ಲಖನೌ: NCERT ಪಠ್ಯಕ್ರಮವನ್ನು ಅನುಸರಿಸುವ ಬೋರ್ಡ್ ಶಾಲೆಗಳಲ್ಲಿ ಮೊಘಲ್ ಇತಿಹಾಸ ಅಧ್ಯಯನವನ್ನು ತೆಗೆದು ಹಾಕಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
ಮುಂದಿನ ಶೈಕ್ಷಣಿಕ ವರ್ಷದಿಂದ ಈ ಕ್ರಮ ಜಾರಿಗೆ ಬರಲಿದ್ದು NCERT ಪಠ್ಯಕ್ರಮದಲ್ಲಿರುವ ಮೊಘಲ್ ಇತಿಹಾಸದ ಬಗ್ಗೆ ತೆಗೆದುಹಾಕಿ ಪರ್ಯಾಯಾವಾಗಿ ಬೇರೆ ಪಠ್ಯಕ್ರಮವನ್ನು ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಮೂಲಗಳ ಪ್ರಕಾರ 12ನೇ ತರಗತಿ ಪಠ್ಯದಲ್ಲಿ ಅಕ್ಬರ್ ನಾಮ, ಬಾದ್ಶಾಹ ನಾಮ ಸೇರಿದಂತೆ ಮೊಘಲ್ ಆಸ್ಥಾನಕ್ಕೆ ಸಂಬಂಧಿಸಿದ ಅಧ್ಯಾಯಗಳನ್ನು ತೆಗೆದು ಹಾಕಲಾಗುವುದು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಮ್ಯೂಸಿಕ್ ಸೌಂಡ್ ಕಡಿಮೆ ಮಾಡಿ ಎಂದಿದ್ದಕ್ಕೆ ಮಹಿಳೆಗೆ ಗುಂಡೇಟು!
11ನೇ ತರಗತಿ ಪಠ್ಯದಲ್ಲಿ ರೈಸ್ ಆಫ್ ಇಸ್ಲಾಂ, ಕಲ್ಚರಲ್ ಕಾಂಫ್ಲಿಕ್ಟ್ ಪಾಠಗಳನ್ನು ತೆಗೆದು ಹಾಕಲಾಗಿದೆ. ಅದೇ ರೀತಿ ಕೋಲ್ಡ್ ವಾರ್ ಮತ್ತು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಂಗ್ರೆಸ್ ಪಾತ್ರದ ಕುರಿತಿನ ಅಧ್ಯಯನಗಳನ್ನು ತೆಗೆದು ಹಾಕಲಾಗಿದೆ ಎಂದು ವರದಿಯಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಯುಪಿ ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ ವಿದ್ಯಾರ್ಥಿಗಳು ಸತ್ಯವನ್ನು ಅರಿಯಲಿ ಎಂಬ ಕಾರಣಕ್ಕೆ ನಾವು ಇತಿಹಾಸವನ್ನು ಸರಿಪಡಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಸಮಾಜವಾದಿ ಪಕ್ಷ, ಎಡಪಂಥೀಯ ಬರಹಗಾರರು ಉತ್ತರಪ್ರದೇಶ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದ್ದು ಪಠ್ಯಕ್ರಮದಿಂದ ಪಾಠ ತೆಗೆದು ಹಾಕಿದ ಮಾತ್ರಕ್ಕೆ ಇತಿಹಾಸ ಬದಲಾಗುವುದಿಲ್ಲ ಎಂದು ಕಿಡಿಕಾರಿದ್ದಾರೆ.