ಮುಂಡರಗಿ: ತಾಲೂಕಿನ ಡಂಬಳ ಭಾಗದಲ್ಲಿ ಗಾಳಿ ಮಳೆಗೆ ನೆಲಕಚ್ಚಿದ್ದ ಬಾಳೆ ಬೆಳೆ ತೋಟಗಳಿಗೆ ತೋಟಗಾರಿಕೆ ಸಹಾಯಕ ಅಧಿಕಾರಿ ನಿಂಗಪ್ಪ ಕುಂಬಾರ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿ, ಹಾನಿ ಅನುಭವಿಸಿದ ರೈತರಿಂದ ಮಾಹಿತಿ ಪಡೆದರು.
ಮಂಗಳವಾರ ಮತ್ತು ಬುಧವಾರ ಡಂಬಳ ಭಾಗದಲ್ಲಿ ಭಾರಿ ಗಾಳಿ ಮಳೆಗೆ ಅಪಾರ ಪ್ರಮಾಣದ ಬಾಳೆ ಬೆಳೆ ಹಾನಿಯಾಗಿದೆ. ಅಧಿಕಾರಿಗಳ ಎದುರು ಅಳಲು ತೋಡಿಕೊಂಡ ರೈತರು, ಬಾಳೆ ಬೆಳೆ ಗೊನೆ ಬಿಡಲು ಪ್ರಾರಂಭಿಸಿತ್ತು. ಒಂದು ತಿಂಗಳು ನಂತರ ಕಟಾವಿಗೆ ಬರುತ್ತಿತ್ತು.
ಈ ಸಂದರ್ಭದಲ್ಲಿ ಬೆಳೆ ಹಾನಿಯಾಗಿದ್ದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದ್ದು ಭಾರಿ ನಷ್ಟ ಅನುಭವಿಸುವಂತಾಗಿದೆ.
ಹೀಗಾಗಿ ರೈತರಿಗೆ ಸೂಕ್ತ ಪರಿಹಾರ ಕಲ್ಪಿಸಬೇಕು’ ಎಂದು ರೈತರು ಮನವಿ ಮಾಡಿದರು.
ಪ್ರತಿಕ್ರಿಯಿಸಿದ ತೋಟಗಾರಿಕೆ ಸಹಾಯಕ ಅಧಿಕಾರಿ ನಿಂಗಪ್ಪ ಅವರು, ‘ಹಾನಿಗೊಂಡ ಬಾಳೆಬೆಳೆ ಪರಿಶೀಲಿಸಲಾಗಿದೆ.
ಈ ಬಗ್ಗೆ ವರದಿ ತಯಾರಿಸಿ ಮೇಲಧಿಕಾರಿಗಳಿಗೆ ಸಲ್ಲಿಸಲಾಗುತ್ತದೆ’ ಎಂದರು.