹಾಕಿದರು.
ಸರ್ಜನ್ ಮೋಹನ್ಕುಮಾರ್ ಮಾತನಾಡಿ, ಪ್ರತಿಯೊಬ್ಬರೂ ಜನ್ಮದಿನವನ್ನು ರಕ್ತದಾನ, ಅಂಗಾಂಗ ದಾನದ ಮೂಲಕ ಆಚರಿಸಿದರೆ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಕ್ಷೀಣಿಸಿ ಸುಸ್ಥಿರ ಬದುಕು ಎಲ್ಲರಿಗೂ ಲಭ್ಯವಾಗುತ್ತದೆ. ಈ ನಿಟ್ಟಿನಲ್ಲಿ ವಿನೋದ್ ಹಾಗೂ ತಂಡ ನಮ್ಮೆಲ್ಲರಿಗೂ ಮಾದರಿಯಾಗಿದೆ ಎಂದರು.
ವಿನೋದ್ ಬೊಗಸೆ ಮಾತನಾಡಿ, ವರ್ಷಕ್ಕೊಮೆಯಾದರೂ ರಕ್ತದಾನ ಮಾಡಿದರೆ ಆರೋಗ್ಯ ಲಭಿಸುತ್ತದೆ. ಈ ಹಿನ್ನೆಲೆಯಲ್ಲಿ ರಕ್ತದಾನ ಮಾಡಿದ್ದೇವೆ. ಈ ವರ್ಷದಿಂದ ನಾವೆಲ್ಲ ಅಂಗಾಂಗ ದಾನದ ಪತ್ರಕ್ಕೂ ಸಹಿ ಹಾಕಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ತಿಳಿಸಿದರು.