ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟದ ಶಂಕಿತರ ಹೊಸ ಸಿಸಿಟಿವಿ ವಶಗಳನ್ನು ಎನ್ಐಎ ಬಿಡುಗಡೆ ಮಾಡಿದೆ, ಪ್ರತಿ ಆರೋಪಿಯ ಮಾಹಿತಿಗೆ 10 ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ
ಇದನ್ನೂ ಓದಿ: ಅಬಕಾರಿ ನೀತಿ ಪ್ರಕರಣ: ಇಡಿ ಕಚೇರಿಯಲ್ಲಿ ದೆಹಲಿ ಸಚಿವ ಕೈಲಾಶ್ ಗಹ್ಲೋಟ್ ತನಿಖೆ!
ಮಾರ್ಚ್ 1 ರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟದಲ್ಲಿ ಭಾಗಿಯಾಗಿರುವ ಪ್ರಮುಖ ಶಂಕಿತನ ಫೋಟೋಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಶುಕ್ರವಾರ ಬಿಡುಗಡೆ ಮಾಡಿದೆ. ಚೆನ್ನೈನ ಬಟ್ಟೆ ಅಂಗಡಿಯಲ್ಲಿ ಆರೋಪಿ ಶಾಪಿಂಗ್ ಮಾಡುತ್ತಿದ್ದ ಸಂದರ್ಭ ಸಂಗ್ರಹಿಸಲಾದ ಸಿಸಿಟಿವಿ ದೃಶ್ಯಾವಳಿಗಳಿಂದ ಸೆರೆಹಿಡಿಯಲಾದ ಶಂಕಿತರ ಫೋಟೋಗಳನ್ನು ತನಿಖಾ ಸಂಸ್ಥೆ ಬಿಡುಗಡೆ ಮಾಡಿದೆ.
ಬಟ್ಟೆ ಅಂಗಡಿ ಬಳಿ ಇಬ್ಬರು ಆರೋಪಿಗಳು ಪತ್ತೆಯಾಗಿದ್ದು, ಇವರ ಬಂಧನಕ್ಕೆ ಮಾಹಿತಿ ನೀಡಿದವರಿಗೆ ತಲಾ 10 ಲಕ್ಷ ರೂಪಾಯಿ ಬಹುಮಾನವನ್ನು ಘೋಷಿಸಿದೆ.
ಬೆಂಗಳೂರಿನ ಕೆಫೆಯಲ್ಲಿ ಐಇಡಿ ಅಳವಡಿಸಿದ ವ್ಯಕ್ತಿಯನ್ನು ಕರ್ನಾಟಕದ ನಿವಾಸಿ ಮುಸ್ಸಾವಿರ್ ಹುಸೇನ್ ಶಾಜಿಬ್ (30) ಎಂದು ಗುರುತಿಸಲಾಗಿದೆ. ಕೆಫೆಯಲ್ಲಿನ ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಬಳ್ಳಾರಿಯ ಬಸ್ ನಿಲ್ದಾಣದ (ಮಾ.1ರಂದು) ಅವನು ಧರಿಸಿದ್ದ ಕ್ಯಾಪ್ ಪತ್ತೆ ಹಚ್ಚಿದ್ದು, ಅದನ್ನು ಚೆನ್ನೈ ಮಾಲ್ನಲ್ಲಿ ಜನವರಿ 29 ರಂದು ಖರೀದಿಸಲಾಗಿದೆ. ಆರೋಪಿ ಶಾಜಿಬ್ ಬಟ್ಟೆ ಅಂಗಡಿಯಲ್ಲಿ ಬಟ್ಟೆ ಖರೀದಿಗೆ ಹಣ ಪಾವತಿಸುತ್ತಿರುವುದನ್ನು ದೃಶ್ಯಾವಳಿಗಳಲ್ಲಿ ಕಾಣಬಹುದಾಗಿದೆ.
