ಪಾಟ್ನ: ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕಾಂಗ್ರೆಸ್ ನೇತೃತ್ವದ INDIA ಮೈತ್ರಿಕೂಟ ತೊರೆಯೋದು ಖಚಿತವಾಗಿದ್ದು, ಬಿಹಾರ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಬಿಜೆಪಿ ಜೊತೆ ಸೇರಿ ಬಿಜೆಪಿ – ಜೆಡಿಯು ಮೈತ್ರಿ ಸರ್ಕಾರದಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿ ಸೇರಲು ED, ITಯ ಭಯವೇ ಕಾರಣ!
ಜನವರಿ 28ರಂದು ನಿತೀಶ್ ಕುಮಾರ್ ಅವರು ಮುಖ್ಯಮಂತ್ರಿಯಾದರೆ, ಬಿಜೆಪಿಯ ಸುಶೀಲ್ ಕುಮಾರ್ ಅವರು ಉಪ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ. ಬಿಜೆಪಿ ಜೊತೆಗಿನ ದೋಸ್ತಿಯೇ ಒಳಿತು ಎಂದು ಭಾವಿಸಿರುವ ನಿತೀಶ್ ಕುಮಾರ್ ಅವರು ಶೀಘ್ರದಲ್ಲೇ ಆರ್ಜೆಡಿ ಜೊತೆಗಿನ ಮೈತ್ರಿಗೆ ಅಂತ್ಯ ಹಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ನಿತೀಶ್ ಕುಮಾರ್ ಜೊತೆ ಕೈ ಜೋಡಿಸುವ ಮೂಲಕ ಬಿಜೆಪಿಯು ಬಿಹಾರ ರಾಜಕೀಯ ಹಾಗೂ ಲೋಕಸಭೆ ಚುನಾವಣೆ ಮೇಲೆ ಹಿಡಿತ ಸಾಧಿಸಿ, ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ನಿತೀಶ್ ಸರ್ಕಾರಕ್ಕೆ ಬಿಜೆಪಿ ಬೆಂಬಲ ನೀಡಿರುವುದರಿಂದ ಬಿಜೆಪಿ ಪಕ್ಷದ ಇಬ್ಬರು ನಾಯಕರು ಉಪ ಮುಖ್ಯಮಂತ್ರಿಗಳಾಗಲಿದ್ದಾರೆ. ಸದ್ಯಕ್ಕೆ ವಿಧಾನಸಭೆ ಚುನಾವಣೆ ನಡೆಯುವುದಿಲ್ಲ ಎಂದು ಮೂಲಗಳು ತಿಳಿಸಿದ್ದು, ಬಿಹಾರದಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿರುವುದರಿಂದ ಯಾವ ಪಕ್ಷವೂ ಇದಕ್ಕೆ ಆತುರದ ವಹಿಸ್ತಿಲ್ಲ. ಮುಂದಿನ ಏಪ್ರಿಲ್, ಮೇನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯ ಮೇಲೆ ಕೇಂದ್ರೀಕೃತವಾಗಿರುತ್ತದೆ.
ಜನತಾದಳ (ಯುನೈಟೆಡ್) ಮುಖ್ಯಸ್ಥರು ಜನವರಿ 28 ರಂದು ತಮ್ಮ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 2022 ರಲ್ಲಿ ಬಿಜೆಪಿ ಮೈತ್ರಿಕೂಟ ತ್ಯಜಿಸಿ ಅರ್ಜೆಡಿ ಜತೆ ಸರ್ಕಾರ ರಚಿಸಿದ್ದರು. ನಿತೀಶ್ ಮಹಾರಾಣಾ ಜಯಂತಿಯಂದು ಭಾನುವಾರ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಬೇಕಿತ್ತು. ಆದರೀಗ ಅದೇ ದಿನ ಬಿಜೆಪಿ ಜತೆ ಸೇರಿ ಸರ್ಕಾರ ರಚಿಸಲಿದ್ದಾರೆ ಎನ್ನಲಾಗಿದೆ.
ನಿತೀಶ್ ಅವರ ಘರ್ ವಾಪ್ಸಿಯ ಷರತ್ತುಗಳು ಜೆಡಿಯುಗೆ ನೀಡಲಾಗುವ ಲೋಕಸಭಾ ಸ್ಥಾನಗಳ ಕಡಿತವನ್ನು ಒಳಗೊಂಡಿವೆ ಎಂದು ಹೇಳಲಾಗಿದೆ. 2019 ರಲ್ಲಿ ಜೆಡಿಯು 17 ರಲ್ಲಿ ಸ್ಪರ್ಧಿಸಿ 16 ಸ್ಥಾನಗಳನ್ನು ಗೆದ್ದಿತ್ತು. ಆದರೆ, ಈ ಬಾರಿ 12-15 ಸ್ಥಾನಗಳಿಗೆ ತೃಪ್ತಿಪಡಬೇಕಾಗಿದೆ ಎನ್ನಲಾಗಿದೆ. ನಿತೀಶ್ ಅವರ ಬಿಜೆಪಿ ಮರು-ಹೊಂದಾಣಿಕೆ ಇನ್ನೂ ಸ್ಪಷ್ಟವಾಗಿಲ್ಲದಿದ್ದರೂ, ರಾಜಕೀಯದಲ್ಲಿ, ಬಾಗಿಲುಗಳು ಶಾಶ್ವತವಾಗಿ ಮುಚ್ಚಲ್ಪಟ್ಟಿಲ್ಲ ಎಂಬ ಸುಶೀಲ್ ಕುಮಾರ್ ಮೋದಿಯ ಹೇಳಿಕೆಯ ನಂತರ ಈ ಊಹಾಪೋಹಗಳಿಗೆ ಮತ್ತಷ್ಟು ರೆಕ್ಕೆ ಪುಕ್ಕ ಬಂದಿದೆ.
ಬಿಜೆಪಿಗೆ ಸೆಡ್ಡು ಹೊಡೆದು, ಆರ್ಜೆಡಿ ಜತೆ ಮೈತ್ರಿ ಮಾಡಿಕೊಂಡಿರುವ ನಿತೀಶ್ ಕುಮಾರ್ ಅವರಿಗೆ ಸುಗಮವಾಗಿ ಸರ್ಕಾರ ಮುನ್ನಡೆಸಲು ಕೂಡ ಆಗುತ್ತಿಲ್ಲ ಎಂದು ತಿಳಿದುಬಂದಿದೆ. ಇದೇ ಕಾರಣಕ್ಕಾಗಿ ಅವರು ಮತ್ತೆ ಬಿಜೆಪಿ ಜತೆ ಹೆಜ್ಜೆ ಹಾಕಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಕುರಿತು ನಿತೀಶ್ ಕುಮಾರ್ ಅವರು ಅಧಿಕೃತ ಘೋಷಣೆ ಮಾಡಲಿದ್ದಾರೆ. ಬಿಹಾರದಲ್ಲಿ ರಾಹುಲ್ ಗಾಂಧಿ ನಡೆಸುವ ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ಪಾಲ್ಗೊಳ್ಳದಿರಲು ನಿತೀಶ್ ಕುಮಾರ್ ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಒಟ್ಟಿನಲ್ಲಿ, ನರೇಂದ್ರ ಮೋದಿ ಅವರನ್ನು ಮಣಿಸಲು ಒಗ್ಗೂಡಿದ ಪ್ರತಿಪಕ್ಷಗಳ ಪರಿಸ್ಥಿತಿ ಈಗ ಯುದ್ಧಕ್ಕೂ ಮೊದಲೇ ಶಸ್ತ್ರತ್ಯಾಗ ಮಾಡಿದಂತಾಗಿದೆ.
INDIA ಮೈತ್ರಿಕೂಟಕ್ಕೆ ಭಾರೀ ಹಿನ್ನಡೆ: ಲೋಕಸಭಾ ಚುನಾವಣೆ ಸೀಟು ಹಂಚಿಕೆ ವಿಚಾರವಾಗಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹಾಗೂ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಇಬ್ಬರೂ ಭಿನ್ನ ರಾಗ ತೆಗೆದಿರುವ ಹೊತ್ತಲ್ಲೇ, ಬಿಹಾರ ಸಿಎಂ ನಿತೀಶ್ ಕುಮಾರ್ ಕೂಡಾ ಇಂಡಿ ಮೈತ್ರಿ ಕೂಟಕ್ಕೆ ಶಾಕ್ ನೀಡಿದ್ದಾರೆ. ಪ್ರಧಾನಿ ಮೋದಿ ಅವರನ್ನು ಹಾಡಿ ಹೊಗಳಿರುವ ಜೊತೆಯಲ್ಲೇ ಹಿಂದಿನ ಯುಪಿಎ ಸರ್ಕಾರದ ಹಲವು ತೀರ್ಮಾನಗಳನ್ನು ಪ್ರಶ್ನಿಸಿದ್ದಾರೆ. ಬಿಹಾರ್ ಸಿಎಂ ನಿತೀಶ್ ಕುಮಾರ್ ಜನವರಿ 28 ರಂದು ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡು ಮತ್ತೆ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಲಿದ್ದಾರೆ.