More

    ಪಶ್ಚಿಮ ಬಂಗಾಳದ ಶಿಕ್ಷಕರಿಗಿಲ್ಲ ಜನತಾ ಕರ್ಫ್ಯೂ! ಭಾನುವಾರವೂ ಶಾಲೆಗೆ ಬನ್ನಿ ಎಂದು ಆದೇಶಿಸಿದ ಮಮತಾ ಬ್ಯಾನರ್ಜಿ ಸರ್ಕಾರ

    ಕೊಲ್ಕತ್ತಾ: ನಾಳೆ (ಮಾ.22) ದೇಶದಾದ್ಯಂತ ಜನತಾ ಕರ್ಫ್ಯೂ ಆಚರಿಸಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಅಗತ್ಯ ಕ್ಷೇತ್ರ ಬಿಟ್ಟು ಬೇರೆಲ್ಲಾ ಕ್ಷೇತ್ರದ ಉದ್ಯೋಗಿಗಳು ಮತ್ತು ನೌಕರರು ಭಾನುವಾರಂದು ಮನೆಯಿಂದ ಹೊರಗಡೆ ಬರಬೇಡಿ ಎಂದು ಮನವಿ ಮಾಡಿದ್ದಾರೆ. ಆದರೆ ಪ್ರಧಾನಿಯ ಮಾತಿಗೆ ಸದಾ ವಿರೋಧ ವ್ಯಕ್ತ ಪಡಿಸುತ್ತಲೇ ಬಂದಿರುವ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರ ಭಾನುವಾರಂದು ರಾಜ್ಯದ ಶಾಲೆಗಳ ಶಿಕ್ಷಕರು ಶಾಲೆಗೆ ಹಾಜರಾಗಬೇಕು ಎಂದು ಆದೇಶಿಸಿದೆ.

    ಮಧ್ಯಾಹ್ನದ ಬಿಸಿಯೂಟವನ್ನು ವಿದ್ಯಾರ್ಥಿಗಳ ಮನೆಗಳಿಗೆ ತಲುಪಿಸಬೇಕು ಎನ್ನುವ ಆದೇಶವನ್ನು ಸರ್ಕಾರ ಮಾಡಿದೆ. ಅದಕ್ಕೆ ಪೂರ್ವ ತಯಾರಿ ಮಾಡಿಕೊಳ್ಳುವ ಸಲುವಾಗಿ ಶನಿವಾರ ಮತ್ತು ಭಾನುವಾರದಂದು ಶಾಲೆಯ ಶಿಕ್ಷಕರು ಶಾಲೆಗಳಲ್ಲಿ ಹಾಜರಾಗಬೇಕು ಎಂದು ಹೇಳಲಾಗಿದೆ.

    ಪ್ರತಿ ವಿದ್ಯಾರ್ಥಿಗೆ ತಿಂಗಳಿಗೆ ಎರಡು ಕೆ.ಜಿ. ಅಕ್ಕಿ ಮತ್ತು ಎರಡು ಕೆ.ಜಿ ಆಲೂಗಡ್ಡೆಯನ್ನು ಬಿಸಿಯೂಟದ ಪರ್ಯಾಯವಾಗಿ ನೀಡಬೇಕು. ಅದನ್ನು ಮಕ್ಕಳ ಪಾಲಕರು ಬಂದು ಕೊಂಡುಹೋಗಬೇಕು. ಆಲೂಗಡ್ಡೆಯನ್ನು ಶಾಲೆಯ ಆಡಳಿತದವರೇ ಮಾರುಕಟ್ಟೆಗೆ ಹೋಗಿ 18 ರೂಪಾಯಿ ಕೆ.ಜಿ.ಯಂತೆ ತರಬೇಕು. ಅದರ ಜತೆ ಅಕ್ಕಿಯನ್ನು ಎರಡು ಕೆ.ಜಿ.ಯ ಪ್ಯಾಕೆಟ್​ಗಳಾಗಿ ಮಾಡಬೇಕು. ಈ ಕೆಲಸ ಮಾಡಲೆಂದು ನಾವು ಶಿಕ್ಷಕರನ್ನು ಶನಿವಾರ ಮತ್ತು ಭಾನುವಾರದಂದು ಕರೆದಿದ್ದೇವೆ ಎಂದು ಟಿಎಂಸಿ ಪಕ್ಷ ತಿಳಿಸಿದೆ.

    ಟಿಎಂಸಿ ಪಕ್ಷದ ಈ ಆದೇಶವನ್ನು ಬಿಜೆಪಿ ಬಲವಾಗಿ ಖಂಡಿಸಿದೆ. ಪ್ರಧಾನಿಗೆ ಅಗೌರವ ಸಲ್ಲಿಸಬೇಕೆಂಬ ಉದ್ದೇಶದಿಂದಲೇ ರಾಜ್ಯ ಸರ್ಕಾರ ಈ ರೀತಿ ನಡೆದುಕೊಳ್ಳುತ್ತಿದೆ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.

    ಪ್ರಧಾನಿ ಮಾತನ್ನು ಬಿಜೆಪಿ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಪ್ರಧಾನಿಯವರು ಅಗತ್ಯ ಕೆಲಸಗಳನ್ನು ಮಾಡಿಕೊಳ್ಳಬಹುದು ಎಂದು ಹೇಳಿದ್ದಾರೆ. ರಾಜ್ಯದ ಬಡ ವಿದ್ಯಾರ್ಥಿಗಳ ಕುಟುಂಬ ಬಿಸಿಯೂಟದ ಮೇಲೆ ನಿಂತಿದೆ. ಹಾಗಾಗಿ ಇದೂ ಕೂಡ ಒಂದು ಅಗತ್ಯ ಕೆಲಸವೇ ಆಗಿದ್ದು ಅದನ್ನು ನಾವು ಮಾಡಿಸುತ್ತಿದ್ದೇವೆ ಎಂದು ಟಿಎಂಸಿಯ ವಕ್ತಾರ ಸ್ನೇಹಶಿಸ್ ಚಕ್ರವರ್ತಿ ಹೇಳಿದ್ದಾರೆ. ಆದರೆ ಭಾನುವಾರದಂದು ರೈಲಿನ ಸೇವೆ ಇಲ್ಲದ ಕಾರಣ ಶಾಲೆಗೆ ಬರುವುದು ತಮಗೆ ಕಷ್ಟವಾಗುತ್ತದೆ ಎಂದು ಅನೇಕ ಶಿಕ್ಷಕರು ತಮ್ಮ ನೋವನ್ನು ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)

    ವಿದೇಶದಿಂದ ಬಂದಿದ್ದಾನೆಂಬ ಕಾರಣಕ್ಕೆ ವ್ಯಕ್ತಿಯನ್ನು ಅಪಾರ್ಟ್ಮೆಂಟ್​ನಲ್ಲೇ ಕೂಡಿ ಹಾಕಿದ ನೆರೆ ಹೊರೆಯವರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts