ಚೆನ್ನೈ: ತಮಿಳುನಾಡು ದಲಿತ ಶಾಸಕ ಪ್ರಭು ಅವರ ಅಂತರ್ಜಾತಿ ವಿವಾಹ ಕುರಿತು ರಾಜ್ಯಾದ್ಯಂತ ಭಾರಿ ಚರ್ಚೆಯಾಗುತ್ತಿದೆ. ಮಗಳನ್ನು ಅಪಹರಿಸಿ, ಬಲವಂತವಾಗಿ ಮದುವೆ ಮಾಡಿದ್ದಾರೆಂದು ಯುವತಿಯ ತಂದೆ ಪ್ರಭು ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಇದರ ಬೆನ್ನಲ್ಲೇ ಪ್ರಭು ನಮ್ಮಿಬ್ಬರದ್ದು ಪ್ರೇಮ ವಿವಾಹ ಎಂದು ಸ್ಪಷ್ಟನೆ ನೀಡಿದ್ದರು. ಆದರೆ, ಯುವತಿ ಸೌಂದರ್ಯ ಮಾತ್ರ ಮಾತನಾಡಿರಲಿಲ್ಲ. ಇದೀಗ ಆಕೆಯ ಸಹ ಮಾತನಾಡಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಅಂದಹಾಗೆ ಎಐಎಡಿಎಂಕೆ ಶಾಸಕ ಪ್ರಭು ಎರಡು ವಾರಗಳ ಹಿಂದೆ ಕಲಕುರಚಿ ಜಿಲ್ಲೆಯಲ್ಲಿರುವ ದೇವಸ್ಥಾನ ಪೂಜಾರಿ ಮತ್ತು ತಮ್ಮ ಪಕ್ಷದ ಸದಸ್ಯ ಎಸ್. ಸ್ವಾಮಿನಾಥನ್ ಮನೆಗೆ ತೆರಳಿದ್ದರು. ಇಬ್ಬರದು 10 ವರ್ಷಗಳ ಪರಿಚಯ. ಮನೆಗೆ ಬಂದಾಗಲೆಲ್ಲಾ ಸ್ವಾಮಿನಾಥನ್ ಆತ್ಮೀಯವಾಗಿ ಬರಮಾಡಿಕೊಳ್ಳುತ್ತಿದ್ದರು. ಪ್ರಭು ದಲಿತನಾಗಿದ್ದು, ಸ್ವಾಮಿನಾಥನ್ ಮೇಲ್ಜಾತಿಯವರು. ಹೀಗಿದ್ದರೂ, ಇಬ್ಬರ ನಡುವೆ ಒಳ್ಳೆಯ ಬಾಂದವ್ಯ ಇತ್ತು. ಆದರೆ, ಒಂದು ದಿನ ಸ್ವಾಮಿನಾಥನ್, ಪ್ರಭುರನ್ನು ಇನ್ನೆಂದು ಮನೆಗೆ ಬರಲೇಬೇಡ ಎಂದು ಘಂಟಾಘೋಷವಾಗಿ ಹೇಳಿದ್ದರು.
ಇದನ್ನೂ ಓದಿ: ಚೀನಾ ವಿರುದ್ಧ ತಂತ್ರ ಹೆಣೆಯಲು ಕರೆ: ಕ್ವಾಡ್ ದೇಶಗಳ ವಿದೇಶಾಂಗ ಸಚಿವರ ಜತೆ ಜಪಾನ್ ಪ್ರಧಾನಿ ಸಭೆ
ಏಕೆಂದರೆ, 35 ವರ್ಷದ ಪ್ರಭು ತಮ್ಮ ಕುಟುಂಬದೊಂದಿಗೆ ಸ್ವಾಮಿನಾಥನ್ ಮನೆಗೆ ತೆರಳಿ 19 ವರ್ಷದ ಮಗಳು ಸೌಂದರ್ಯಳನ್ನು ಮದುವೆ ಮಾಡಿಕೊಡುವಂತೆ ಕೇಳಿದ್ದರು. ಇದೇ ಅವರ ಕೋಪಕ್ಕೆ ಕಾರಣವಾಗಿತ್ತು. ಇನ್ನೆಂದು ಮನೆಗೆ ಬರಲೇಬೇಡ. ಮದುವೆ ಪ್ರಶ್ನೆಯೇ ಇಲ್ಲವೆಂದರು. ಅವಮಾನಿಸಿದರು. ನಮ್ಮ ಸಮುದಾಯವಾಗಲಿ ಅಥವಾ ಕುಟುಂಬವಾಗಲಿ ಅಂತರ್ಜಾತಿ ವಿವಾಹಕ್ಕೆ ಒಪ್ಪುವುದಿಲ್ಲ ಎಂದು ಹೇಳಿದರು. ನಮಗೆ ಅಸಮಾಧಾನವಿದ್ದರೂ ಯಾವುದೇ ಗೊಂದಲ ಸೃಷ್ಟಿಸದೃ ಅವರ ಮನೆಯಿಂದ ಶಾಂತಿಯುತವಾಗಿಯೇ ಹೊರಬಂದೆವು ಎಂದು ಪ್ರಭು ಹೇಳಿಕೊಂಡಿದ್ದಾರೆ. ಆದರೆ, ಇದರಿಂದ ನಾನು ಧೃತಿಗೆಡಲಿಲ್ಲ ನಾನು ಮತ್ತು ಸೌಂದರ್ಯ ಒಳ್ಳೆಯ ಫ್ರೆಂಡ್ಸ್ ಆಗಿದ್ದೆವು. ಮಾರ್ಚ್ನಲ್ಲಿ ಲಾಕ್ಡೌನ್ ಆರಂಭವಾದ ಬಳಿಕ ನಾವಿಬ್ಬರು ಪ್ರೀತಿಯ ಬಲೆಯಲ್ಲಿ ಬಿದ್ದೆವು. ಪ್ರೀತಿ ಶುರುವಾಗಿ ಕೆಲವೇ ತಿಂಗಳಾಗಿದ್ದರು ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಹಚ್ಚಿಕೊಂಡಿದ್ದೆವು ಎನ್ನುತ್ತಾರೆ ಪ್ರಭು.
ಇಬ್ಬರ ಮದುವೆಗೆ ಸೌಂದರ್ಯ ಕುಟುಂಬ ಒಪ್ಪದಿದ್ದಾಗ ಪ್ರಭು ತಮ್ಮ ಕುಟುಂಬದ ಒಪ್ಪಿಗೆ ಮೇರೆಗೆ ಮದುವೆಯಾಗಿದ್ದಾರೆ. ಆದರೆ, ಸ್ವಾಮಿನಾಥನ್ ಮದ್ರಾಸ್ ಹೈಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದು, ಶಾಸಕ ನನ್ನ ಮಗಳನ್ನು ಅಪಹರಿಸಿದ್ದಾರೆ. ಮೂರು ವರ್ಷಗಳಿಂದ ಅವಳೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದ್ದನು. ಆವಾಗಿನ್ನೂ ಆಕೆ ಅಪ್ರಾಪ್ತೆಯಾಗಿದ್ದಳು ಎಂದು ಆರೋಪಿಸಿದ್ದಾರೆ. ಮಗಳು ಮತ್ತು ಪ್ರಭು ನಡುವಿನ ವಯಸ್ಸಿನ ಅಂತರ ತುಂಬಾ ಇದೆ. ಹೀಗಾಗಿ ನಮಗೆ ಮದುವೆ ಇಷ್ಟವಿಲ್ಲ ಎಂದು ಸ್ವಾಮಿನಾಥ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಅಲ್ಲದೆ, ಮಗಳನ್ನು ಅಪಹರಿಸಿ, ಬೆದರಿಸಿ, ಆಮಿಷವೊಡ್ಡಿ ಮದುವೆಯಾಗಿದ್ದಾರೆಂದು ಆರೋಪ ಮಾಡಿದ್ದಾರೆ.
ಯಾರು ಕೂಡ ನನ್ನನ್ನು ಅಪಹರಿಸಿಲ್ಲ
ಇದಕ್ಕೆ ನಿನ್ನೆಯಷ್ಟೇ ಪ್ರತಿಕ್ರಿಯೆ ನೀಡಿದ್ದ ಪ್ರಭು ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ಮದುವೆಯಾಗಿದ್ದೇವೆ ಎಂದಿದ್ದರು. ಆದರೆ, ಸೌಂದರ್ಯ ಮಾತನಾಡಿರಲಿಲ್ಲ. ಇದೀಗ ಸೌಂದರ್ಯ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಯಾರು ಕೂಡ ನನ್ನನ್ನು ಅಪಹರಿಸಿಲ್ಲ. ನಾವಿಬ್ಬರು ಪ್ರೀತಿಸುತ್ತಿದೆವು. ನಮ್ಮ ಪಾಲಕರು ಮದುವೆಗೆ ಒಪ್ಪದಿದ್ದಕ್ಕೆ ಮನೆ ಬಿಟ್ಟು ಬರಬೇಕಾಯಿತು. ನನ್ನ ಹೃದಯ ಬಯಸಿದಂತೆ ನನ್ನದೇ ಸ್ವಂತ ಭವಿಷ್ಯವನ್ನು ಹುಡುಕಿದೆ ಎಂಬ ಸಂತೋಷ ನನ್ನಲ್ಲಿದೆ. ನನ್ನ ತಂದೆಯ ಸಂಕಟದ ಬಗ್ಗೆಯೂ ನನಗೆ ನೋವಾಗಿದೆ. ನಮ್ಮ ಪಾಲಕರು ಅವರನ್ನು ಸಮಾಧಾನ ಪಡಿಸುತ್ತಾರೆಂಬ ಭರವಸೆ ಇದೆ ಎಂದು ಸೌಂದರ್ಯ ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.
ಇದನ್ನೂ ಓದಿ: PHOTOS|ಮನಾಲಿಯಲ್ಲಿ ಪ್ರಣೀತಾ ಹಂಗಾಮಾ
ಇನ್ನು ಸ್ವಾಮಿನಾಥನ್ ತಾವು ನ್ಯಾಯಾಲಯಕ್ಕೆ ಸಲ್ಲಿಸಿರುವು ಅರ್ಜಿಯಲ್ಲಿ ಪ್ರಭು ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದ್ದು, ಪ್ರಭುಗೆ ತುಂಬಾ ಮಹಿಳೆಯರು ಜತೆ ಅಕ್ರಮ ಸಂಬಂಧ ಇದೆ. ತನ್ನ ಅಸಭ್ಯ ಹವ್ಯಾಸಗಳಿಂದ ಮುಕ್ತಿ ಹೊಂದಲು ಅಂದಿನಿಂದ ಪೂಜಾ ಪರಿಹಾರಕ್ಕಾಗಿ ನನ್ನ ಬಳಿ ಬರುತ್ತಿದ್ದ. ಅವರ ಕುಟುಂಬದವರ ಮನವಿಯಿಂದ ಪೂಜೆಯ ಮೂಲಕ ಪ್ರಭುಗೆ ನೆರವಾಗುತ್ತಿದ್ದೆ. ಒಮ್ಮೆ ನನ್ನ ಮಗಳೆಲ್ಲಿ ಎಂದು ಕೇಳಿದ್ದಕ್ಕೆ ಪ್ರಭು ತಂದೆ ನನಗೆ ಬೆದರಿಕೆ ಹಾಕಿ, ಸುಮ್ಮನೇ ಇರುವಂತೆ 1 ಕೋಟಿ ರೂ. ಹಣ ನೀಡಲು ಬಂದರು ಎಂದು ಆರೋಪಿಸಿದ್ದಾರೆ.
ಆದರೆ, ಈ ಬಗ್ಗೆ ಮಾತನಾಡಿರುವ ಪ್ರಭು ಇದ್ಯಾವುದು ಸತ್ಯವಲ್ಲ. ಇನ್ನೊಬ್ಬರ ಚಾರಿತ್ರ್ಯ ವಧೆ ಮಾಡುವ ಕುತಂತ್ರವಾಗಿದೆ. ನಾನು ಅವರ ಮಗಳನ್ನು ಪ್ರೀತಿಸಿ ಮದುವೆಯಾಗಿದ್ದೇನೆ. ಆಕೆಯನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತೇನೆ. ನಾವಿಬ್ಬರು ಸಮುದಾಯ, ಜಾತಿ ಮತ್ತು ವಯಸ್ಸನ್ನು ನೋಡಿ ಲವ್ ಮಾಡಲಿಲ್ಲ. ನಾನು 15 ವರ್ಷ ದೊಡ್ಡವನು ಎಂಬುದು ಅವಳಿಗೂ ಗೊತ್ತಿದೆ ಎಂದು ಪ್ರಭು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ, ನ್ಯಾಯಾಲಯದಲ್ಲಿ ಹೋರಾಡಲು ಸಿದ್ಧನಿದ್ದೇನೆ.ನ್ಯಾಯ ಸಿಗುವ ಭರವಸೆ ಇದೆ ಎಂದಿದ್ದಾರೆ. ಆದರೆ, ಈ ವಿಚಾರವು ರಾಜ್ಯದಲ್ಲಿ ಭಾರಿ ಚರ್ಚೆಯಾಗುತ್ತಿರುವುದರಿಂದ ನೋವಿದೆ ಎಂದಿದ್ದಾರೆ. (ಏಜೆನ್ಸೀಸ್)
ತಮಿಳುನಾಡಿನಾದ್ಯಂತ ವಿವಾದದ ಬಿರುಗಾಳಿ ಎಬ್ಬಿಸಿದೆ ದಲಿತ ಶಾಸಕನ ಅಂತರ್ಜಾತಿ ವಿವಾಹ..!