Request for Information, Identity of the Informer will be kept Secret. pic.twitter.com/JkMUWay23m
— NIA India (@NIA_India) March 29, 2024
ಶಾಜಿಬ್ನ ಸಹಚರನನ್ನು ಅಬ್ದುಲ್ ಮಥೀನ್ ತಾಹಾ (30) ಎಂದು ಗುರುತಿಸಲಾಗಿದ್ದು, ಇವನು ಸಹ ರಾಜ್ಯದ ನಿವಾಸಿಯಾಗಿದ್ದು, ಭಯೋತ್ಪಾದನೆ ಕೃತ್ಯಗಳಿಗೆ ಸಂಬಂಧಿಸಿ 2020 ರಿಂದ ಪರಾರಿಯಾಗಿದ್ದಾನೆ.
ಶಾಜಿಬ್ ಮತ್ತು ತಾಹಾ ಬಂಧನಕ್ಕೆ 10 ಲಕ್ಷ ರೂಪಾಯಿ ಬಹುಮಾನವನ್ನು ಘೋಷಿಸಿದ ಎನ್ಐಎ ತನ್ನ ನೋಟಿಸ್ನಲ್ಲಿ ಶಂಕಿತರು ನಕಲಿ ಗುರುತುಗಳನ್ನು ಬಳಸುತ್ತಿದ್ದಾರೆ ಎಂದು ಸೂಚಿಸಿದೆ.
ತನಿಖಾ ಏಜೆನ್ಸಿಯ ಪ್ರಕಾರ, ತಾಹಾ ಫೆಬ್ರವರಿಯಲ್ಲಿ ಚೆನ್ನೈನ ವಸತಿ ಸೌಲಭ್ಯದಲ್ಲಿ “ವಿಘ್ನೇಶ್” ಮತ್ತು “ಸುಮಿತ್” ಎಂಬ ನಕಲಿ ಆಧಾರ್ ಮತ್ತು ಇತರ ರೀತಿಯ ಐಡಿಗಳನ್ನು ಬಳಸುತ್ತಿದ್ದ. ಶಾಜಿಬ್ ಚೆನ್ನೈನಲ್ಲಿ ಮೊಹಮ್ಮದ್ ಜುನೇದ್ ಸಯೀದ್ ಹೆಸರಿನಲ್ಲಿ ನಕಲಿ ಚಾಲನಾ ಪರವಾನಗಿಯನ್ನು ಬಳಸುತ್ತಿದ್ದ ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ.
ರಾಮೇಶ್ವರಂ ಕೆಫೆಯಿಂದ ಮೂರು ಕಿ.ಮೀ ದೂರದಲ್ಲಿ ಶಾಜಿಬ್ ಚೆನ್ನೈ ಸ್ಟೋರ್ನಲ್ಲಿ ಖರೀದಿಸಿದ ಬೇಸ್ಬಾಲ್ ಕ್ಯಾಪ್ ಅನ್ನು ಬಿಟ್ಟಿರುವುದು ಕಂಡುಬಂದಿದೆ. ಮಾರ್ಚ್ 1 ರಂದು ಸ್ಫೋಟದ ದಿನದಂದು ಶಂಕಿತ ವ್ಯಕ್ತಿಯು ಕ್ಯಾಪ್ ಧರಿಸಿ ಕೆಫೆಯ ಸುತ್ತಲೂ ಸಂಚರಿಸಿರುವ ಮಾಹಿತಿ ಇದೆ ಎಂದು ಎನ್ಐಎ ಪ್ರಕಟಣೆಯಲ್ಲಿ ವಿವರಿಸಲಾಗಿದೆ.
ಬೇಸ್ಬಾಲ್ ಕ್ಯಾಪ್ನ ಜಾಡು ಹಿಡಿದು ಹೊರಟ ತನಿಖಾಧಿಕಾರಿಗಳನ್ನು ಚೆನ್ನೈ ಬಟ್ಟೆ ಅಂಗಡಿಯಲ್ಲಿ ಕ್ಯಾಪ್ ಖರೀದಿಸಿರುವ ತನಕ ತಂದು ನಿಲ್ಲಿಸಿದೆ. ಅಂಗಡಿ ಮತ್ತು ಮಾಲ್ನ ಸಿಸಿಟಿವಿ ದೃಶ್ಯಾವಳಿಗಳು ಶಂಕಿತರ ದೃಢವಾದ ಗುರುತನ್ನು ಎನ್ಐಎಗೆ ಒದಗಿಸಿವೆ. ಅಂಗಡಿಯಲ್ಲಿನ ಸಿಸಿಟಿವಿಯು 45 ದಿನಗಳ ಬ್ಯಾಕ್ಅಪ್ ಹೊಂದಿತ್ತು, ಇದು ತನಿಖಾಧಿಕಾರಿಗಳಿಗೆ ಸಹಾಯ ಮಾಡಿದೆ.
ಸ್ಫೋಟದಲ್ಲಿ ಬಳಸಲಾದ ಐಇಡಿ ತಯಾರಿಕೆಗೆ ಸಹಕರಿಸಿದ್ದಕ್ಕಾಗಿ ಬೆಂಗಳೂರಿನ ಉತ್ತರದ ರೆಸ್ಟೋರೆಂಟ್ನಲ್ಲಿ ಮ್ಯಾನೇಜರ್ ಆಗಿರುವ ಮುಝಮ್ಮಿಲ್ ಶರೀಫ್(30) ನನ್ನು ಬಂಧಿಸಿರುವುದಾಗಿ ಎನ್ಐಎ ಗುರುವಾರ ಪ್ರಕಟಿಸಿತ್ತು.
“ಮುಖ್ಯ ಆರೋಪಿ ಬೆಂಗಳೂರಿನಲ್ಲಿ ಆಶ್ರಯ ಪಡೆದಿರಲಿಲ್ಲ. ಅವನು ಮಾರ್ಚ್ 1 ರಂದು ಬೆಳಗ್ಗೆ ಆಗಮಿಸಿ ಕೆಫೆಯಲ್ಲಿ ಬಾಂಬ್ ಇಟ್ಟು ಅದೇ ದಿನ ಹೊರಟು ಹೋಗಿದ್ದಾನೆ ಎಂದು ತನಿಖೆಯ ಮೂಲಗಳು ತಿಳಿಸಿವೆ.
ಎನ್ಐಎ ಪ್ರಕಾರ, ಶಾಜಿಬ್ ಮತ್ತು ತಾಹಾ ಇಸ್ಲಾಮಿಕ್ ಸ್ಟೇಟ್ನ ಶಿವಮೊಗ್ಗ ಘಟಕದ ಭಾಗವಾಗಿದ್ದಾರೆ. 2020 ರಿಂದ ಇವರ ವಿರುದ್ಧ ನಾಲ್ಕು ಪ್ರತ್ಯೇಕ ಭಯೋತ್ಪಾದನಾ ಪ್ರಕರಣಗಳನ್ನು ದಾಖಲಿಸಲಾಗಿದೆ. 30 ಕ್ಕೂ ಹೆಚ್ಚು ಸದಸ್ಯರನ್ನು ಬಂಧಿಸಿದ ನಂತರ ಇವರ ಹೆಸರುಗಳು ಜನವರಿ 2020 ರಲ್ಲಿ ಮೊದಲು ಬೆಳಕಿಗೆ ಬಂದವು. ಇಸ್ಲಾಮಿಕ್ ಸ್ಟೇಟ್ನ ಸಿದ್ಧಾಂತಕ್ಕೆ ಇವರು ಕಟಿಬದ್ದರಾಗಿದ್ದಾರೆ ಎನ್ನಲಾಗಿದೆ.