ಮಂಗಳೂರು: ಮತ್ತೆ ನೈಟ್ ಕರ್ಫ್ಯೂ ಹೇರಿರುವ ಹಿನ್ನೆಲೆಯಲ್ಲಿ ಯಕ್ಷಗಾನ ಮೇಳ, ಕಲಾವಿದರು ಕಂಗೆಟ್ಟಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಮೇಳಗಳ ಗತಿ ಚಿಂತಾಜನಕವಾಗಿತ್ತು. ಎರಡು ವರ್ಷವೂ ಮೇಳ ಸೀಸನ್ಗೆ ಮೊದಲೇ ಆಟ ಮುಗಿಸುವಂತಾಗಿದ್ದರೆ ತಿರುಗಾಟ ಪ್ರಾರಂಭವೂ ವಿಳಂಬಗೊಂಡಿತ್ತು. ಕಲಾವಿದರ ಆರ್ಥಿಕ ಸ್ಥಿತಿಗೂ ಹೊಡೆತ ಬಿದ್ದಿತ್ತು.
ಈ ಬಾರಿ ತಡವಾದರೂ ಹೆಚ್ಚಿನ ಉತ್ಸಾಹದಿಂದ ಹೆಚ್ಚಿನ ಮೇಳಗಳೂ ತಿರುಗಾಟ ಆರಂಭಿಸಿದ್ದವು. ಆದರೆ ಈಗ ಜನವರಿ 7ರ ವರೆಗೆ ನೈಟ್ ಕರ್ಫ್ಯೂ ಹೇರಿರುವುದರಿಂದಾಗಿ ಹೆಚ್ಚಿನ ಮೇಳಗಳ ಬಯಲಾಟ ಪ್ರದರ್ಶನದಲ್ಲಿ ಏರುಪೇರಾಗುತ್ತಿದೆ.
ಕಟೀಲು ದುರ್ಗಾಪರಮೇಶ್ವರಿ ಮೇಳದವರು ತಮ್ಮ ಸೇವಾ ಬಯಲಾಟವನ್ನು ಮಧ್ಯಾಹ್ನ 3.30ರಿಂದ ನಡೆಸಲು ಮುಂದಾಗಿದ್ದಾರೆ. ಇನ್ನು ಕೆಲವು ಮೇಳಗಳು ತೀರ್ಮಾನ ತೆಗೆದುಕೊಳ್ಳಬೇಕಿದೆ. ಕಾಲಮಿತಿ ಮೇಳದವರು ರಾತ್ರಿ 12ರ ವರೆಗೆ ಆಟ ನಡೆಸುತ್ತಿದ್ದವರು 10 ಗಂಟೆಯೊಳಗೆ ಮುಗಿಸುವಂತಾಗಿದ್ದು ಬಯಲಾಟ ಸಂಘಟಕರಿಗೆ, ಮೇಳದ ಆಡಳಿತದವರಿಗೆ ತಲೆನೋವಾಗಿ ಪರಿಣಮಿಸಿದೆ.