More

    ರಾಷ್ಟ್ರೀಯ ಶಿಕ್ಷಣ ನೀತಿ ಹೇರಿಕೆಗೆ ವಿರೋಧ

    ವಿಜಯಪುರ: ರಾಷ್ಟ್ರೀಯ ಶಿಕ್ಷಣ ನೀತಿ ಹೇರಿಕೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ನಂತರ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

    ಸಮಿತಿ ಜಿಲ್ಲಾಧ್ಯಕ್ಷ, ನಿವೃತ್ತ ಪ್ರಾಂಶುಪಾಲ ಪ್ರೊ.ವಿ.ಎ. ಪಾಟೀಲ ಮಾತನಾಡಿ, ದೇಶದಲ್ಲಿಯೇ ನಾವೇ ಮೊದಲು ಎಂಬ ಹುಸಿ ಹೆಗ್ಗಳಿಕೆಗೆ ಹಾಗೂ ಕೇಂದ್ರ ಸರ್ಕಾರದ ನೇತಾರರನ್ನು ಮೆಚ್ಚಿಸುವುದಕ್ಕಾಗಿ ಕರ್ನಾಟಕ ಸರ್ಕಾರ ಹಾಗೂ ಉನ್ನತ ಶಿಕ್ಷಣ ಸಚಿವರು ಯಾವುದೇ ಚರ್ಚೆ, ಸಂವಾದಗಳನ್ನು ಮಾಡದೆ, ಅನುಷ್ಠಾನದ ರೂಪುರೇಷೆಗಳನ್ನು ರೂಪಿಸದೆ ಮತ್ತು ಪೂರ್ವ ತಯಾರಿಯಿಲ್ಲದೆ ಕೋವಿಡ್ ಸಂಕಷ್ಟ ಕಾಲದಲ್ಲಿ ಏಕಾಏಕಿ ರಾಜ್ಯದ ಉನ್ನತ ಶಿಕ್ಷಣದ ಮೇಲೆ ಎನ್‌ಇಪಿ-2020 ಹೇರಿರುವುದು ಖಂಡನೀಯ ಎಂದರು.

    ಎನ್‌ಪಿಪಿ ಜಾರಿ ಮೂಲಕ ದೇಶದಲ್ಲಿ ಇಡೀ ಉನ್ನತ ಶಿಕ್ಷಣವನ್ನು ಅರಾಜಕ ಸ್ಥಿತಿಗೆ ದೂಡಿದ್ದಾರೆ. ವಿಶ್ವವಿದ್ಯಾಲಯಗಳ ಸ್ವಾಯತ್ತತೆಯನ್ನು ಗಾಳಿಗೆ ತೂರಿದ್ದಾರೆ. ಪದವಿ ಹಾಗೂ ಸ್ನಾತಕೊತ್ತರ ಶಿಕ್ಷಣದಲ್ಲಿ ಎದ್ದಿರುವ ಪ್ರಶ್ನೆಗಳು, ಗೊಂದಲಗಳನ್ನು ಪರಿಹರಿಸಲು ಸಾಧ್ಯವಾಗಿಲ್ಲ. ಅರೆಬರೆಯಾಗಿ ಅನುಷ್ಠಾನ ಮಾಡಿದ್ದರಿಂದ ಇಲ್ಲಿಯವರೆಗೂ ಪದವಿಯ/ಸ್ನಾಕೋತ್ತರ ಪರೀಕ್ಷೆಗಳು ಸರಿಯಾಗಿ ನಡೆಸಲು ಸಾಧ್ಯವಾಗಿಲ್ಲ. ಈ ನೀತಿಯು ಅಪ್ರಜಾಸತ್ತಾತ್ಮಕ, ಅವೈಜ್ಞಾನಿಕ, ಶಿಕ್ಷಣವಿರೋಧಿ, ವಿದ್ಯಾರ್ಥಿ ವಿರೋಧಿ ಹಾಗೂ ಶಿಕ್ಷಕ ವಿರೋಧಿ ನೀತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಅಂಕಿ-ಸಂಖ್ಯೆ ಇಲಾಖೆ ನಿವೃತ್ತ ಜಂಟಿ ಅಧಿಕಾರಿ ಸಿ.ಬಿ.ಪಾಟೀಲ ಮಾತನಾಡಿ, ಎನ್‌ಇಪಿ-2020 ನೀತಿಯು ಶಿಕ್ಷಣದಲ್ಲಿ ಐತಿಹಾಸಿಕ ಕ್ರಾಂತಿ ಎಂಬಂತೆ ಹೆಣೆದ ಸುಳ್ಳಿನ ದಂತಕತೆಗಳು ಒಂದೊಂದಾಗಿ ಕಳಚಿ ಬೀಳುತ್ತಿವೆ. ಕಾರ್ಪೊರೇಟ್ ಮನೆತನಗಳ ಸೇವೆಗಾಗಿ ಭವಿಷ್ಯದ ಭಾರತವನ್ನು ಕಟ್ಟಬೇಕಾದ ವಿದ್ಯಾರ್ಥಿಗಳನ್ನು ಬಲಿಪಶುಗಳನ್ನಾಗಿ ಮಾಡುತ್ತಿದ್ದಾರೆ. ಶಿಕ್ಷಣದ ಯಾವುದೇ ನೀತಿಯು ಮೂಲಭೂತವಾಗಿ ಎಲ್ಲರಿಗೂ ಶಿಕ್ಷಣವು ದೊರಕಿಸುವ ಉದ್ದೇಶ ಹೊಂದಿರಬೇಕು. ಆದರೆ ಈಗಾಗಲೇ ಬಂದಿರುವ ಮತ್ತು ಬರುತ್ತಿರುವ ಶಿಕ್ಷಣ ನೀತಿಗಳು ದೇಶದ ಬಹುಸಂಖ್ಯಾತ ಜನಗಳಿಗೆ ಶಿಕ್ಷಣದ ಬಾಗಿಲುಗಳು ಮುಚ್ಚುವ ನೀತಿಗಳಾಗಿವೆ. ಇತಿಹಾಸ ಮತ್ತು ಶಿಕ್ಷಣವನ್ನು ಪಕ್ಷಗಳ ಮತ್ತು ಸರ್ಕಾರಗಳ ಸಿದ್ಧಾಂತಗಳಿಗೆ ತಕ್ಕಂತೆ ತಿರುಚುವುದು, ನಾಗರಿಕತೆಯ ವಿರುದ್ಧ ನಡೆಸುವ ಅಪರಾಧವಲ್ಲದೆ ಇನ್ನೇನೂ ಅಲ್ಲ. ಆದ್ದರಿಂದ ಈ ದೇಶದ ವಿದ್ಯಾರ್ಥಿಗಳು ಸಂಘಟಿತರಾಗಿ ಸರ್ಕಾರದ ವಿರುದ್ಧ ಸಿಡಿದೇಳಬೇಕು ಎಂದರು.

    ನಿವೃತ್ತ ನೌಕರ ಎಸ್.ಎಸ್.ಬಣಜಿಗೇರ ಮಾತನಾಡಿ, ಶಾಲಾ ಪಠ್ಯಪುಸ್ತಕಗಳ ಪರಿಷ್ಕರಣೆಯ ನೆಪದಲ್ಲಿ ರಾಜ್ಯ ಸರ್ಕಾರವು ಸತ್ಯಗಳನ್ನು ತಿರುಚಿ, ಪ್ರಗತಿವಿರೋಧಿ ಚಿಂತನೆಯನ್ನು ಪಠ್ಯಪುುಸ್ತಕದ ಮೂಲಕ ಪ್ರಚಾರ ಮಾಡಲು ಪ್ರಯತ್ನಿಸುತ್ತಿದೆ. ಮಕ್ಕಳಲ್ಲಿ ವೈಚಾರಿಕ ಮತ್ತು ವೈಜ್ಞಾನಿಕ ಚಿಂತನೆಯನ್ನು ಕುಂಠಿತಗೊಳಿಸಿ ಕೋಮುದ್ವೇಷದ ವಿಷಬೀಜಗಳನ್ನು ಬಿತ್ತುವ, ಏಕತೆ ಮತ್ತು ಕೋಮು ಸೌಹಾರ್ದತೆಯನ್ನು ಹಾಳು ಮಾಡುವುದೇ ಸರ್ಕಾರದ ಉದ್ದೇಶವಾಗಿದೆ ಎಂದು ತಿಳಿಸಿದರು.

    ಪ್ರಗತಿಪರ ಸಂಘಟನೆ ಮುಖಂಡ ಅಕ್ರಮ್ ಮಾಶಳಕರ ಮಾತನಾಡಿ, ಶಿಕ್ಷಣದಲ್ಲಿ ಶುಲ್ಕ ಹೆಚ್ಚಳ, ಮೂಲ ಸೌಲಭ್ಯಗಳ ಕೊರತೆ, ಕೊಠಡಿ, ಬೋಧಕ ಸಿಬ್ಬಂದಿ, ಗ್ರಂಥಾಲಯ, ಪ್ರಯೋಗಾಲಯಗಳು ಇಲ್ಲ ಇಂಥ ಕನಿಷ್ಠ ಸಮಸ್ಯೆಗಳನ್ನು ಬಗೆಹರಿಸುವುದನ್ನು ಬಿಟ್ಟು ಎನ್‌ಇಪಿನಂತಹ ಅನಾವಶ್ಯಕ ಹೊಸ ನೀತಿಗಳನ್ನು ಜಾರಿಗೊಳಿಸುವುದನ್ನು ಬಿಡಬೇಕು ಎಂದು ಆಗ್ರಹಿಸಿದರು.

    ಶಿಕ್ಷಣ ಉಳಿಸಿ ಸಮಿತಿ ಜಿಲ್ಲಾ ಕಾರ್ಯದರ್ಶಿ ಎಚ್.ಟಿ.ಭರತಕುಮಾರ, ನಿವೃತ್ತ ಬ್ಯಾಂಕ್ ಅಧಿಕಾರಿ ಚಂದ್ರಶೇಖರ ಗಂಟೆಪ್ಪಗೊಳ, ಎಸ್.ಎ ಬಿರಾದಾರ, ಬಿ.ಎನ್. ಬಿರಾದಾರ, ಬಾಬುರಾವ್ ಬೀರಕಬ್ಬಿ, ವಿವಿಧ ಸಂಘಟನೆಯ ಮುಖಂಡರಾದ ಸದಾನಂದ ಮೋದಿ, ದಸ್ತಗೀರ ಉಕ್ಕಲಿ, ನಿರ್ಮಲಾ ಹೊಸಮನಿ ಮುಂತಾದವರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts