ನವದೆಹಲಿ: ನಿರ್ಭಯಾ ಪ್ರಕರಣದ ಅಪರಾಧಿಗಳನ್ನು ಜನವರಿ 22ರಂದು ಗಲ್ಲಿಗೇರಿಸಲಾಗದು. ಅದು ಸರಿಯಲ್ಲ ಎಂದು ದೆಹಲಿ ಸರ್ಕಾರ ಬುಧವಾರ ಹೈಕೋರ್ಟ್ಗೆ ಹೇಳಿದೆ.
ನಿರ್ಭಯಾ ರೇಪಿಸ್ಟ್ಗಳನ್ನು ಜನವರಿ 22ರಂದು ಗಲ್ಲಿಗೇರಿಸುವುದಕ್ಕೆ ದಿನ ನಿಗದಿಯಾಗಿದೆ. ಈ ತಿಂಗಳ ಆರಂಭದಲ್ಲಿ ಜನವರಿ 22ರ ಬೆಳಗ್ಗೆ 7 ಗಂಟೆಗೆ ನೇಣಿಗೇರಿಸುವಂತೆ ದೆಹಲಿ ಕೋರ್ಟ್ ಆದೇಶಿಸಿತ್ತು.
ತಿಹಾರ್ ಜೈಲು ಆಡಳಿತದ ಪರ ನ್ಯಾಯವಾದಿ ರಾಹುಲ್ ಮೆಹ್ರಾ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದ್ದು, ರಾಷ್ಟ್ರಪತಿಗಳು ದಯಾ ಅರ್ಜಿಯನ್ನು ತಿರಸ್ಕರಿಸಿದ ಬಳಿಕವಷ್ಟೇ ಅಪರಾಧಿಗಳನ್ನು ಗಲ್ಲಿಗೇರಿಸುವುದು ಸಾಧ್ಯ. ನಾವು ಕಾನೂನಿನ ಚೌಕಟ್ಟಿನಲ್ಲಿ ಬದುಕುತ್ತಿರುವ ಕಾರಣ ರಾಷ್ಟ್ರಪತಿಗಳಿಂದ ದಯಾ ಅರ್ಜಿ ತಿರಸ್ಕೃತವಾದ 14 ದಿನಗಳ ಬಳಿಕವಷ್ಟೇ ನೇಣು ಶಿಕ್ಷೆ ಜಾರಿಯಾಗಬೇಕು. ಈ ಹದಿನಾಲ್ಕು ದಿನಗಳ ಅವಧಿಯನ್ನು ಅಪರಾಧಿಗಳಿಗೆ ನೀಡಬೇಕಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮುಕೇಶ್ ದಯಾ ಅರ್ಜಿಯನ್ನು ಮಂಗಳವಾರವಷ್ಟೇ ರಾಷ್ಟ್ರಪತಿಗಳಿಗೆ ರವಾನಿಸಿದ್ದಾನೆ. ಮರಣ ದಂಡನೆ ಶಿಕ್ಷೆ ಪರಿಷ್ಕರಿಸುವಂತೆ ಕೋರಿ ದೆಹಲಿ ಹೈಕೋರ್ಟ್ಗೂ ಅರ್ಜಿ ಸಲ್ಲಿಸಿದ್ದಾನೆ. ಅಪರಾಧಿಯ ದಯಾ ಅರ್ಜಿ ದೆಹಲಿಯ ಎಲ್ಜಿ ಮತ್ತು ರಾಷ್ಟ್ರಪತಿಗಳ ಎದುರು ಬಾಕಿ ಇರುವಾಗ ಮರಣದಂಡನೆ ಶಿಕ್ಷೆ ಜಾರಿಗೊಳಿಸಲಾಗದು ಎಂಬ ಅಂಶವೂ ಅರ್ಜಿಯಲ್ಲಿದೆ. (ಏಜೆನ್ಸೀಸ್)