ವಿಜಯವಾಣಿ ಸುದ್ದಿಜಾಲ ಉಡುಪಿ
ಪ್ರಸಕ್ತ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಬಿಡುಗಡೆ ಮಾಡಿರುವ ಪ್ರಣಾಳಿಕೆಗೆ ‘ನ್ಯಾಯ ಪತ್ರ’ ಎಂದು ಹೆಸರಿಸಿದ್ದು, ತನ್ನ 60 ವರ್ಷದ ಆಡಳಿತದಲ್ಲಿ ದೇಶದ ಜನತೆಗೆ ಅನ್ಯಾಯ ಮಾಡಿದ್ದನ್ನು ಒಪ್ಪಿಕೊಂಡಂತಿದೆ ಎಂದು ಬಿಜೆಪಿ ಮಂಗಳೂರು ವಿಭಾಗದ ಪ್ರಭಾರಿ ಕೆ.ಉದಯಕುಮಾರ್ ಶೆಟ್ಟಿ ಟೀಕಿಸಿದ್ದಾರೆ.
ಉಡುಪಿಯ ಕಡಿಯಾಳಿಯಲ್ಲಿರುವ ಬಿಜೆಪಿ ಜಿಲ್ಲಾ ಮಾಧ್ಯಮ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿ ಅವಕಾಶ ಸಿಕ್ಕರೆ ಜನಪರ ಕೆಲಸ ಮಾಡುವುದಾಗಿ ಹೇಳಿದ್ದು, ಅವರ 4 ತಲೆಮಾರಿನವರು ಕೆಲಸ ಮಾಡಿಲ್ಲ ಎನ್ನುವುದನ್ನು ಒಪ್ಪಕೊಂಡಂತಿದೆ ಎಂದರು.
ಥೈಲ್ಯಾಂಡ್ ವ್ಯಾಮೋಹ
ಕಾಂಗ್ರೆಸ್ನ ಯುವರಾಜ ರಾಹುಲ್ ಗಾಂಧಿ ಅವರು ವಿದೇಶಿ ವ್ಯಾಮೋಹಿ ಎನ್ನುವುದನ್ನು ಮತ್ತೊಮ್ಮೆ ಸಾಬೀತಾಗಿದೆ. ಅವರ ಪ್ರಣಾಳಿಕೆಯ ಪರಿಸರ ವಿಭಾಗದಲ್ಲಿ ಬಳಸಿರುವ ಚಿತ್ರ ರಾಹುಲ್ ನೆಚ್ಚಿನ ತಾಣ ಥೈಲ್ಯಾಂಡ್ ಆಗಿದೆ. ನೀರಿನ ನಿರ್ವಹಣೆಯ ಚಿತ್ರ ನ್ಯೂಯಾರ್ಕ್ನ ಬ್ಲೋ ನದಿಯಾಗಿದೆ. ಅವರಿಗೆ ಹಿಂದುಸ್ತಾನದ ಕುರಿತು, ಇಲ್ಲಿನ ಪರಿಸರದ ಕುರಿತು ಅವರಿಗೆ ಕಿಂಚಿತ್ತೂ ಬಾಂಧವ್ಯ ಇಲ್ಲ ಎಂದರು.
ಬಿಜೆಪಿಯದ್ದು ಜನರ ಪ್ರಣಾಳಿಕೆ
ಬಿಜೆಪಿಯದ್ದು ಈ ಬಾರಿಯ ಜನರ ಪ್ರಣಾಳಿಕೆಯಾಗಿದೆ. ದೇಶದ 15 ಲಕ್ಷ ಜನರಿಂದ ಸಲಹೆ ಪಡೆದು, ದೇಶದ ಏಳಿಗೆ ಹಾಗೂ ಅಭಿವೃದ್ಧಿಯೇ ಮುಖ್ಯವಾಗಿರುವ ಪ್ರಣಾಳಿಕೆ ರಚಿಸಲಾಗಿದೆ. ಹೀಗಾಗಿ ನಮ್ಮದು ಅಭ್ಯರ್ಥಿ ಆಧಾರಿತ ಚುನಾವಣೆಯಲ್ಲ, ಪಕ್ಷ ಆಧಾರಿತ ಚುನಾವಣೆಯಾಗಿದೆ. 2014ರಿಂದ ಈತನಕ ದೇಶದ ಅಬಿವೃದ್ಧಿ ಯಾವ ರೀತಿಯಲ್ಲಿ ಆಗಿದೆ ಎಂಬ ಆಧಾರದಲ್ಲಿ ಚುನಾವಣೆ ನಡೆಯಲಿದೆ. ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ರ್ಯಾಲಿ ನಡೆಸಿದ ಬಳಿಕ ಎರಡೂ ಜಿಲ್ಲೆಯ ಶೇ.10ರಷ್ಟು ಹೆಚ್ಚಿನ ಮತದಾರರು ಬಿಜೆಪಿಯತ್ತ ಒಲವು ತೋರಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ವಕ್ತಾರರಾದ ವಿಜಯಕುಮಾರ್ ಉದ್ಯಾವರ, ಗೀತಾಂಜಲಿ ಸುವರ್ಣ, ಜಿಲ್ಲಾ ಬಿಜೆಪಿ ಕಾರ್ಯಾಲಯದ ಕಾರ್ಯದರ್ಶಿ ಶಿವಕುಮಾರ ಅಂಬಲಪಾಡಿ, ಜಾಲ್ಲಾ ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ ಇದ್ದರು.
ಯೋಗಿ ಆದಿತ್ಯನಾಥ, ಅಣ್ಣಾಮಲೈ ಭೇಟಿ
ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಪರ ಪ್ರಚಾರ ನಡೆಸಲು ಏ.22ರಂದು ಅಣ್ಣಾಮಲೈ ಹಾಗೂ ಏ.24ರಂದು ಯೋಗಿ ಆದಿತ್ಯನಾಥ ಆಗಮಿಸಲಿದ್ದಾರೆ. ಏ.19ರಂದು ಮಹಿಳಾ ಸಮಾವೇಶ ನಡೆಯಲಿದ್ದು, ಸುಮಲತಾ ಅಂಬರೀಷ್ ಆಗಮಿಸಲಿದ್ದಾರೆ. ಏ.20ರಂದು ಬೃಹತ್ ಯುವ ಸಮಾವೇಶ ಆಯೋಜಿಸಲಾಗಿದ್ದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗಮಿಸಲಿದ್ದಾರೆ ಎಂದು ಕೆ.ಉದಯಕುಮಾರ್ ಶೆಟ್ಟಿ ತಿಳಿಸಿದರು.