ಬೆಂಗಳೂರು: ಕರೊನಾ ಎರಡನೇ ಅಲೆ ಕಟ್ಟಿಹಾಕಲು ಸೋಮವಾರದಿಂದ ಕಟ್ಟುನಿಟ್ಟಿನ ‘ಲಾಕ್ಡೌನ್’ ನಿಯಮ ಜಾರಿಯಾಗುತ್ತಿದೆ. ಅಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲ ಚಟುವಟಿಕೆ ಬಂದ್ ಆದರೂ, ನಿತ್ಯದ ವಿದ್ಯಮಾನಗಳನ್ನು ಜನರಿಗೆ ತಲುಪಿಸುವ ದಿನಪತ್ರಿಕೆಗಳ ವಿತರಣೆ ಹಾಗೂ ಸಾಗಣೆಗೆ ಯಾವುದೇ ಅಡ್ಡಿ ಇಲ್ಲ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ (ಡಿಜಿ-ಐಜಿಪಿ) ಪ್ರವೀಣ್ ಸೂದ್ ಸ್ಪಷ್ಟಪಡಿಸಿದ್ದಾರೆ.
‘ವಿಜಯವಾಣಿ’ ಜತೆ ಮಾತನಾಡಿದ ಪ್ರವೀಣ್ ಸೂದ್, ದಿನಪತ್ರಿಕೆಯೂ ಅಗತ್ಯ ಸೇವೆಗಳಲ್ಲಿ ಒಂದಾಗಿದೆ. ಜನ ಸಾಮಾನ್ಯರು ಪ್ರಪಂಚದ ಆಗು-ಹೋಗುಗಳ ಬಗ್ಗೆ ತಿಳಿಯಲು ಸಹಕಾರಿಯಾಗಿದೆ. ಜಗತ್ತಿನಲ್ಲಿ ಪ್ರಸ್ತುತ ನಡೆಯುತ್ತಿರುವ ವಿಷಯಗಳ ಮಾಹಿತಿ ಒದಗಿಸುವ ‘ದಿನಪತ್ರಿಕೆ’ಗಳ ಸಾಗಾಣಿಕೆ, ಹಂಚಿಕೆ ಹಾಗೂ ಇದಕ್ಕೆ ಸಂಬಂಧಿಸಿದ ಎಲ್ಲ ಕಾರ್ಯಗಳಿಗೂ ವಿನಾಯಿತಿ ನೀಡಲಾಗಿದೆ. ದಿನಪತ್ರಿಕೆ ಓದುಗರು, ಏಜೆಂಟರು ಹಾಗೂ ಇದಕ್ಕೆ ಸಂಬಂಧಿಸಿದಂತೆ ಕಾರ್ಯ ನಿರ್ವಹಿಸುತ್ತಿರುವವರು ಲಾಕ್ಡೌನ್ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಲಾಕ್ಡೌನ್ನಿಂದ ಪತ್ರಿಕೆ ವಿತರಣೆ ಹಾಗೂ ಸಾಗಣೆ ಕಾರ್ಯಗಳಿಗೆ ಯಾವುದೇ ರೀತಿಯ ಅಡ್ಡಿ ಇರುವುದಿಲ್ಲ. ಎಂದಿನಂತೆ ಸರಬರಾಜಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಎಂದಿನಂತೆ ಪತ್ರಿಕೆ ಹಂಚಿ, ಕಾಫಿ-ಚಹಾದಂತೆ ಪತ್ರಿಕೆಯೂ ಬೇಕು
ವಿಜಯವಾಣಿ ಜತೆ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಎಷ್ಟೋ ಜನರು ಪ್ರತಿನಿತ್ಯ ಬೆಳಗ್ಗೆ ಕಾಫಿ, ಚಹಾ ಸಿಗದಿದ್ದರೂ ಚಿಂತಿಸುವುದಿಲ್ಲ. ಆದರೆ, ದಿನ ಪತ್ರಿಕೆ ಮಾತ್ರ ಅಗತ್ಯವಾಗಿ ಬೇಕಾಗುತ್ತದೆ. ಹೀಗಾಗಿ ಇದರ ಸೇವೆಗಳಿಗೆ ಅಡ್ಡಿಪಡಿಸುವುದಿಲ್ಲ. ಈ ಹಿಂದಿನಂತೆ ದಿನ ಪತ್ರಿಕೆಗಳು ಹಂಚಿಕೆಯಾಗಲಿದೆ. ಬೆಳಗ್ಗೆ 10 ಗಂಟೆವರೆಗೆ ಅಂಗಡಿಗಳಲ್ಲಿ ಖರೀದಿ ಮಾಡಬಹುದು. ನಗರದಲ್ಲಿ ದಿನಪತ್ರಿಕೆ ಸಾಗಾಟ ವಾಹನ, ಹಂಚಿಕೆ, ಮಾರಾಟಕ್ಕೆ ಎಂದಿನಂತೆ ಅವಕಾಶ ಕಲ್ಪಿಸಲಾಗಿದೆ. ದಿನ ಪತ್ರಿಕೆ ಖರೀದಿಸಬಹುದೇ? ಅಥವಾ ಎಂದಿನಂತೆ ಮನೆ ಬಾಗಿಲಿಗೆ ಬರುತ್ತದೆಯೇ? ಎಂಬ ಬಗ್ಗೆ ಗೊಂದಲ ಬೇಡ. ಈವರೆಗೆ ಹೇಗಿತ್ತೋ ಹಾಗೆಯೇ ಮುಂದು ವರಿಯಲಿದೆ. ಪ್ರಪಂಚ, ದೇಶ, ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಜನರಿಗೆ ತಲುಪಿಸುವಲ್ಲಿ ದಿನ ಪತ್ರಿಕೆಗಳು ಮಹತ್ವದ ಪಾತ್ರ ವಹಿಸುತ್ತವೆ. ಆದ್ದರಿಂದ ಅಗತ್ಯ ಸೇವೆಗಳಂತೆ ಪತ್ರಿಕೆ ಸರಬರಾಜಿಗೂ ವಿನಾಯಿತಿ ಇದೆ ಎಂದು ಕಮಲ್ ಪಂತ್ ತಿಳಿಸಿದ್ದಾರೆ.
‘ತಂದೆ ಕಾಣೆಯಾಗಿದ್ದಾರೆ, ಹುಡುಕಿಕೊಡಿ ಪ್ಲೀಸ್.. ಲಾಕ್ಡೌನ್ನಿಂದ ಹೊರಗೆ ಹೋಗಲಾಗುತ್ತಿಲ್ಲ, ಸಹಾಯ ಮಾಡಿ: ಪುತ್ರನ ವಿನಂತಿ
ಆಸ್ಪತ್ರೆಯಿಂದ ತಪ್ಪಿಸಿಕೊಂಡು ಭತ್ತದ ಗದ್ದೆಯಲ್ಲಿ ಅವಿತು ಕೂತ ಸೋಂಕಿತ: ಕುತೂಹಲ ಮೂಡಿಸಿರುವ ಪ್ರಕರಣ!