ಬೆಂಗಳೂರು: ನಿರ್ಭಯಾ ಗ್ಯಾಂಗ್ರೇಪ್ ಮತ್ತು ಕೊಲೆ ಅಪರಾಧಿಗಳನ್ನು ನೇಣಿಗೇರಿಸುವ ಹ್ಯಾಂಗ್ಮನ್ ಪವನ್ ಜಲ್ಲಾದ್ ಅವರಿಗೆ ಒಂದು ಲಕ್ಷ ರೂ. ದೇಣಿಗೆ ನೀಡುವುದಾಗಿ ಈ ಮೊದಲು ಹೇಳಿದ ಮಾತಿನಂತೆಯೇ ನವರಸ ನಾಯಕ ಜಗ್ಗೇಶ್ ನಡೆದುಕೊಂಡಿದ್ದಾರೆ.
ಹ್ಯಾಂಗ್ಮನ್ ಪವನ್ ಜಲ್ಲಾದ್ ಕುಟುಂಬದವರು ಹಿಂದಿನಿಂದಲೂ ಹ್ಯಾಂಗ್ಮನ್ ಕೆಲಸವನ್ನೇ ಮಾಡುತ್ತ ಬಂದಿದ್ದಾರೆ. ಈಗ ನಿರ್ಭಯಾ ಅಪರಾಧಿಗಳನ್ನು ಗಲ್ಲಿಗೆ ಹಾಕಿರುವ ಪವನ್ ಜಲ್ಲಾದ್, ನಾನು ಅಪರಾಧಿಗಳನ್ನು ಗಲ್ಲಿಗೇರಿಸಲು ಸಿದ್ಧವಾಗಿದ್ದೇನೆ. ಇದು ನನ್ನ ಮಗಳ ಮದುವೆಗೆ ಹಣ ಹೊಂದಿಸುವುದಕ್ಕಾಗಿ ದೇವರೇ ಕೊಟ್ಟ ಅವಕಾಶ ಎಂದು ಭಾವುಕರಾಗಿ ಈ ಮೊದಲು ದೇವರಿಗೆ ನಮಿಸಿದ್ದರು.
ಈ ಬಗ್ಗೆ ವಿಜಯವಾಣಿ ವೆಬ್ಸೈಟ್ (Vijayavani.net)ನಲ್ಲಿ ಜನವರಿ 9ರಂದು ಸುದ್ದಿ ಪ್ರಕಟವಾಗಿತ್ತು. ಸುದ್ದಿಯ ಲಿಂಕ್ನ್ನು ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿ, ಮಾನ್ಯರೇ ರಾಕ್ಷಸ ಸಂಹಾರವೆಂಬುದು ದೇವರ ನಿಯಮ. ಆ ಕಾರ್ಯದಿಂದ ಬರುವ ಹಣದಿಂದ ಮಗಳ ಮದುವೆ ಮಾಡುವೆ ಎಂದು ನೀವು ಹೇಳಿದ್ದು ಕೇಳಿ ಭಾವುಕನಾದೆ. ನೀವೇ ಆ ಪಾಪಿಗಳನ್ನು ನೇಣಿಗೇರಿಸಿದರೆ ನಾನು ನನ್ನ ಕಲೆಯಿಂದ ದುಡಿದ 1 ಲಕ್ಷ ರೂಪಾಯಿಯನ್ನು ದೇಣಿಗೆಯಾಗಿ ನಿಮ್ಮ ಮಗಳ ಮದುವೆಗೆ ನೀಡುವೆ. ಆ ಹಣವನ್ನು ನಿಮಗಾಗಿ ಇಂದೇ ಮೀಸಲಿಟ್ಟಿದ್ದೇನೆ. ದುರುಳ ನಿಗ್ರಹವೂ ದೇವರ ಸೇವೆ…ಹರಿ ಓಂ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದರು.
ಇದೀಗ ಕೊಟ್ಟ ಮಾತಿಗೆ ನಡೆದುಕೊಂಡಿದ್ದು, ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ಜಗ್ಗೇಶ್, ತಮ್ಮ ಸಹಿಯುಳ್ಳ ಒಂದು ಲಕ್ಷ ರೂ. ಚೆಕ್ ಫೋಟೋವನ್ನು ಪೋಸ್ಟ್ ಮಾಡಿ, ಕೊಟ್ಟ ಮಾತಿನಂತೆ 1 ಲಕ್ಷ ರೂ. ಅನ್ನು ನಿರ್ಭಯಾ ಹಂತಕರ ಹ್ಯಾಂಗ್ಮನ್ಗೆ ದೇಣಿಗೆ ನೀಡುತ್ತಿದ್ದೇನೆ ಎಂದಿದ್ದಾರೆ.
