ಬೆಂಗಳೂರು: ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ವಿಧಾನದ ಬಗ್ಗೆ ತಿಳಿಸಲು ರಾಜೀವ್ಗಾಂಧಿ ಆರೋಗ್ಯ ವಿವಿ (ಆರ್ಜಿಯುಎಚ್ಎಸ್) ಮತ್ತು ನಿಮ್ಹಾನ್ಸ್ ಸಹಯೋಗದಲ್ಲಿ ನರ್ಸ್ಗಳಿಗಾಗಿ ಆರಂಭಿಸಿರುವ ತರಬೇತಿಗೆ ಮೊದಲ ದಿನವೇ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಮಂಗಳವಾರ ತರಬೇತಿಗೆ ಚಾಲನೆ ನೀಡಿದರು. ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಅನುಸರಿಸಬೇಕಾದ ವಿಧಾನ ಮತ್ತು ವೈಯಕ್ತಿಕ ಕಾಳಜಿ ಬಗ್ಗೆ ವೈದ್ಯರು ಮತ್ತು ವೈದ್ಯಕೀಯ ತಜ್ಞರು ಆನ್ಲೈನ್ನಲ್ಲಿ ನರ್ಸ್ಗಳಿಗೆ ತಿಳಿಸಿಕೊಡಲಿದ್ದಾರೆ. ರಾಜ್ಯದಲ್ಲಿ 4.5 ಲಕ್ಷ ನರ್ಸ್ಗಳಿದ್ದು, ಪ್ರತಿ ನಿತ್ಯ 2 ಗಂಟೆ ಆನ್ಲೈನ್ನಲ್ಲಿ ತರಬೇತಿ ನೀಡಲಾಗುತ್ತದೆ. ಮೊದಲ ದಿನ ರಾಜ್ಯಾದ್ಯಂತ 1,800 ನರ್ಸ್ಗಳು ಭಾಗವಹಿಸಿದ್ದರು.
ನರ್ಸ್ಗಳಿಗೆ ತರಬೇತಿ ನೀಡುವುದು ಸರ್ಕಾರ ನೈತಿಕ ಜವಾಬ್ದಾರಿಯಾಗಿದೆ. ಇಡೀ ದೇಶ ಗುಣಮಟ್ಟ ನರ್ಸ್ಗಳ ಸೇವೆಗಾಗಿ ಕಾದಿದೆ. ಚಿಕಿತ್ಸೆ ನೀಡುವ ವಿಧಾನ ತಿಳಿದಿದ್ದರೆ ಬಹುತೇಕ ರೋಗಿಗಳನ್ನು ಗುಣಪಡಿಸಬಹುದಾಗಿದೆ. ಇದಕ್ಕಾಗಿ ನುರಿತ ನರ್ಸ್ ಮತ್ತು ವೈದ್ಯರ ಅವಶ್ಯಕತೆ ಇದೆ ಎಂದು ಸುಧಾಕರ್ ತಿಳಿಸಿದರು.
ಆರ್ಜಿಯುಎಚ್ಎಸ್ ಕುಲಪತಿ ಡಾ. ಎಸ್. ಸಚ್ಚಿದಾನಂದ ಮಾತನಾಡಿ, ಈಗಾಗಲೇ ಆನ್ಲೈನ್ ಮೂಲಕ ವೈದ್ಯರಿಗೆ ತರಬೇತಿ ನೀಡುತ್ತಿದ್ದೇವೆ. ಇದೀಗ ನರ್ಸ್ಗಳಿಗೆ ಆರಂಭಿಸಿದ್ದೇವೆ. ಮುಂದಿನ ದಿನಗಳಲ್ಲಿ ‘ಡಿ’ ಗ್ರೂಪ್ ನೌಕರರಿಗೂ ತರಬೇತಿ ನೀಡುತ್ತೇವೆ ಎಂದರು.