ಐಮಂಗಲ: ನಾವು ಸೇವಿಸುವ ಪೌಷ್ಠಿಕ ಆಹಾರ ಸಮತೋಲನವಾಗಿದ್ದರೆ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಮರಡಿಹಳ್ಳಿ ಸಮುದಾಯ ಆರೋಗ್ಯ ಕೇಂದ್ರದ ಡಾ.ರವಿಕುಮಾರ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಹದಿಹರೆಯದವರ ಆರೋಗ್ಯ ಮತ್ತು ಕ್ಷೇಮ ದಿನಾಚರಣೆ ಅಂಗವಾಗಿ ಗ್ರಾಮದ ಎಸ್ವಿಎಸ್ ಪ್ರೌಢಶಾಲೆಯಲ್ಲಿ ಗುರುವಾರ ಆರೋಗ್ಯ ಇಲಾಖೆ
ಹಮ್ಮಿಕೊಂಡಿದ್ದ ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹೆಣ್ಣುಮಕ್ಕಳಿಗೆ 10 ರಿಂದ 18ರ ವಯಸ್ಸು ಪ್ರಮುಖ ಘಟ್ಟವಾಗಿದೆ ಎಂದು ತಿಳಿಸಿದರು.
ಹದಿಹರೆಯದ ಮಕ್ಕಳಿಗೆ ಕಾಣುವುದೆಲ್ಲ ಆಕರ್ಷಿತವಾಗಿರುತ್ತದೆ. ಅವರಿಗೆ ಅರಿವಿಗೆ ಬಾರದೆ ದುಶ್ಚಟಗಳಿಗೆ ಬಲಿಯಾಗುತ್ತಾರೆ.
ಕೆಲವು ಬಾರಿ ತಂದೆ ತಾಯಿಗಳ ಬಳಿ ಹೇಳಿಕೊಳ್ಳಲು ಸಾಧ್ಯವಾಗದೆ ಹಿಂಜರಿಯುತ್ತಾರೆ. ಆದ್ದರಿಂದ ಎಲ್ಲ ಆಸ್ಪತ್ರೆಗಳಲ್ಲಿ ಆಪ್ತ ಸಮಾಲೋಚಕರಿದ್ದು ಅವರ ಬಳಿ ಸಲಹೆ ಪಡೆಯಬೇಕು ಎಂದರು.
ಹೆಣ್ಣು ಮಕ್ಕಳಲ್ಲಿ ಋತುಚಕ್ರ ಪ್ರಕೃತಿದತ್ತವಾಗಿ ಸಹಜವಾದ ಕ್ರಿಯೆಯಾಗಿದೆ.
ಆ ಸಮಯದಲ್ಲಿ ಕೆಲ ಹೆಣ್ಣುಮಕ್ಕಳಿಗೆ ರಕ್ತಹೀನತೆ, ಹೊಟ್ಟೆನೋವು, ಕೆಲವರಲ್ಲಿ ಅಂಡಾಶಯದಲ್ಲಿ ನೀರು ಗುಳ್ಳೆಯ ರೀತಿಯಾಗಿ ಋತುಚಕ್ರ ಕ್ರಿಯೆ ಸರಿಯಾಗಿ ನಡೆಯದೆ ಪಿಸಿಒಡಿ ಸಮಸ್ಯೆ ಉಂಟಾಗುತ್ತದೆ ಎಂದು ಹೇಳಿದರು.
ಇದರಿಂದಾಗಿ ಹೆಣ್ಣುಮಕ್ಕಳು ದಪ್ಪ ಆಗುವುದು. ಮುಖದಲ್ಲಿ ಗುಳ್ಳೆ, ಜತೆಗೆ ಇನ್ನಿತರ ಸಮಸ್ಯೆಗಳಿಂದ ಬಳಲುತ್ತಾರೆ.
ಈ ವಿಚಾರವಾಗಿ ಸಂಕೋಚ ಪಟ್ಟುಕೊಳ್ಳದೆ ಮನೆಯಲ್ಲಿ ತಾಯಿ, ಸಹೋದರಿಯರು ಅಥವಾ ವೈದ್ಯರ ಸಲಹೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಯುವತಿಯರು ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು. ಪೌಷ್ಠಿಕ ಆಹಾರ, ಹಸಿ ತರಕಾರಿಗಳನ್ನು ಸೇವಿಸಿ, ವ್ಯಾಯಾಮ ಮಾಡಿ, ವೈಯಕ್ತಿಕ ಸ್ವಚ್ಛತೆ ಮತ್ತು ಸುತ್ತಮುತ್ತಲಿನ ಪರಿಸರ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಹೇಳಿದರು.
ಡಾ.ಸಿ.ವಿಜಯ್, ಆರ್ಕೆಎಸ್ಕೆ ಆಪ್ತ ಸಮಾಲೋಚಕ ಟಿ.ಹೊನ್ನೂರು ಸ್ವಾಮಿ, ಮುಖ್ಯಶಿಕ್ಷಕ ಬಿ.ಮಂಜುನಾಥ್, ಸಹ ಶಿಕ್ಷಕರಾದ ಅಶೋಕ್,
ಟಿ.ರಮೇಶ್, ಶಿವಮೂರ್ತಿ, ಕಾರ್ತಿಕ್, ಗೀತಾ, ಸೌಮ್ಯಾ, ಸಂಜೀವ್ ರೆಡ್ಡಿ, ಮಹಾಂತೇಶ್, ಅಮಿತ್, ಸರಿತಾ, ಡಿ.ಮಲ್ಲಿಕಾರ್ಜುನ, ಶಾರದಮ್ಮ ಇತರರಿದ್ದರು.