ದೇವನೊಬ್ಬನಿರುವ ಅವ ಎಲ್ಲ ನೋಡುತಿರುವ. ಸತ್ಯದ ಹಾದಿಯಲ್ಲಿ ನಡೆದವಗೆ ಭಯವಿಲ್ಲ. ಅಸತ್ಯದ ಮಾರ್ಗಕ್ಕೆ ಶಿಕ್ಷೆ ತಪ್ಪೊಲ್ಲ. ಈ ದಿನಕ್ಕೆ ಹಲ್ಲುಕಚ್ಚಿ ಕಾಯುತ್ತಾ ದುಷ್ಟ ಕ್ರಿಮಿಗಳಿಗೆ ಅಂತ್ಯ ಎಂದು ಕಾಯುತ್ತಿದ್ದೆ. ಸುದ್ದಿ ಕೇಳಲು ನಿದ್ರೆಮಾಡದೆ ಇಡೀ ರಾತ್ರಿ ಕಾದೆ. ಹರಿಓಂ. ಶುಭದಿನ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ಕೊಟ್ಟ ಮಾತಿನಂತೆ 1 ಲಕ್ಷ ರೂ
ನಿರ್ಭಯ ಹಂತಕರ #hangmen ಗೆ
ನನ್ನ ಧೇಣಿಗೆ..
ದೇವನೊಬ್ಬನಿರುವ ಅವ ಎಲ್ಲ ನೋಡುತಿರುವ!
ಸತ್ಯದ ಹಾದಿಯಲ್ಲಿ ನಡೆದವಗೆ ಭಯವಿಲ್ಲಾ!
ಅಸತ್ಯದ ಮಾರ್ಗಕ್ಕೆ ಶಿಕ್ಷೆ ತಪ್ಪೊಲ್ಲಾ!
ಈ ದಿನಕ್ಕೆ ಹಲ್ಲುಕಚ್ಚಿ ಎಂದು ಅಂತ್ಯ ದುಷ್ಟ ಕ್ರಿಮಿಗಳಿಗೆ ಎಂದು ಕಾಯುತ್ತಿದ್ದೆ!
ಸುದ್ಧಿಕೇಳಲು ನಿದ್ರೆಮಾಡದೆ ಕಾದೆ!ಹರಿಓಂ. ಶುಭದಿನ pic.twitter.com/84aJ3XJ76y— ನವರಸನಾಯಕ ಜಗ್ಗೇಶ್ (@Jaggesh2) March 20, 2020
ಇಂದು ಬೆಳಗ್ಗೆ 5.30ಕ್ಕೆ ನಿರ್ಭಯಾ ಅಪರಾಧಿಗಳಾದ ಮುಕೇಶ್ ಕುಮಾರ್ ಸಿಂಗ್, ಪವನ್ ಕುಮಾರ್ ಗುಪ್ತ, ವಿನಯ್ ಕುಮಾರ್ ಶರ್ಮ ಮತ್ತು ಅಕ್ಷಯ್ ಕುಮಾರ್ ಸಿಂಗ್ರನ್ನು ಹ್ಯಾಂಗ್ಮನ್ ಪವನ್ ಜಲ್ಲಾದ್ ತಿಹಾರ್ ಜೈಲಿನಲ್ಲಿ ನೇಣಿಗೇರಿಸಿದರು.
23 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿಯನ್ನು ಡಿಸೆಂಬರ್ 16, 2012ರಂದು ಬಾಲಾಪಾರಾಧಿ ಸೇರಿದಂತೆ ಒಟ್ಟು ಆರು ಮಂದಿ ಮೃಗೀಯವಾಗಿ ಅತ್ಯಾಚಾರವೆಸಗಿ, ಕೊಲೆಗೈದು ವಿಕೃತಿ ಮೆರೆದಿದ್ದರು. ಒಟ್ಟು ಆರು ಅಪರಾಧಿಗಳಲ್ಲಿ ರಾಮ ಸಿಂಗ್ ತಿಹಾರ್ ಜೈಲಿನಲ್ಲೇ 2013 ಮಾರ್ಚ್ನಲ್ಲಿ ಪಾಪಾಪ್ರಜ್ಞೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದ. ಮತ್ತೊಬ್ಬ ಬಾಲಾಪಾರಾಧಿಯನ್ನು ಅಪರಾಧ ನಡೆದ ಮೂರು ವರ್ಷಗಳ ಬಳಿಕ ಬಿಡುಗಡೆ ಮಾಡಲಾಗಿತ್ತು.
ಜೈಲು ವಾಸದ ಅವಧಿಯಲ್ಲಿ ನಿರ್ಭಯಾ ಅಪರಾಧಿಗಳು ಸಂಪಾದಿಸಿದ ಹಣವೆಷ್ಟು? ಎಷ್ಟು ಬಾರಿ ಜೈಲು ನಿಯಮ ಉಲ್ಲಂಘಿಸಿದರು?