ಒಡಿಶಾ: ಇನ್ನೇನು ಎಫ್ಐಎಚ್ (ಅಂತಾರಾಷ್ಟ್ರೀಯ ಹಾಕಿ ಟೂರ್ನಿ) ಒಡಿಶಾದಲ್ಲಿ ನಡೆಯಲಿದೆ ಎನ್ನುವಾಗ, ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ರಾಷ್ಟ್ರೀಯ ಪುರುಷರ ಹಾಕಿ ತಂಡದೊಂದಿಗೆ ಸಂವಾದ ನಡೆಸಿದ್ದಾರೆ. ಈ ಸಂದರ್ಭ, ಟೀಮ್ ಇಂಡಿಯಾ ವಿಶ್ವಕಪ್ ಗೆದ್ದರೆ ಪ್ರತಿ ಆಟಗಾರನಿಗೆ 1 ಕೋಟಿ ರೂ. ಅನ್ನು ಬಹುಮಾನವಾಗಿ ನೀಡಲಾಗುವುದು ಎಂದು ಘೋಷಿಸಿದ್ದಾರೆ. ಸಂವಾದದಲ್ಲಿ ಒಡಿಶಾ ಮುಖ್ಯಮಂತ್ರಿ ಆಟಗಾರರಿಗೆ ಶುಭ ಹಾರೈಸಿದ್ದು ಭಾರತೀಯ ಹಾಕಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮುತ್ತದೆ ಎಂದು ಆಶಿಸಿದರು.
ಮುಖ್ಯಮಂತ್ರಿ ಪಟ್ನಾಯಕ್, ಗುರುವಾರ ರೌರ್ಕೆಲಾದ ಬಿರ್ಸಾ ಮುಂಡಾ ಹಾಕಿ ಸ್ಟೇಡಿಯಂ ಸಂಕೀರ್ಣದಲ್ಲಿ ವಿಶ್ವಕಪ್ ಗ್ರಾಮವನ್ನು ಉದ್ಘಾಟಿಸಿದ್ದಾರೆ. ವಿಶ್ವಕಪ್ ವಿಲೇಜ್ ಅನ್ನು ಕೇವಲ ಒಂಬತ್ತು ತಿಂಗಳಲ್ಲಿ ಅಭಿವೃದ್ಧಿಪಡಿಸಲಾಗಿದ್ದು ಹಾಕಿ ವಿಶ್ವಕಪ್ ನ ಘನತೆಗೆ ಸರಿಹೊಂದುವ ಎಲ್ಲಾ ಸೌಲಭ್ಯಗಳಿರುವ 225 ಕೊಠಡಿಗಳನ್ನು ಇದು ಹೊಂದಿದೆ.
ವಿಶ್ವಕಪ್ ಗ್ರಾಮವು ಮುಂಬರುವ ಹಾಕಿ ವಿಶ್ವಕಪ್ ನ ತಂಡಗಳು ಮತ್ತು ಅಧಿಕಾರಿಗಳ ನಿವಾಸಕ್ಕಾಗಿ ಮೀಸಲು ಇರಿಸಲಾಗುತ್ತದೆ. ಒಡಿಶಾದ ಕ್ರೀಡಾ ಸಚಿವ ತುಷಾರ್ ಕಾಂತಿ ಬೆಹೆರಾ, ಹಾಕಿ ಇಂಡಿಯಾದ ಅಧ್ಯಕ್ಷ ದಿಲೀಪ್ ಟಿರ್ಕೆ, ಕ್ರೀಡಾ ಕಾರ್ಯದರ್ಶಿ ವಿ.ಕೆ.ಪಾಂಡಿಯನ್, ಐಡಿಸಿಒ ನ ಎಂ.ಡಿ ಆರ್.ವಿನೀಲ್ ಕೃಷ್ಣ, ಭೂಪೇಂದ್ರ ಸಿಂಗ್ ಪೂನಿಯಾ, ಹಾಕಿ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಭೋಲಾನಾಥ್ ಸಿಂಗ್ ಮತ್ತು ಒಡಿಶಾ ಸರ್ಕಾರ ಮತ್ತು ಹಾಕಿ ಇಂಡಿಯಾದಅಧಿಕಾರಿಗಳು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಆಟಗಾರರು ಒಡಿಶಾ ಸರ್ಕಾರವನ್ನು ಶ್ಲಾಘಿಸಿ ರಾಷ್ಟ್ರದ ಆಟಗಾರರಿಗಾಗಿ ಹಾಕಿಗಾಗಿ ಸಮಗ್ರ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದಕ್ಕಾಗಿ ಮುಖ್ಯಮಂತ್ರಿ ಪಟ್ನಾಯಕ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. (ಏಜೆನ್ಸೀಸ್)