ಬೆಂಗಳೂರು: ಲಾಕ್ಡೌನ್ ಯಾವಾಗ ಮುಗಿಯುತ್ತೆ? ಇನ್ಯಾವಾಗ ಜಾರಿಯಾಗುತ್ತೆ ಎನ್ನುವುದನ್ನು ಸದ್ಯ ಜ್ಯೋತಿಷಿಗಳೇ ಹೇಳಬೇಕೆನೋ. ಏಕೆಂದರೆ, ಕರೊನಾ ಹೊಸ ಪ್ರಕರಣಗಳು ಕಡಿಮೆಯಾಗಿ ಪರಿಸ್ಥಿತಿ ಸಹಜ ಸ್ಥಿತಿಗೆ ಬರುವವರೆಗೆ ನಿರ್ಬಂಧಗಳನ್ನು ವಿಧಿಸುವುದು ಅನಿವಾರ್ಯವಾಗಲಿದೆ.
ಆದರೆ, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಒಂದು ವೇಳೆ ಹೊಸ ಪ್ರಕರಣಗಳನ್ನು ನಿಯಂತ್ರಣಕ್ಕೆ ತಂದಲ್ಲಿ ಮಾತ್ರ ಸೆಪ್ಟಂಬರ್ ವೇಳೆಗೆ ದೇಶದಲ್ಲಿ ಕರೊನಾ ನಿಯಂತ್ರಣಕ್ಕೆ ಬರಬಹುದು ಎಂಬುದು ತಜ್ಞರ ಲೆಕ್ಕಾಚಾರವಾಗಿದೆ.
ಮೊದಲ ಹಂತದ ಲಾಕ್ಡೌನ್ ಘೋಷಣೆಯಾದಾಗ ಆಗಸ್ಟ್ ವೇಳೆಗೆ ಶಿಕ್ಷಣ ಸಂಸ್ಥೆಗಳ ಪುನಾರಂಭ ಸಾಧ್ಯವಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಈಗ ಸೆಪ್ಟಂಬರ್ವರೆಗೆ ಮಾತನಾಡುವಂತೆಯೇ ಇಲ್ಲ ಎಂಬುದು ಸ್ಪಷ್ಟವಾಗುತ್ತಿದೆ.
ಇದನ್ನೂ ಓದಿ; ಅಂತಿಮ ಸೆಮಿಸ್ಟರ್ ಪರೀಕ್ಷೆ ನಡೆಸಲೇಬೇಕು; ಪಟ್ಟು ಹಿಡಿದಿರೋದೇಕೆ ಕೇಂದ್ರ ಸರ್ಕಾರ
ಇದಕ್ಕೆ ಪೂರಕ ಎಂಬಂತೆ, ಜುಲೈ 31ರವರೆಗೆ ಎಲ್ಲ ಶಿಕ್ಷಕರು, ಇತರ ಸಿಬ್ಬಂದಿ ಮನೆಯಿಂದಲೇ ಕೆಲಸ ಮಾಡಬೇಕು ಎಂದು ಶಿಕ್ಷಣ ಸಂಸ್ಥೆ ಈಗಾಗಲೇ ಆದೇಶ ಹೊರಡಿಸಿದೆ. ಏಕೆಂದರೆ, ಲಾಕ್ಡೌನ್ ತೆರವಾದರೂ ಶಾಲೆಗಳಿಗೆ ಬಂದು ಕಚೇರಿ ಕೆಲಸ ಮಾಡುವ ವಾತಾವರಣವೂ ಇಲ್ಲ ಎಂಬುದನ್ನು ಇಲಾಖೆಯೇ ಒಪ್ಪಿಕೊಂಡಂತಾಗಿದೆ.
ಇನ್ನು ದೇಶಾದ್ಯಂತ ಕರೊನಾ ಸೋಂಕಿತರ ಸಂಖ್ಯೆ ಅಂಕೆಗೆ ಸಿಗುತ್ತಿಲ್ಲ. ಹೀಗಾಗಿ ಅಂತಿಮ ವರ್ಷದ ಪರೀಕ್ಷೆಯನ್ನೂ ನಡೆಸಬೇಡಿ ಎಂದು ಮಹಾರಾಷ್ಟ್ರ ಸೇರಿ ಹಲವು ರಾಜ್ಯಗಳ ಪಟ್ಟು ಹಿಡಿದಿವೆ. ಅಲ್ಲಿಗೆ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕ ವಾತಾವರಣವಿಲ್ಲ ಎನ್ನುವುದಂತೂ ಸ್ಪಷ್ಟ. ಈ ವಿಚಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಒಂದು ವೇಳೆ ಪರೀಕ್ಷೆ ಬೇಡವೆಂಬ ತೀರ್ಪು ಹೊರಬಿದ್ದರೆ, ಸದ್ಯಕ್ಕೆ ಯಾವುದೇ ಶೈಕ್ಷಣಿಕ ಚಟುವಟಿಕೆಗಳು ಇಲ್ಲವೇ ಇಲ್ಲ ಎನ್ನುವುದು ಸ್ಪಷ್ಟ.
ಇದನ್ನೂ ಓದಿ; ಅಂತಿಮ ಪರೀಕ್ಷೆ ಬೇಕಿಲ್ಲ; ಸುಪ್ರೀಂಕೋರ್ಟ್ ಮೊರೆ ಹೋಗಿದ್ಯಾರು? ದೇಶಾದ್ಯಂತ ರದ್ದಾಗುತ್ತಾ ಎಕ್ಸಾಂ?
ಜತೆಗೆ, ಶಾಲಾ- ಕಾಲೇಜುಗಳಿಗೆ ಆನ್ಲೈನ್ನಲ್ಲಿಯೇ ಪ್ರವೇಶ ಪ್ರಕ್ರಿಯೆ ನಡೆಸಲಾಗುತ್ತಿದೆ. ಜತೆಗೆ, ಎಲ್ಲ ಸಂಸ್ಥೆಗಳು ಆನ್ಲೈನ್ ತರಗತಿ ಬಗ್ಗೆ ಚರ್ಚೆ ಮಾಡುತ್ತಿವೆಯೇ ಹೊರತು ತರಗತಿ ಆಯಾವಾಗ ಆರಂಭವಾಗುತ್ತವೆ ಎಂಬುದಕ್ಕೆ ಸ್ಪಷ್ಟ ಉತ್ತರ ಅವರಲ್ಲೂ ಇಲ್ಲ.
ಕೇಂದ್ರ ಸರ್ಕಾರ ಈಗಾಗಲೇ ಜು.31ರವರೆಗೆ ಶಿಕ್ಷಣ ಸಂಸ್ಥೆಗಳನ್ನು ತೆರೆಯುವಂತಿಲ್ಲ ಎಂದು ಮಾರ್ಗಸೂಚಿ ಹೊರಡಿಸಿದೆ. 31ರ ನಂತರ ಹೊರಡಿಸಲಾಗುವ ಇನ್ನೊಂದು ಮಾರ್ಗಸೂಚಿಯಲ್ಲೂ ಇದೇ ನಿರ್ಬಂಧ ಮುಂದುವರಿಯಲಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಹಿರಿಯ ಅಧಿಕಾರಿಗಳು ಸುಳಿವು ನೀಡಿದ್ದಾರೆ.