ನವದೆಹಲಿ : ಕಳೆದ ವರ್ಷ ಜೂನ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಜೀವನವನ್ನು ಆಧರಿಸಿದ ಚಲನಚಿತ್ರ ‘ನಾಯ್: ದಿ ಜಸ್ಟೀಸ್’ ಬಿಡುಗಡೆಗೆ ತಡೆ ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ. ನಾಳೆ ಬಿಡುಗಡೆಗೆ ಸಿದ್ಧವಾಗಿರುವ ಚಿತ್ರದ ನಿರ್ಮಾಪಕರ ವಿರುದ್ಧ ಸುಶಾಂತ್ ಅವರ ತಂದೆ ಕೃಷ್ಣ ಕಿಶೋರ್ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾ ಮಾಡಿದೆ.
ಈ ಚಿತ್ರವನ್ನು ಕುಟುಂಬದ ಅನುಮತಿಯಿಲ್ಲದೆ ಚಿತ್ರೀಕರಿಸಿದ್ದು, ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿರುವವರ ನಂಬಿಕಸ್ಥರಿಂದ ವೈಭವೋಪೇತವಾಗಿ ನಿರ್ಮಿಸಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದ ಸಿಂಗ್ ಅವರು, ಈ ಚಿತ್ರದಿಂದ ಕುಟುಂಬಕ್ಕೆ ಮಾನಹಾನಿಯಾಗಿದೆ ಎಂದು 2 ಕೋಟಿ ಪರಿಹಾರವನ್ನೂ ಕೋರಿದ್ದರು. ಸುಶಾಂತ್ರ ಹೆಸರು ಬಳಸಿ ಅಥವಾ ಜೀವನವನ್ನಾಧರಿಸಿ ಯಾವುದೇ ಚಿತ್ರ, ನಾಟಕ ಇತ್ಯಾದಿಗಳನ್ನು ನಿರ್ಮಿಸಿ ಹಣ ಮಾಡಲು ಅವಕಾಶ ಕೊಡಬಾರದು ಎಂದು ಕೋರ್ಟ್ ಆದೇಶ ಕೋರಿದ್ದರು.
ನ್ಯಾಯಮೂರ್ತಿ ಸಂಜೀವ್ ನರುಲ ಅವರು ಚಿತ್ರದ ಬಿಡುಗಡೆಗೆ ತಡೆ ನೀಡಲು ನಿರಾಕರಿಸಿದ್ದು, ಚಿತ್ರದ ನಿರ್ಮಾಪಕರಿಗೆ ಖರ್ಚುವೆಚ್ಚಗಳ ಲೆಕ್ಕಪತ್ರಗಳನ್ನು ಪಾಲಿಸುವಂತೆ ಆದೇಶ ನೀಡಿದ್ದಾರೆ.
‘ನ್ಯಾಯ್ : ದ ಜಸ್ಟೀಸ್’ ಚಿತ್ರವು ಸುಶಾಂತ್ರ ನಿಗೂಢ ಸಾವಿನ ಸುತ್ತ ಹೆಣೆದಿರುವ ಚಿತ್ರ. ದಿಲೀಪ್ ಗುಲಾಟಿ ನಿರ್ದೇಶಿಸಿದ್ದು, ಸರಳ ಎ.ಸರೌಗಿ ಮತ್ತು ರಾಹುಲ್ ಶರ್ಮ ನಿರ್ಮಾಪಕರು. ಜುಬೇರ್ ಕೆ.ಖಾನ್ ಮತ್ತು ಶ್ರೇಯಾ ಶುಕ್ಲ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಚಿತ್ರದ ಹೊರತಾಗಿ ಇನ್ನೂ ಮೂರು ಚಿತ್ರಗಳು – ‘ಸೂಯಿಸೈಡ್ ಆರ್ ಮರ್ಡರ್ : ಎ ಸ್ಟಾರ್ ವಾಸ್ ಲಾಸ್ಟ್’, ‘ಶಶಾಂಕ್’ ಮತ್ತು ಮತ್ತೊಂದು ಇನ್ನೂ ಹೆಸರಿಡದ ಚಿತ್ರ – ಸುಶಾಂತ್ ಅವರ ಜೀವನದ ಮೇಲೆ ಮೂಡಿಬರುತ್ತಿವೆ ಎನ್ನಲಾಗಿದೆ. (ಏಜೆನ್ಸೀಸ್)
ಮಕ್ಕಳಿಗೆ ಕರೊನಾ ಚಿಕಿತ್ಸೆ : ರೆಮ್ಡೆಸಿವಿರ್ ಬೇಡ, ಸ್ಟಿರಾಯ್ಡ್ ಬಳಕೆಯಲ್ಲಿ ಇರಲಿ ಎಚ್ಚರ