ಬಳ್ಳಾರಿ: ನಗರದ ಕಾಕರ್ಲತೋಟದ ಹನುಮಾನ್ ನಗರದಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿ, ಅಲೆಮಾರಿ ಸಮುದಾಯಗಳಿಗೆ ನಿವೇಶನಗಳ ಹಕ್ಕುಪತ್ರ ನೀಡುವುದು ಸೇರಿ ಅಗತ್ಯ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ಡಿಸಿ ಕಚೇರಿ ಆವರಣದಲ್ಲಿ ಅಲೆಮಾರಿ ಬುಡಕಟ್ಟು ಮಹಾಸಭಾ ಸೋಮವಾರ ಧರಣಿ ನಡೆಸಿತು.
ಶೀಘ್ರ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಬೇಕು. 80 ಸುಡುಗಾಡು ಸಿದ್ಧರ ಕುಟುಂಬಗಳಿಗೆ ಹಾಗೂ ಹಿರಿಯರಿಗೆ ಜಾತಿ ಪ್ರಮಾಣ ಪತ್ರ ಪಡೆಯುವಲ್ಲಿ ಆಗುತ್ತಿರುವ ಕಿರುಕುಳ ತಪ್ಪಿಸಬೇಕು. ಜಿಲ್ಲಾ ಪರಿಶಿಷ್ಟ ಜಾತಿ, ಪಂಗಡದ ದೌರ್ಜನ್ಯ ಸಮಿತಿಗೆ ಎಸ್ಸಿ, ಎಸ್ಟಿ ಮತ್ತು ಅಲೆಮಾರಿ ಸಮುದಾಯದ ಇಬ್ಬರನ್ನು ನೇಮಿಸಬೇಕು. ನಿವೇಶನ ಇಲ್ಲದೇ ನಗರದಲ್ಲಿ ವಾಸಿಸುತ್ತಿರುವ ಸೀಳ್ಳೆಕ್ಯಾತ, 200 ಕೊರಚ, ಕೊರಮ, ಚೆನ್ನದಾಸರು ಸಮುದಾಯದವರಿಗೆ ಸರ್ಕಾರಿ ಅಥವಾ ಖಾಸಗಿ ಜಮೀನು ಗುರುತಿಸಿ ನಿವೇಶನ ಮಂಜೂರು ಮಾಡಬೇಕು. ಜಿಲ್ಲಾ ಎಸ್ಸಿ, ಎಸ್ಟಿ, ಅಲೆಮಾರಿ ಸಮುದಾಯದ ಜಿಲ್ಲಾ ಅನುಷ್ಠಾನ ಸಮಿತಿ ಶೀಘ್ರ ಆಯ್ಕೆ ಮಾಡಬೇಕು. ಸಮುದಾಯದ ಸಮಸ್ಯೆಗಳನ್ನು ಆಲಿಸಲು ಮುಖಂಡರ ಸಮ್ಮುಖದಲ್ಲಿ ಡಿಸಿ ಪ್ರತ್ಯೇಕ ಸಭೆ ಕರೆಯಬೇಕೆಂದು ಎಂದು ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾ ಅಧ್ಯಕ್ಷ ವೈ.ಶಿವಕುಮಾರ್ ಒತ್ತಾಯಿಸಿದರು.
ಪ್ರಧಾನ ಕಾರ್ಯದರ್ಶಿ ಸುಬ್ಬಣ್ಣ, ಖಜಾಂಚಿ ಕೆ.ರಂಗಸ್ವಾಮಿ, ಕೆ.ಆನಂದ್, ಎಸ್.ಬಿ.ಮಂಜಪ್ಪ, ರಮಣ ಭಜಂತ್ರಿ, ಸಣ್ಣ ಅಂಜಿನಿ, ತಿಮ್ಮಯ್ಯ, ಹನುಮಂತ, ಶ್ರೀನಿವಾಸ್ ಇತರರು ಪಾಲ್ಗೊಂಡಿದ್ದರು.