ಬೆಂಗಳೂರು: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಬೆಂಗಳೂರು ನಗರ ಜಿಲ್ಲೆ ಅಂಕಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ.ಬಿ.ಹರ್ಷವರ್ಧನ್, ಎಸಿಬಿ ಬಲೆಗೆ ಬೀಳುವ ಮುನ್ನ ಇಲಾಖೆಯ ವಾಟ್ಸ್ಆಪ್ ಗ್ರೂಪ್ನಲ್ಲೇ ಲಂಚಕ್ಕೆ ಬೇಡಿಕೆ ಇಟ್ಟು ಮೆಸೇಜ್ ಹಾಕಿ ಎಡವಟ್ಟು ಮಾಡಿಕೊಂಡಿದ್ದ ಸಂಗತಿ ಈಗ ಬಹಿರಂಗವಾಗಿದೆ.
ಎಫ್ಎಸ್ಎಸ್ಎಐ ವಾಟ್ಸ್ಆಪ್ ಗ್ರೂಪ್ನಲ್ಲಿ ‘ನಾವು ಇನ್ಮೇಲೆ ಎಫ್ಎಸ್ಎಸ್ಎಐ ಪರವಾನಗಿಗೆ ಪಿಂಕ್ ನೋಟು ಕೊಡಿ ಅಂತಾ ಪೇಪರ್ನಲ್ಲಿ ಹಾಕಿಸಬೇಕೆಂದು ಡಾ.ಬಿ.ಹರ್ಷವರ್ಧನ್ ಮೆಸೇಜ್ ಮಾಡಿದ್ದ. ಈ ಅಧಿಕಾರಿ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿರುವುದು ಹಾಗೂ ನಾಗರಿಕ ಸೇವಾ (ಸಿಸಿಎ) ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಇವರನ್ನು ಕಳೆದ ಜ.22ರಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಿಂದ ಆರೋಗ್ಯ ಇಲಾಖೆಗೆ ವರ್ಗಾವಣೆ ಮಾಡಲಾಗಿತ್ತು. ಅಲ್ಲದೇ ಕರೊನಾ ಪಸರಿಸುತ್ತಿರುವ ಹಿನ್ನೆಲೆಯಲ್ಲಿ 2020ರ ಏ.20ರಂದು ಅಂದಿನ ಆರೋಗ್ಯ ಸಚಿವರು ಡಾ.ಬಿ.ಹರ್ಷವರ್ಧನ್ ಸೇರಿ ಇಬ್ಬರು ಅಧಿಕಾರಿಗಳನ್ನು ಆರೋಗ್ಯ ಇಲಾಖೆಗೆ ವರ್ಗಾಯಿಸಿ ಆದೇಶಿಸಿದ್ದರು. ಆದರೆ, ಸರ್ಕಾರ ಮಟ್ಟದಲ್ಲಿ ರಾಜಕೀಯ ಮತ್ತು ಹಣದ ಪ್ರಭಾವ ಬಳಸಿ ವಾಪಸ್ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಉಪ ಆಯುಕ್ತ (ಆಡಳಿತ) ಹುದ್ದೆಯಲ್ಲಿ ಕುಳಿತ ಕಾರ್ಯನಿರ್ವಹಿಸುತ್ತಿದ್ದರು ಎಂಬ ವಿಚಾರ ಗೊತ್ತಾಗಿದೆ.
ಸಿ ಆ್ಯಂಡ್ ಆರ್ ಉಲ್ಲಂಘನೆ: ವೃಂದ ಮತ್ತು ನೇಮಕಾತಿ(ಸಿ ಆಂಡ್ ಆರ್) ಉಲ್ಲಂಘಿಸಿ ಡಾ.ಬಿ.ಹರ್ಷವರ್ಧನ್ ಸೇರಿ 66 ವೈದ್ಯರು ನಿಯೋಜನೆ ಮೇರೆಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂಎಸ್, ಎಂಬಿಬಿಎಸ್ ಹಾಗೂ ಎಂಡಿ ಕೋರ್ಸ್ ಪೂರೈಸಿರುವ ವೈದ್ಯರು ಆರೋಗ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವುದು ಕಡ್ಡಾಯ. ಆದರೆ, ಹಣದಾಸೆಗೆ ಅನಧಿಕೃತವಾಗಿ ಈ ಹುದ್ದೆಗಳಲ್ಲಿ ಈಗಲೂ ಮುಂದುವರಿದಿದ್ದಾರೆ. ಕರೊನಾ ಸವಾಲು, ಬಿಕ್ಕಟ್ಟುಗಳಿಂದ ಹೈರಾಣಾಗಿರುವ ಆರೋಗ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರೆತೆಯಿದ್ದರೂ ವೈದ್ಯರು ವಾಪಸ್ ಹೋಗದಿರುವುದು ದುರದೃಷ್ಟಕರ.
ಎಸಿಬಿ ಖೆಡ್ಡಾಗೆ ಬಿದ್ದ: ಹೋಟೆಲ್ ಪರವಾನಗಿ ನೀಡಲು ಹರ್ಷವರ್ಧನ್ 3,500 ರೂ. ಲಂಚಕ್ಕೆ ಒತ್ತಾಯಿಸಿದ್ದ. ಈ ಬಗ್ಗೆ ಅರ್ಜಿದಾರರು ಎಸಿಬಿಗೆ ದೂರು ನೀಡಿದ್ದರು. ಡಿ.6ರಂದು ಹರ್ಷವರ್ಧನ್ ಪರವಾಗಿ ಖಾಸಗಿ ವ್ಯಕ್ತಿ ಹರೀಶ್ ಸರ್ಕಾರಿ ಶುಲ್ಕ ಹೊರತುಪಡಿಸಿ 3,500 ರೂ.ಲಂಚ ಪಡೆಯುತ್ತಿದ್ದಾಗ ಎಸಿಬಿ ಬೆಲೆಗೆ ಈ ಇಬ್ಬರೂ ಬಿದ್ದಿದ್ದಾರೆ.
ಏಳು ವರ್ಷಗಳಲ್ಲಿ ಕೇಂದ್ರ ಸರ್ಕಾರದಿಂದ ಸಂಸ್ಕೃತಕ್ಕೆ ಸಿಕ್ಕಿದ್ದು 640 ಕೋಟಿ ರೂಪಾಯಿ; ಆದರೆ ಕನ್ನಡಕ್ಕೆ..?!