More

    ವಿದೇಶದಿಂದ ಬರುವವರ ನಿಗಾಕ್ಕೆ ಸಜ್ಜು

    ಮಂಗಳೂರು: ವಿದೇಶಗಳಲ್ಲಿ ಸಿಲುಕಿಕೊಂಡ ಭಾರತೀಯರು ವಂದೇ ಭಾರತ್ ಯೋಜನೆಯಲ್ಲಿ ಮೇ 12ರಿಂದ ದಕ್ಷಿಣ ಕನ್ನಡಕ್ಕೆ ಆಗಮಿಸಲಿದ್ದು, ಅವರನ್ನು ನಿಗಾವಣೆಯಲ್ಲಿ ಇರಿಸಲು ದ.ಕ ಜಿಲ್ಲಾಡಳಿತ ಸಿದ್ಧತೆ ಕೈಗೊಂಡಿದೆ.
    ನಗರದಲ್ಲಿ 18 ವಸತಿಗೃಹ, 6 ಹಾಸ್ಟೆಲ್‌ಗಳನ್ನು (ಸರ್ಕಾರಿ/ಖಾಸಗಿ ಸೇರಿದಂತೆ) ವಿದೇಶಗಳಿಂದ ಬರುವವರಿಗಾಗಿ ನಿಗಾವಣಾ ವ್ಯವಸ್ಥೆಗಾಗಿ ಜಿಲ್ಲಾಡಳಿತ ಗುರುತಿಸಿದೆ. ಜಿಲ್ಲೆಯ ಹೋಟೆಲ್ ಮಾಲೀಕರ ಸಂಘ ಮತ್ತು ವಸತಿ ನಿಲಯ ಮಾಲೀಕರ ಸಂಘಟನೆಗಳೂ ಸಹಕಾರ ನೀಡುತ್ತಿವೆ.

    12ರಂದು ಮಂಗಳೂರಿಗೆ ಬರುವ ಮೊದಲ ವಿಮಾನದಲ್ಲಿ 180 ಮಂದಿ ಆಗಮಿಸಲಿದ್ದಾರೆ. ಅವರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಷ್ಟು ಮಂದಿ ಇದ್ದಾರೆ ಹಾಗೂ ಇತರ ಜಿಲ್ಲೆಗಳ ಎಷ್ಟು ಜನ ಇದ್ದಾರೆ ಎಂಬ ಮಾಹಿತಿ ಇಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಮಾತ್ರ ಇಲ್ಲಿ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಲಾಗುವುದು. ಉಡುಪಿ, ಉತ್ತರ ಕನ್ನಡ, ಕಾಸರಗೋಡು ಇತ್ಯಾದಿ ಜಿಲ್ಲೆಗಳ ಜನರನ್ನು ಅವರವರ ಜಿಲ್ಲೆಗಳಿಗೆ ಕಳುಹಿಸಲಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ 14 ದಿನಗಳ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಲಾಗಿದೆ.
    ವಿಮಾನದಲ್ಲಿ ಬರುವವರಿಗೆ ಹೋಟೆಲ್ ಅಥವಾ ಹಾಸ್ಟೆಲ್‌ಗಳಲ್ಲಿ ನಿಗಾವಣೆ ವ್ಯವಸ್ಥೆ ಕಲ್ಪಿಸಲಾಗುವುದು. ಹೋಟೆಲ್‌ನಲ್ಲಿ ಕ್ವಾರಂಟೈನ್‌ಗೆ ಒಳಗಾಗುವವರಿಗೆ ಜಿಲ್ಲಾಡಳಿತ ಒದಗಿಸುವ ಆಹಾರ ಬೇಡದಿದ್ದರೆ ಅವರು ತಮಗೆ ಬೇಕಾದ ಆಹಾರವನ್ನು ಪಾರ್ಸೆಲ್ ಮೂಲಕ ತರಿಸಲು ಅವಕಾಶ ಇದೆ ಎಂದು ಮೂಲಗಳು ತಿಳಿಸಿವೆ.

    ವಿಮಾನದಲ್ಲಿ ವೈದ್ಯರೂ ಇರುತ್ತಾರೆ
    ದುಬೈನಿಂದ ಮೇ 12ರಂದು ಮಂಗಳೂರಿಗೆ ಬರಲಿರುವ ಏರ್ ಇಂಡಿಯಾ ವಿಮಾನದಲ್ಲಿ ಓರ್ವ ವೈದ್ಯರು ಇರಲಿದ್ದಾರೆ. ಗರ್ಭಿಣಿಯರು ಹಾಗೂ ಇತರ ವೈದ್ಯಕೀಯ ಸಮಸ್ಯೆ ಇರುವವರಿಗೆ ವಿಮಾನದಲ್ಲಿ ಆದ್ಯತೆ ನೀಡಲಾಗಿದೆ. ಮಂಗಳೂರು ಪ್ರಯಾಣಿಕರಿಗೆ ದುಬೈ ಏರ್‌ಪೋರ್ಟ್‌ನಲ್ಲಿ ರ‌್ಯಾಪಿಡ್ ಕಿಟ್ ಮೂಲಕ ರಕ್ತ ಪರೀಕ್ಷೆ ನಡೆಸಲಾಗುವುದು. ಕೆಲವೇ ನಿಮಿಷಗಳ ಈ ಪ್ರಕ್ರಿಯೆ ಬಳಿಕ ನೆಗೆಟಿವ್ ಇರುವವರಿಗೆ ಮಾತ್ರ ವಿಮಾನವೇರಲು ಅವಕಾಶ ಎಂದು ಕರ್ನಾಟಕ ಎನ್‌ಆರ್‌ಐ ವೇದಿಕೆ ಅಧ್ಯಕ್ಷ ಪ್ರವೀಣ್ ಶೆಟ್ಟಿ ತಿಳಿಸಿದ್ದಾರೆ. ಮೊದಲ ವಿಮಾನದಲ್ಲಿ 30 ಗರ್ಭಿಣಿಯರು, ಕೆಲವು ಆರೋಗ್ಯ ಸಮಸ್ಯೆ ಇರುವವರೂ ಇರುತ್ತಾರೆ. ಅದಕ್ಕಾಗಿಯೇ ಅವರೊಂದಿಗೆ ಒಬ್ಬರು ವೈದ್ಯರೂ ಇರುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts