ನಟ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರ್ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಚಿತ್ರೀಕರಣ ಚಟುವಟಿಕೆಗಳು ಬಂದ್ ಆಗಿರುವುದರಿಂದ ದಿನಗೂಲಿ ಕಾರ್ಮಿಕರಿಗೆ ಧನ ಸಹಾಯ ಮಾಡುವುದಾಗಿ ಅವರು ಶುಕ್ರವಾರವಷ್ಟೇ ಹೇಳಿದ್ದರು. ಅದರಂತೆ ಶನಿವಾರ ಮಧ್ಯಾಹ್ನದಂದು ಹಿರಿತೆರೆ ಕಾರ್ಮಿಕರಿಗೆ 32 ಲಕ್ಷ ಮತ್ತು ಕಿರುತೆರೆ ಕಾರ್ಮಿಕರಿಗೆ ಐದು ಲಕ್ಷ ರೂಗಳ ಪರಿಹಾರವನ್ನು ಅವರು ನೀಡಿದ್ದಾರೆ.
ಕರೊನಾದಿಂದ ಚಿತ್ರೀಕರಣ ಚಟುವಟಿಕೆಗಳು ಬಂದ್ ಆಗಿರುವುದರಿಂದ ಚಿತ್ರರಂಗವನ್ನೇ ನಂಬಿಕೊಂಡಿರುವ ದಿನಗೂಲಿ ಕಾರ್ಮಿಕರು ಪರದಾಡುತ್ತಿದ್ದಾರೆ. ಕರ್ನಾಟಕ ಚಲನಚಿತ್ರ ಕಾರ್ಮಿಕರ ಮತ್ತು ತಂತ್ರಜ್ಞರ ಒಕ್ಕೂಟದಲ್ಲಿ ಲೈಟ್ ಬಾಯ್ಸ್, ಯೂನಿಟ್ ಬಾಯ್ಸ್, ಫೈಟರ್ಸ್, ಮೇಕಪ್ ಸೇರಿದಂತೆ 15ಕ್ಕೂ ಹೆಚ್ಚು ಸಂಘಗಳು ಮತ್ತು ಸಾವಿರಾರು ಕಾರ್ಮಿಕರು ಇದ್ದಾರೆ. ಆ ಸಂಬಂಧಪಟ್ಟ ಸಂಘಗಳಿಗೆ ನಿಖಿಲ್ ಕುಮಾರ್ ಚೆಕ್ಗಳನ್ನು ವಿತರಿಸಿದ್ದು, ಸದ್ಯದಲ್ಲೇ ಈ ಸಂಘಗಳ ಕಾರ್ಮಿಕರಿಗೆ ಅಕೌಂಟ್ಗಳಿಗೆ ನೇರವಾಗಿ ಹಣ ಜಮೆಯಾಗಲಿದೆ. ಸಂಬಂಧಪಟ್ಟ ಸಂಘಗಳಿಗೆ ಹಿರಿಯ ನಿರ್ಮಾಪಕ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಮೂಲಕ ನಿಖಿಲ್ ಚೆಕ್ಗಳನ್ನು ತಲುಪಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿಖಿಲ್, ‘ಎಲ್ಲಾ ಬಾಗಿಲುಗಳು ಮುಚ್ಚಿರುವ ಈ ಸಂದರ್ಭದಲ್ಲಿ ಸಿನಿಮಾವನ್ನೇ ನಂಬಿ ಬದುಕುತ್ತಿದ್ದ ಹಲವು ಸಿನಿಮಾ ಕಾರ್ಮಿಕರು ಇಂದು ಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಇಂತಹವರಿಲ್ಲದೇ ಸಿನಿಮಾ ಇಲ್ಲ, ನಾನೂ ಇಲ್ಲ. ಆದ್ದರಿಂದ ನನ್ನ ಪ್ರೀತಿಯ ಸಿನಿಮಾರಂಗದ ಕೆಲಸಗಾರರ ಖಾತೆಗೆ ನೇರವಾಗಿ ಧನ ಸಹಾಯ ಮಾಡುವ ನಿರ್ಧಾರಕ್ಕೆ ಬಂದಿದ್ದೇನೆ. ಆದಷ್ಟು ಸಹಾಯ ಮಾಡೋಣ, ಒಟ್ಟಾಗಿ ಬದುಕೋಣ’ ಎಂದು ಹೇಳಿದ್ದಾರೆ.
ಲಾಕ್ಡೌನ್ ಸಂದರ್ಭದಲ್ಲಿ ನೀವೇನು ಮಾಡಬಹುದು? ಡಿಬಾಸ್ ನೀಡಿದ್ದಾರೆ ಸಣ್ಣ ಟಿಪ್ಸ್!