ವಿಜಯವಾಣಿ ಸುದ್ದಿಜಾಲ ಸೂಲಿಬೆಲೆ
ಹೊಸಕೋಟೆ ತಾಲೂಕು ಸೂಲಿಬೆಲೆ ಹೋಬಳಿಯ ದೊಡ್ಡಹರಳಗೆರೆ ಗ್ರಾಮದಲ್ಲಿ ಒತ್ತುವರಿ ತೆರವು ವಿಚಾರವಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.
ಈ ವೇಳೆ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಏರ್ಪಟ್ಟಿತ್ತು. ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಅರಣ್ಯ ಇಲಾಖೆಯದ್ದು ಎನ್ನಲಾದ ಭೂಮಿಯನ್ನು ವಶಕ್ಕೆ ಪಡೆಯಲು ಮುಂದಾದ ಅಧಿಕಾರಿಗಳ ವಿರುದ್ಧ ತಿರುಗಿಬಿದ್ದ ಸ್ಥಳೀಯರು ಕಾರ್ಯಾಚರಣೆಗೆ ತಡೆಯೊಡ್ಡಿ ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಮಧ್ಯೆ ಪ್ರವೇಶಿಸಿ ಜಮೀನುಗಳ ದಾಖಲೆಗಳನ್ನು ತೋರಿಸಿ ವ್ಯಾಜ್ಯ ಇತ್ಯರ್ಥಪಡಿಸಿಕೊಳ್ಳುವಂತೆ ಸ್ಥಳೀಯರ ಮನವೊಲಿಸಿದರು. ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಕಾರ್ಯಾಚರಣೆಗೆ ತಾತ್ಕಾಲಿಕ ತಡೆ ನೀಡಲಾಯಿತು.
ಒಕ್ಕಲೆಬ್ಬಿಸುವ ಹುನ್ನಾರ: ದಲಿತರಿಗೆ ಮಂಜೂರಾಗಿದೆ ಎನ್ನಲಾದ ಭೂಮಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಒಕ್ಕಲೆಬ್ಬಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂದು ವಿಶ್ವ ಮಾನವ ಬಂಧುತ್ವ ವೇದಿಕೆಯ ಸಂಘಟನೆ ಅಧ್ಯಕ್ಷ ದರ್ಶನ್ ಅದಿತ್ಯ ದೂರಿದರು. ಸೂಲಿಬೆಲೆ ಹೋಬಳಿ ವ್ಯಾಪ್ತಿಯ ದೊಡ್ಡಹರಳಗೆರೆಯ ಗೋಮಾಳ ಸ.ನಂ.45 ರಲ್ಲಿ 43 ಎಕರೆ ಜಾಗವನ್ನು 15 ಜನರಿಗೆ ಮಂಜೂರು ಮಾಡಲಾಗಿದೆ, ಪ್ರಸ್ತುತ ಪಹಣಿ ಇದ್ದು ಅರಣ್ಯ ಇಲಾಖೆ ಅಧಿಕಾರಿಗಳು ಏಕಾಏಕಿ ಜಮೀನಿನ ಒತ್ತುವರಿ ತೆರವು ನೆಪದಲ್ಲಿ ದಲಿತರಿಗೆ ಮಂಜೂರಾಗಿರುವ ಜಾಗದಲ್ಲಿ ಜೆಸಿಬಿ ಬಳಸಿ ಗುಂಡಿ ತೆಗೆದು ಕಾಲುವೆ ನಿರ್ಮಾಣ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು.
ಕಾಲಾವಕಾಶಕ್ಕೆ ಮನವಿ ಸರ್ಕಾರದ ಆದೇಶದಂತೆ ಭೂಮಿ ಮಂಜೂರಾಗಿದ್ದು ನಮಗೆ ಇನ್ನು ಪೋಡಿಯಾಗಿಲ್ಲ. ನಾವು ನಕ್ಷೆ ತಯಾರಿಸಿ ಸರ್ವೇ ಮಾಡಿಸಿಕೊಂಡು ಭೂಮಿ ಸುಪರ್ಧಿಗೆ ಪಡೆಯಲು 3 ತಿಂಗಳ ಕಾಲಾವಕಾಶ ನೀಡಬೇಕು ಎಂದು ಅಧಿಕಾರಿಗಳಿಗೆ ಸ್ಥಳೀಯರು ಮನವಿ ಮಾಡಿದರು.
ಅರಣ್ಯ ಇಲಾಖೆ ಜಾಗ ಅರಣ್ಯ ಇಲಾಖೆಯ ಜಾಗದಲ್ಲಿ ನಾಟಿ ಮಾಡಲಾಗಿದ್ದ ಸುಮಾರು 2 ವರ್ಷ ಹಳೆಯದಾದ ಹಣ್ಣಿನ ಸಸಿಗಳನ್ನು ಕಡಿದು ಹಾಕಿದ್ದಾರೆ, ಇದಕ್ಕೂ ಮುನ್ನಾ ಹಾಕಲಾಗಿದ ಪೆನ್ಸಿಂಗ್ ಹಾಳು ಮಾಡಿದ್ದಾರೆ. ದಾಖಲೆಗಳ ಪ್ರಕಾರವಾಗಿ ಸರ್ವೇ ಮಾಡಿಸಿ ನಕ್ಷೆಯಂತೆ ನಮ್ಮ ಅರಣ್ಯ ಜಾಗವನ್ನು ನಮ್ಮ ಸುಪರ್ಧಿಗೆ ಪಡೆಯಲು ಕ್ರಮಕೈಗೊಳ್ಳುತ್ತಿದ್ದೇವೆ. ಯಾವುದೇ ಹೆಚ್ಚುವರಿ ಜಾಗವನ್ನು ನಾವು ಕಸಿದುಕೊಂಡಿಲ್ಲ ಎಂದು ಹೊಸಕೋಟೆ ಅರಣ್ಯಾಧಿಕಾರಿ ವರುಣ್ಕುಮಾರ್ ಪ್ರತಿಕ್ರಿಯಿಸಿದರು,